ಮಂಗಳೂರು ನದಿ ಉತ್ಸವಕ್ಕೆ ಎಲ್ಲಾ ಸಿದ್ಧತೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

Spread the love

ಮಂಗಳೂರು ನದಿ ಉತ್ಸವಕ್ಕೆ ಎಲ್ಲಾ ಸಿದ್ಧತೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಮಂಗಳೂರು :  ಜನವರಿ 12 ಮತ್ತು 13ರಂದು ನಡೆಯುವ ಮಂಗಳೂರು ರಿವರ್ ಫೆಸ್ಟ್ “ ನದಿ ಉತ್ಸವ”ಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಉತ್ಸವಕ್ಕೆ ಸಂಬಂದಪಟ್ಟ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜ.12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು ಮತ್ತು ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ತೀರದಲ್ಲಿ ಈ ಉತ್ಸವ ನಡೆಯಲಿದೆ. ನದಿಗಳತ್ತ ಜನರನ್ನು ಆಕರ್ಷಿಸಲು ಹಾಗೂ ನದಿ ಪ್ರೀತಿ ಹೆಚ್ಚಿಸುವುದು ಉತ್ಸವದ ಮುಖ್ಯ ಉದ್ದೇಶ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ರಾಜ್ಯದ ಕರಾವಳಿಯ ನದಿ ತೀರಗಳನ್ನು ಪ್ರವಾಸೋದ್ಯಮದ ದೃಷ್ಠಿಯಿಂದ ಅಭಿವೃದ್ಧಿಗೊಳಿಸಲು ಈ ನದಿ ಉತ್ಸವ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ನದಿ ಉತ್ಸವದ ಯಶಸ್ಸಿಗೆ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ನದಿಯಲ್ಲಿ ವಿಹರಿಸಲು ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಸಾರ್ವಜನಿಕರನ್ನು ಆಕರ್ಷಿಸಲು ನದಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಯಾಕಿಂಗ್ ದೋಣಿ ಸ್ಪರ್ಧೆ , ಬೋಟ್ ರೇಸ್, ಫೆರ್ರಿ, ವಿಂಡ್ ಸರ್ಫಿಂಗ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ವಿವಿಧ ತಿಂಡಿ ತಿನಸುಗಳ ಆಹಾರೋತ್ಸವ ಕೂಡಾ ನದಿ ಉತ್ಸವದಲ್ಲಿ ನಡೆಯಲಿದೆ. ಇದರಲ್ಲಿ ಸಾಂಪ್ರದಾಯಿಕ ತಿಂಡಿಗಳಲ್ಲದೇ, ಮೀನಿನ ವಿವಿಧ ಖಾದ್ಯಗಳ ಸ್ಟಾಲ್‍ಗಳನ್ನೂ ತೆರೆಯಲಾಗುವುದು ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಹೆಸರಾಂತ ಗಾಯಕರ ಸಂಗೀತ ಕಾರ್ಯಕ್ರಮ, ಜನಪದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನದಿಗಳ ಮಹತ್ವ ಸಾರುವ ಚಲನಚಿತ್ರಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನದಿಗಳ ಸುಸ್ಥಿರ ಬಳಕೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಕೋನವನ್ನಿರಿಸಿ ಉತ್ಸವ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನದಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಬೇಕು ಎಂದು ಸಸಿಕಾಂತ್ ಸೆಂಥಿಲ್ ಮನವಿ ಮಾಡಿದರು.

ಸಭೆಯಲ್ಲಿ ನದಿ ಉತ್ಸವದ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.


Spread the love