ಮಂಗಳೂರು ತಾಲೂಕು: ವಿವಿದೆಡೆ ಮಳೆ ಹಾನಿ
ಭಾರೀ ಮಳೆಗೆ ಜೂನ್ 16 ರಂದು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ವಿವಿದೆಡೆ ಹಾನಿ ಸಂಭವಿಸಿದೆ.
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆ- ಬಜ್ಪೆಯಿಂದ ಅದ್ಯಪಾಡಿಗೆ ಹೋಗುವ ಬೈಲು ಬೀಡು ರಸ್ತೆಯಲ್ಲಿ ಮಳೆನೀರು ಇಂಗೀ ರಸ್ತೆಯಲ್ಲಿ ಬಿರುಕು ಮೂಡಿದ್ದು, ರಸ್ತೆಯಲ್ಲಿ ಉಬ್ಬುತಗ್ಗುಗಳಾಗಿರುವುದರಿಂದ ಪಂಚಾಯತ್ ರಾಜ್ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಈ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮೇರ್ಲಪದವು- ಅಡ್ಯಾರ್ ಪದವು ಕಾಂಕ್ರೀಟ್ ರಸ್ತೆಯ ತಳಭಾಗದಲ್ಲಿ ಮಣ್ಣು ಕೊಚ್ಚಿಹೋಗಿದ್ದು, ರಸ್ತೆಯಲ್ಲಿ ಬಿರುಕು ಮೂಡಿ ರಸ್ತೆ ಕುಸಿಯುವ ಸಂಭವವಿರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದಲ್ಲಿ ನಂದಿನಿ ನದಿ ನೀರು ತುಂಬಿ ಹರಿಯುತ್ತಿರುವುದರಿಂದ ಕೃತಕ ನೆರೆ ಉಂಟಾಗಿ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ 3 ಕುಟುಂಬದವರನ್ನು ಸ್ಥಳಾಂತರಗೊಳಿಸಲಾಗಿದೆ.
ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ಮಂಜೂರು ಗ್ರಾಮದಲ್ಲಿ ಕೃತಕ ನೆರೆ ಉಂಟಾಗಿ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿರುತ್ತದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೇಬೈಲು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಒಂದು ಸಂಪೂರ್ಣ ಹಾಗೂ 2 ಭಾಗಶಃ ಮನೆಹಾನಿಯಾಗಿರುತ್ತದೆ.
ಮಂಗಳೂರು ತಾಲೂಕು ವ್ಯಾಪ್ತಿಯ ಅತ್ತಾವರ, ಅರ್ಕುಳ, ಮೂಳೂರು ಹಾಗೂ ಪಡುಕೋಡಿ ಗ್ರಾಮದಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿರುತ್ತದೆ. ಮೂಳೂರು ಗ್ರಾಮದ ವಿಕಾಸ ನಗರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾರೀ ಮಳೆಯಿಂದಾಗಿ 3 ಮನೆಗಳಿಗೆ ನೀರು ನುಗ್ಗಿರುತ್ತದೆ.
ಕಣ್ಣೂರು ಗ್ರಾಮದ ದಯಂಬು ಎಂಬಲ್ಲಿ ಗುಡ್ಡ ಕುಸಿತದಿಂದಾಗಿ ಮಳೆನೀರು ಹಾಗೂ ಮಣ್ಣು ಮನೆಗೆ ನುಗ್ಗಿದ್ದರಿಂದ 2 ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ.
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಜೀವಹಾನಿ ಹಾಗೂ ಜಾನುವಾರು ಹಾನಿಯಾಗಿಲ್ಲ ಎಂದು ಮಂಗಳೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.