ಮಂಗಳೂರು| ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿಗೆ ಕೋಟ್ಯಂತರ ರೂ. ವಂಚನೆ ಪ್ರಕರಣ: ಮೂವರ ಬಂಧನ
ಮಂಗಳೂರು: ಎಂಎಸ್ಎಂಇ ಯೋಜನೆಯಲ್ಲಿ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿಗೆ ಕೋಟ್ಯಂತರ ರೂ. ವಂಚಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಉಜ್ಜೋಡಿಯ ಮುನೀರ್ ಕದಮನ್ ಅಬೂಬಕರ್ (53), ನಂದಿಗುಡ್ಡೆಯ ಹುಸೇನ್. ಪಿ (52) ಮತ್ತು ಜೆಪ್ಪು ನಿವಾಸಿ ಮುಹಮ್ಮದ್ ಮುಸ್ತಾಫ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಂಪೆನಿ ತೆರೆದು ಸುಳ್ಳು ದಾಖಲಾತಿ ಸೃಷ್ಟಿಸಿ ಲೋನ್ ಹೆಸರಿನಲ್ಲಿ ನಗರದ ಮಲ್ಲಿಕಟ್ಟೆಯ ಬ್ಯಾಂಕ್ ಗೆ ಕೋಟ್ಯಾಂತರ ರೂ. ಮೋಸ ಮಾಡಿದರೆಂದು ಆರೋಪಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ನೆರವಿನೊಂದಿಗೆ ಆರೋಪಿಗಳು ಲೋನ್ ನೆಪದಲ್ಲಿ ಸಂಸ್ಥೆಯ ಹೆಸರಿನಲ್ಲಿ ಸಾಲ ಪಡೆದು ವಿವಿಧ ಖಾತೆಗಳಿಗೆ ವರ್ಗಾಯಿಸಿ ಸ್ವಂತಕ್ಕೆ ಬಳಕೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ ಎಂಎಸ್ಎಂಇ ಯೋಜನೆಯಡಿಯಲ್ಲಿ ಮೆ.ಇಲೆಕ್ಟ್ರೋ ವರ್ಲ್ಡ್ ಎಂಟರ್ಪ್ರೈಸಸ್ ಸಂಸ್ಥೆಯವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 20 ಲಕ್ಷ ರೂ. ಸಾಲ ಮಂಜೂರು ಮಾಡಿಸಿ, ಅದೇ ರೀತಿ ಮೆ.ಎಂಎಚ್ ಎಂಟರ್ಪ್ರೈಸಸ್ ಸಂಸ್ಥೆರವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 30 ಲಕ್ಷ ರೂ. ಸಾಲವನ್ನು ಬ್ಯಾಂಕ್ನಿಂದ ಮಂಜೂರು ಮಾಡಿಸಿಕೊಂಡು, ಹಣವನ್ನು ಉದ್ದೇಶಿತ ವ್ಯವಹಾರಕ್ಕೆ ಬಳಸದೇ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿ ಕೊಂಡು ವಂಚಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿರುವುದಾಗಿ ಆರೋಪಿಸಿ ಎಸ್ಬಿಐನ ಚೀಪ್ ಮಾನ್ಯೇಜರ್ ಸೆ.16ರಂದು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚನೆಯ ಪ್ರಮುಖ ಆರೋಪಿ ಮೆ.ಇಲೆಕ್ಟ್ರೋ ವರ್ಲ್ಡ್ ಎಂಟರ್ಪ್ರೈಸಸ್ ಸಂಸ್ಥೆಯ ಮುನೀರ್ ಕದಮನ್ ಅಬೂಬಕರ್ ಮತ್ತು ಆತನಿಗೆ ಸಹಕರಿಸಿದ ಹುಸೇನ್. ಪಿ ಹಾಗೂ ಇನ್ನೊಂದು ಪ್ರಕರಣದಲ್ಲಿ ಮೆ.ಎಂಎಚ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕ ಪ್ರಮುಖ ಆರೋಪಿ ಮುಹಮ್ಮದ್ ಮುಸ್ತಾಫ ಎಂಬಾತನನ್ನು ಬಂಧಿಸಿದ್ದಾರೆ.
ಮುನೀರ್ ಕದಮನ್ ಅಬೂಬಕರ್ ಎಂಬಾತನು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಎರಡು ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಸಿಸಿಬಿ ಮಂಗಳೂರು ಘಟಕಕ್ಕೆ ವರ್ಗಾಹಿಸಲಾ ಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.