ಮಂಗಳೂರಿನ ಪ್ರಪ್ರಥಮ ಸರಕಾರಿ ಡಿಜಿಟಲ್ ಫಲಕಕ್ಕೆ  ಸಚಿವ ಬಿ. ರಮಾನಾಥ ರೈ  ಅವರಿಂದ ಚಾಲನೆ

Spread the love

ಮಂಗಳೂರಿನ ಪ್ರಪ್ರಥಮ ಸರಕಾರಿ ಡಿಜಿಟಲ್ ಫಲಕಕ್ಕೆ  ಸಚಿವ ಬಿ. ರಮಾನಾಥ ರೈ  ಅವರಿಂದ ಚಾಲನೆ

ಮಂಗಳೂರಿನ ಪ್ರಪ್ರಥಮ ಸರಕಾರಿ  ಡಿಜಿಟಲ್ ಎಲ್‍ಇಡಿ ಫಲಕವನ್ನು ಮಾನ್ಯ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ, ಮಾತನಾಡಿ,   ರಾಜ್ಯ ಸರಕಾರದ ವಿವಿಧ ಯೋಜನೆಗಳ ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿವಿಧ ಮಾದರಿಯ ಕಾರ್ಯಕ್ರಮಗಳನ್ನು ಮತ್ತು ಸಂವಹನ ಮಾಧ್ಯಮಗಳನ್ನು ತಂತ್ರಜ್ಞಾನವನ್ನು ಬಳಸುತ್ತಿದೆ.

ಇದರ ಮುಂದುವರಿದ ಭಾಗವಾಗಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಜಿಟಲ್ ಎಲ್‍ಇಡಿ ಮಾದರಿಯ ಫಲಕವನ್ನು ಮಂಗಳೂರು ನಗರದ ಪ್ರಮುಖ ಜನಸಂದಣಿಯ ಪ್ರದೇಶವಾಗಿರುವ  ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದದ ಮುಂಭಾಗದಲ್ಲಿ  ಅಳವಡಿಸಲಾಗಿದೆ. ದೇಶದಲ್ಲೇ ಕರ್ನಾಟಕ ರಾಜ್ಯ ಸರಕಾರವು ಡಿಜಿಟಲ್ ಫಲಕಗಳನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿದೆ.

ರಾಜ್ಯ ಸರಕಾರದ ಈ ಡಿಜಿಟಲ್ ಫಲಕವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಲು ಮಾನ್ಯ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಮಂಗಳೂರು ಮಹಾನಗರಪಾಲಿಕೆಯಿಂದಲೂ ಅನುಮತಿ ಪಡೆಯಲಾಗಿದೆ.

ಕರ್ನಾಟಕದ 10 ಜಿಲ್ಲಾ ಕೇಂದ್ರಗಳಲ್ಲಿ ಈ ಡಿಜಿಟಲ್ ಫಲಕ ಅಳವಡಿಸಲಾಗುತ್ತಿದೆ.  ಈ ಡಿಜಿಟಲ್ ಫಲಕವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ. ಫಲಕದಲ್ಲಿ ಬರುವ ಸಮಗ್ರ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ವಾರ್ತಾ ಇಲಾಖೆಯ ಕೇಂದ್ರ ಕಚೇರಿಯಿಂದ ನಿರ್ವಹಿಸಲಾಗುತ್ತಿದೆ. ಪ್ರಚಾರದ ಫಲಕದ ಸಂಪೂರ್ಣ ನಿರ್ವಹಣೆಯನ್ನು ‘ಜೇಂಕಾರ್ ಅಡ್ವರ್ಟೈಸರ್ಸ್, ಬೆಂಗಳೂರು’ ಇವರು ವಹಿಸಿಕೊಂಡಿರುತ್ತಾರೆ. ಈ ಫಲಕದ ಅಂದಾಜು ನಿರ್ಮಾಣ ವೆಚ್ಚ ರೂ. 32 ಲಕ್ಷ ಆಗಿರುತ್ತದೆ.

ಈ ಡಿಜಿಟಲ್ ಫಲಕ ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಪ್ರತೀ ದಿನ 30 ಯುನಿಟ್ ವಿದ್ಯುತ್ ಶಕ್ತಿ ಇದಕ್ಕೆ ಅಗತ್ಯವಿದೆ. ಅಲ್ಲದೇ ನಿರಂತರ ಇಂಟರ್‍ನೆಟ್ ಸಂಪರ್ಕವೂ ಇದರ ಕಾರ್ಯಾಚರಣೆಗೆ ಅಗತ್ಯವಿದೆ.

ರಾಜ್ಯ ಸರಕಾರದ ವಿವಿಧ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ ಸೇರಿದಂತೆ ಪ್ರಮುಖ ಯೋಜನೆಗಳ ಬಗ್ಗೆ ಈ ಫಲಕದಲ್ಲಿ ಮಾಹಿತಿ ನೀಡಲಾಗುವುದು. ಇದಲ್ಲದೇ, ಸಂದರ್ಭಾನುಸಾರ ಆಯಾ ಕಾಲಕ್ಕೆ ತಕ್ಕಂತೆ ಮಾಹಿತಿಗಳನ್ನು ಪ್ರಸಾರ ಮಾಡಲಾಗುವುದು. ಸ್ಥಳೀಯವಾಗಿ ಜಿಲ್ಲೆಯ ಪ್ರಮುಖ ಕಾರ್ಯಕ್ರಮಗಳ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗುವುದು.

ಈಗಾಗಲೆ ಸ್ಮಾರ್ಟ್‍ಸಿಟಿ ಎಂದು ಘೋಷಿಸಲ್ಪಟ್ಟಿರುವ ಮಂಗಳೂರು ನಗರಕ್ಕೆ ಈ ಡಿಜಿಟಲ್ ಸರಕಾರಿ ಹೋರ್ಡಿಂಗ್ ಒಂದು ಕೊಡುಗೆಯಾಗಿದೆ.


Spread the love