ಮಂಗಳೂರು: ದಕ್ಷ ಅಧಿಕಾರಿ ಇನ್ಸ್‍ಪೆಕ್ಟರ್ ಪ್ರಮೋದ್ ವರ್ಗಾವಣೆಗೆ ಮರಳು ಮಾಫಿಯದ ಹುನ್ನಾರ – ಡಿವೈಎಫ್‍ಐ

Spread the love

ಮಂಗಳೂರು: ಗ್ರಾಮಾಂತರ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿರುವ ದಕ್ಷ, ಪ್ರಾಮಾಣಿಕ ಅಧಿಕಾರಿ ಪ್ರಮೋದ್ ಅವರನ್ನು ವರ್ಗಾಯಿಸಲು ಮರಳು ಮಾಫಿಯಾದ ಸಹಿತ ಠಾಣಾ ವ್ಯಾಪ್ತಿಯ ಸ್ಥಾಪಿತ ಹಿತಾಶಕ್ತಿಗಳು ಮುಖ್ಯಮಂತ್ರಿಯ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದು ಈ ಲಾಭಿಯ ನೇತೃತ್ವವನ್ನು ಗ್ರಾಮಾಂತರ ಠಾಣಾ ವ್ಯಾಪ್ತಿಯ ಇಬ್ಬರು ಶಾಸಕರು ವಹಿಸಿರುವುದು ಖಂಡನೀಯ ಎಂದು ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ ಪ್ರಮೋದ್ ವರ್ಗಾವಣೆ ಯತ್ನವನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಸ್ಥಳೀಯ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಡಿವೈಎಫ್‍ಐ ತಿಳಿಸಿದೆ.

ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಡ್ಯಾರ್, ಕಣ್ಣೂರು, ವಳಚ್ಚಿಲ್, ಜಿಲ್ಲೆಯ ಮರಳು ಮಾಫಿಯಾದ ಕೇಂದ್ರವಾಗಿದೆ. ಸ್ಥಳೀಯ ನಾಗರೀಕರನ್ನು ಬೆದರಿಸಿ ಯಂತ್ರಗಳ ಮೂಲಕ ನೇತ್ರಾವತಿ ನದಿಯಲ್ಲಿ ಆಕ್ರಮ ಮರಳುಗಾರಿಕೆ ನಡೆಸಿ ಹೊರಜಿಲ್ಲೆ, ಹೊರರಾಜ್ಯಗಳಿಗೆ ಮರಳು ಸಾಗಿಸುತ್ತಿದ್ದ ಮರಳು ಮಾಫಿಯಾವನ್ನು ಇನ್ಸ್‍ಪೆಕ್ಟರ್ ಪ್ರಮೋದ್ ಬಗ್ಗು ಬಡಿದ್ದಿದ್ದರು. ಸ್ಥಳೀಯವಾಗಿ ಜನತೆಯ ಬೆದರಿಸುತ್ತಿದ್ದ ಗೂಂಡಾಗಳನ್ನು ಹದ್ದು ಬಸ್ತಿನಲ್ಲಿಡಲು, ಜುಗಾರಿ, ವೇಶ್ಯಾವಾಟಿಕೆ ಸಹಿತ ಹಲವು ಆಕ್ರಮಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಮಾತ್ರವಲ್ಲ ಪೋಲೀಸ್ ಠಾಣೆಯನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸಿದ್ದ ಅಧಿಕಾರಿ ಪ್ರಮೋದ್‍ರವರನ್ನು ವರ್ಗಾಯಿಸಲು ಮರಳು ಮಾಫಿಯಾದ ನೇತೃತ್ವದಲ್ಲಿ ನಿರಂತರ ಯತ್ನ ನಡೆಯುತ್ತಿದೆ. ಈಗ ಈ ಎಲ್ಲಾ ಮಾಫಿಯಾದೊಂದಿಗೆ ನಗರದ ಇಬ್ಬರು ಶಾಸಕರು ಕೈ ಜೋಡಿಸಿದ್ದು ವರ್ಗಾವಣೆಗೆ ಮುಖ್ಯಮಂತ್ರಿಯ ಮಟ್ಟದಲ್ಲಿ ಯತ್ನಿಸುತ್ತಿರುವುದನ್ನು ಡಿವೈಎಫ್‍ಐ ತೀವ್ರವಾಗಿ ವಿರೋಧಿಸುತ್ತದೆ ಎಂದು ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love