ಮಂಗಳೂರು | ಗೃಹಸಚಿವ ಡಾ. ಪರಮೇಶ್ವರ್ ಅವರಿಂದ ವಿಶೇಷ ಕಾರ್ಯಪಡೆ ಘಟಕ ಉದ್ಘಾಟನೆ

Spread the love

ಮಂಗಳೂರು | ಗೃಹಸಚಿವ ಡಾ. ಪರಮೇಶ್ವರ್ ಅವರಿಂದ ವಿಶೇಷ ಕಾರ್ಯಪಡೆ ಘಟಕ ಉದ್ಘಾಟನೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ದ.ಕ., ಉಡುಪಿ ಮತ್ತು ಶಿವಮೊಗ್ಗಕ್ಕೆ ಸೀಮಿತವಾಗಿ ಕೋಮು ಸಂಘರ್ಷಗಳನ್ನು ಮಟ್ಟ ಹಾಕಲು ವಿಶೇಷ ಕಾರ್ಯಪಡೆ ಆರಂಭಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಈ ಪಡೆಯ ಅಗತ್ಯ ಬೀಳದು. ಒಂದು ವೇಳೆ ಅಗತ್ಯ ಬಿದ್ದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೂತನ ‘ವಿಶೇಷ ಕಾರ್ಯಪಡೆ’ಗೆ ಚಾಲನೆ ನೀಡಿ ಬಳಿಕ ಪೊಲೀಸ್ ವಸತಿ ಗೃಹ ಉದ್ಘಾಟನೆ ನೆರವೇರಿಸಿದ ಬಳಿಕ ಅವರು ನಗರದ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲೇ ನಮ್ಮ ರಾಜ್ಯದಲ್ಲಿ ಪ್ರಥಮವಾಗಿ ಕೋಮು ಸಂಘರ್ಷ ಹತ್ತಿಕ್ಕುವುದಕ್ಕಾಗಿ ವಿಶೇಷ ಕಾರ್ಯ ಪಡೆ ರಚನೆಯಾಗಿದೆ. ಈ ಭಾಗದಲ್ಲಿ ಶಾಂತಿ ಸ್ಥಾಪಿಸಿ ಕೋಮು ಸಾಮರಸ್ಯ ಪುನರ್ ರಚಿಸುವುದು ಇದರ ಉದ್ದೇಶ. ಈ ಭಾಗದಲ್ಲಿ ಶಾಂತಿ ನೆಲೆಸಿದರೆ ಇಡೀ ರಾಜ್ಯದಲ್ಲಿ ಶಾಂತಿ ಇರುತ್ತದೆ. ಹಾಗಾಗಿ ಈ ಪಡೆಯ ಮೂಲಕ ಇಲ್ಲಿಗೇ ಈ ಮತೀಯ ಘರ್ಷಣೆಗಳು ಕೊನೆಯಾಗಲಿ. ಉಳಿದ ಜಿಲ್ಲೆಗಳಲ್ಲಿ ಈ ಪಡೆಯ ಅಗತ್ಯ ಬೀಳದು. ಇಲ್ಲಿಯೂ ಹೆಚ್ಚು ಕಾಲ ಈ ಪಡೆಯ ಅಗತ್ಯ ಬೀಳದಿರಲಿ ಎಂಬ ವಿಶ್ವಾಸವಿದೆ ಎಂದವರು ಹೇಳಿದರು.

ದ.ಕ. ಜಿಲ್ಲೆ ಸುಸಂಸ್ಕೃತ ಜಿಲ್ಲೆ. ರಾಜ್ಯದಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗೆ ದ.ಕ. ಜಿಲ್ಲೆಯ ಕೊಡುಗೆ ಅಪಾರ. ಆದರೆ ಕೆಲ ಕಾರಣಗಳಿಂದ ಜಿಲ್ಲೆಯಲ್ಲಿ ದ್ವೇಷ ಭಾವನೆ ಹೆಚ್ಚಾಗಿದೆ. ಇದನ್ನು ಹತ್ತಿಕ್ಕದೆ ಹೋದರೆ ಇದು ಬೇರೆ ಭಾಗಕ್ಕೂ ವಿಸ್ತರಿಸುವ ಅಪಾಯ ಇದೆ ಎಂದು ಅನ್ನಿಸಿ ಅಂದು ಕೋಮು ನಿಗ್ರಹ ದಳ ಸ್ಥಾಪನೆಗೆ ತಿಳಿಸಿದ್ದೆ. ಆದರೆ ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆಗಳ ಸಂದರ್ಭ ಭೇಟಿ ನೀಡಿದಾಗ ಇಲ್ಲಿ ವಿಶೇಷ ಕಾರ್ಯ ಪಡೆ ರಚಿಸುವ ಅಗತ್ಯತೆ ಕಂಡು ಬಂತು. ಈಗಾಗಲೇ ನಕ್ಸಲರು ಶರಣಾಗತರಾಗಿ ನಕ್ಸಲ್ ನಿಗ್ರಹ ಪಡೆಗೆ ಹೆಚ್ಚಿನ ಕೆಲಸವಿಲ್ಲ. ಅದಕ್ಕಾಗಿ ನಕ್ಸಲ್ ನಿಗ್ರಹ ಪಡೆಯನ್ನು ಬಳಸಿಕೊಂಡು ಅದೇ ಮಾದರಿಯಲ್ಲಿ ವಿಶೇಷ ಕಾರ್ಯ ಪಡೆಗೆ ಸರಕಾರ ತೀರ್ಮಾನಿಸಿ ರೂಪುರೇಷೆ ಸಿದ್ಧಪಡಿಸಿದೆ. ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಸಿಬ್ಬಂದಿ ಈಗಾಗಲೇ ಈ ರೀತಿಯ ಸಂಘರ್ಷಗಳನ್ನು ನಿಗ್ರಹಿಸುವಲ್ಲಿ ಅಗತ್ಯ ತರಬೇತಿಗಳನ್ನು ಪಡೆದಿದ್ದಾರೆ. ಇದೀಗ ಮತೀಯ ವಿಚಾರಧಾರೆಗೆ ಪ್ರಚೋದನೆ, ಸಮಾಜದಲ್ಲಿ ಅಶಾಂತಿ ಸ್ಥಾಪಿಸುವ ಜನ ಹಾಗೂ ಸಮುದಾಯವನ್ನು ಹತ್ತಿಕ್ಕುವ ಕೆಲಸ ವಿಶೇಷ ಕಾರ್ಯಪಡೆಗೆ ನೀಡಲಾಗುತ್ತಿದೆ. ಇದು ಯಶಸ್ವಿಯಾಗುವ ವಿಶ್ವಾಸ ಇದೆ ಎಂದವರು ಹೇಳಿದರು.

ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವವರ ವಿರುದ್ಧ ಈವರೆಗೆ ಮೃದುವಾಗಿ ನಿಭಾಯಿಸಲಾಗಿದೆ. ಆದರೆ ನಮ್ಮ ಮಾತುಗಳು ಅವರ ಕಿವಿಗೆ ಹೋಗಿಲ್ಲ. ಆ ಕಾರಣಕ್ಕಾಗಿ ಇದೀಗ ಪಡೆಯ ಬಳಕೆ ಮಾಡಲಾಗುತ್ತಿದೆ. ಜನ ಸಮುದಾಯ ಈ ಪಡೆಗೆ ಕೆಲಸ ನೀಡಬಾರದು ಎಂಬುದು ನನ್ನ ಮನವಿ. ನೀವಾಗಿಯೇ ಶಾಂತಿ ಕಾಪಾಡಿದರೆ, ಕೋಮು ಸೌಹಾರ್ದ ಇದ್ದರೆ ಇವರಿಗೆ ಕೆಲಸ ಇರದು. ಆದರೆ ಅದನ್ನು ಮುಂದುವರಿಸಿದರೆ ಈ ಪಡೆಯ ಕೆಲಸ ಹೆಚ್ಚಾಗಲಿದೆ. ಅದಕ್ಕೆ ಅವಕಾಶ ನೀಡದಿರಿ ಎಂದು ಅವರು ಜನತೆಗೆ ಈ ಸಂದರ್ಭ ಮನವಿ ಮಾಡಿದರು.

ಸದ್ಯ ಪಡೆಯು 248 ಸಿಬ್ಬಂದಿ ಬಲದೊಂದಿಗೆ ಮೂರು ತುಕಡಿಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಡಿಜಿಯವರು ಈಗಾಗಲೇ ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಅಗತ್ಯ ಬಿದ್ದರೆ ಸಂಖ್ಯಾಬಲ ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಶಾಂತಿ ಮರುಸ್ಥಾಪನೆಯಾಗಲಿ ಎಂಬುದು ಸರಕಾರದ ಆಶಯ ಎಂದು ಗೃಹ ಸಚಿವರು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ, ಕೋಮು ಸಂಘರ್ಷ ಹತ್ತಿಕ್ಕುವ ಸಲುವಾಗಿ ದ.ಕ., ಉಡುಪಿ ಮತ್ತು ಶಿವಮೊಗ್ಗವನ್ನು ಕೇಂದ್ರೀಕರಿಸಿಕೊಂಡು ರಾಜ್ಯ ಸರಾಕರ ಸ್ಥಾಪಿಸಿರುವ ವಿಶೇಷ ಕಾರ್ಯಪಡೆ ದೇಶದಲ್ಲೇ ಪ್ರಥಮವಾಗಿದೆ. ಇದು ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಲಿ. ಒಂದೂವರೆ ತಿಂಗಳಲ್ಲಿ ಈ ಪಡೆಯನ್ನು ರಾಜ್ಯ ಸರಕಾರ ರಚಿಸಿದೆ ಎಂದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್. ಮುರುಗನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಡಾ.ಅರಣ್ ಕುಮಾರ್, ಜಿಪಂ ಸಿಇಒ ಡಾ.ಆನಂದ್, ವಿವಿಧ ಅಕಾಡಮಿ ಹಾಗೂ ನಿಗಮಗಳ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಸಂಸದರು ಈ ಸಂದರ್ಭ ಉಪಸ್ಥಿತರಿದ್ದರು.

ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ವಾಗತಿಸಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments