ಮಂಗಳೂರು: ನ.1ರಂದು ವಾಕಥಾನ್ ಹಿನ್ನೆಲೆ; ಸಂಚಾರ ಮಾರ್ಗ ಬದಲಾವಣೆ

Spread the love

ಮಂಗಳೂರು: ನ.1ರಂದು ವಾಕಥಾನ್ ಹಿನ್ನೆಲೆ; ಸಂಚಾರ ಮಾರ್ಗ ಬದಲಾವಣೆ

ಮಂಗಳೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ವತಿಯಿಂದ ನ.1ರಂದು ಸಂಜೆ ಆಯೋಜಿಸಲಾಗಿರುವ ‘ಜೊತೆಯಾಗಿ ನಡೆಯೋಣ, ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023’ ಮೆರವಣಿಗೆಯ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡುಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ವಾಕಥಾನ್‌ನಲ್ಲಿ 120ಕ್ಕೂ ಅಧಿಕ ವಿದ್ಯಾಸಂಸ್ಥೆಗಳ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪುರಭವನದಿಂದ ಸಂಜೆ 4ಕ್ಕೆ ಹೊರಟು ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಲಾಲ್‌ಭಾಗ್, ಲೇಡಿಹಿಲ್, ನಾರಾಯಣ ಗುರು ವೃತ್ತ ಮೂಲಕ ಮಂಗಳ ಕ್ರೀಡಾಂಗಣ ತಲುಪಲಿದೆ. ಹಾಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

*ನಗದ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣದ ಕಡೆಯಿಂದ ಕ್ಲಾಕ್ ಟವರ್ ಕಡೆಗಿನ ರಸ್ತೆಯಲ್ಲಿ ಮೆರವಣಿಗೆಯು ಪುರಭವನದ ದಕ್ಷಿಣ ದ್ವಾರದಿಂದ ಕ್ಲಾಕ್ ಟವರ್ ವೃತ್ತ ತಲುಪುವ ಸಮಯದವರೆಗೆ ವಾಹನ ಸಂಚಾರವನ್ನು ನಿಷೇಧಿಸಿದೆ.

*ಸೆಂಟ್ರಲ್ ಮಾರ್ಕೆಟ್‌ನ ಫಾತಿಮಾ ಸ್ಟೋರ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ.

*ಮೆರವಣಿಗೆಯು ಕ್ಲಾಕ್ ಟವರ್ ತಲುಪಿದ ತಕ್ಷಣ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣ ಕಡೆಯಿಂದ ಬರುವ ವಾಹನಗಳು ಕ್ಲಾಕ್ ಟವರ್‌ನ ಬಳಿ ಬಲಕ್ಕೆ ತಿರುಗಿ ಹಂಪನಕಟ್ಟ -ಕ್ಲಾಕ್ ಟವರ್ ರಸ್ತೆಯಲ್ಲಿ ಏಕ ಮುಖ ಸಂಚಾರಕ್ಕೆ ವಿರುದ್ಧವಾಗಿ ಹಂಪನಕಟ್ಟ ಜಂಕ್ಷನ್ ತನಕ ಸಂಚರಿಸಿ ನಂತರ ಎಡಕ್ಕೆ ತಿರುಗಿ ಎಲ್‌ಹೆಚ್‌ಹೆಚ್ ರಸ್ತೆ ತನಕ ಮುಂದುವರಿಯುವುದು.

*ಅಂಬೇಡ್ಕರ್ ವೃತ್ತದ ಕಡೆಯಿಂದ ಎಲ್‌ಎಚ್‌ಎಚ್ ಮೂಲಕ ಸಿಟಿ ಸರ್ವಿಸ್ ಬಸ್ ನಿಲ್ದಾಣ ಹಾಗೂ ನೆಹರೂ ಮೈದಾನದ ಕಡೆಗೆ ಬರುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟ ಜಂಕ್ಷನ್ ಬಳಿ ಎಡಕ್ಕೆ ತಿರುಗಿ ರೈಲ್ವೆ ನಿಲ್ದಾಣದ ರಸ್ತೆಯ ಮುಖಾಂತರ ಯು.ಪಿ. ಮಲ್ಯ ರಸ್ತೆಗೆ ಬಂದು ಮುಂದುವರಿಯುವುದು.

*ಪಿಎಂ ರಾವ್ ರಸ್ತೆ ಮತ್ತು ಶರವು ಗಣಪತಿ ದೇವಸ್ಥಾನ ರಸ್ತೆಯಲ್ಲಿ ಎಲ್ಲಾ ತರಹದ ವಾಹನ ಸಂಚಾರ ನಿಷೇಧಿಸಿದೆ.

*ಕಾರ್‌ಸ್ಟ್ರೀಟ್ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವ ಎಲ್ಲಾ ವಾಹನಗಳು ನವಭಾರತ ವೃತ್ತ ಹಾಗೂ ಯೆನೆಪೋಯ ಆಸ್ಪತ್ರೆಯ ಬಳಿಯ ವಿಟಿ ರಸ್ತೆ (ಕರ್ನಾಟಕ ಬ್ಯಾಂಕ್) ಮೂಲಕ ಕೆ.ಎಸ್.ರಾವ್ ರಸ್ತೆಗೆ ಬಂದು ಕೋರ್ಟ್ ರಸ್ತೆ ಅಥವಾ ಸಿಟಿ ಸೆಂಟರ್ ರಸ್ತೆಯಾಗಿ ಮುಂದುವರಿಯುವುದು.

*ಬಂಟ್ಸ್ ಹಾಸ್ಟೆಲ್/ಕರಂಗಲಪಾಡಿ ಕಡೆಯಿಂದ ಪಿವಿಎಸ್ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸಿದೆ. ಅಂಬೇಡ್ಕರ್ ವೃತ್ತದಿಂದ ಲಾಲ್‌ಬಾಗ್ ಕಡೆಗೆ ಹೋಗುವ ವಾಹನಗಳು ಕರಂಗಲಪಾಡಿ ರಸ್ತೆ ಹಾಗೂ ಅಂಬೇಡ್ಕರ್ ವೃತ್ತದಿಂದ ಕೆಪಿಟಿ ಕಡೆಗೆ ಹೋಗುವ ವಾಹನಗಳು ಕದ್ರಿ ಕಂಬಳ ರಸ್ತೆ ಮುಖಾಂತರ ಸಂಚರಿಸುವುದು.

*ಕುದ್ರೋಳಿ ಕಡೆಯಿಂದ ಎಂಜಿ ರಸ್ತೆ ಕಡೆಗೆ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ-ಸಂಘನಿಕೇತನ ರಸ್ತೆ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)ಕ್ಕೆ ಹೋಗಿ ಎಂಜಿ ರಸ್ತೆ ಪ್ರವೇಶಿಸುವುದು.

*ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ನಾರಾಯಣಗುರು ವೃತ್ತ (ಲೇಡಿಹಿಲ್) ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಬಿಜೈ ಕಾಪಿಕಾಡ್ ಕಡೆಯಿಂದ ಕೊಟ್ಟಾರ ಕ್ರಾಸ್ ಮೂಲಕ ವಾಹನಗಳು ಸಂಚರಿಸುವುದು.

*ನಾರಾಯಣ ಗುರು ವೃತ್ತ (ಲೇಡಿಹಿಲ್) ಹಾಗೂ ಮಣ್ಣಗುಡ್ಡೆ ರಸ್ತೆಯ ನಡುವಿನ ವಾಹನ ಸಂಚಾರವನ್ನು ನಿಷೇಧಿಸಿದೆ.

*ಕುದ್ರೋಳಿ ಕೂಳೂರು ಫೆರಿ ರಸ್ತೆ ಕಡೆಯಿಂದ ಪಿವಿಎಸ್ ಕಲಾಕುಂಜ ರಸ್ತೆ, ಕೋಡಿಯಾಲ್‌ಗುತ್ತು ರಸ್ತೆ, ಟಿಎಂಎ ಪೈ ರಸ್ತೆ, ಜಿಜಿ ರಸ್ತೆ (ಪತ್ತುಮುಡಿ ರಸ್ತೆ), ಮಣ್ಣಗುಡ್ಡೆ ರಸ್ತೆ (ಬಲ್ಲಾಳ್‌ಬಾಗ್), ನೆಹರು ಅವೆನ್ಯೂ ರಸ್ತೆ, ನೆಹರು ಅವೆನ್ಯೂ ಕ್ರಾಸ್ ರಸ್ತೆ (ಪಬ್ಬಾಸ್‌ನ ಬಳಿ)ಗಳಲ್ಲಿ ಸಂಚರಿಸಿ ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

*ವಾಹನ ನಿಲುಗಡೆ ನಿಷೇಧಿಸಿರುವ ಸ್ಥಳಗಳು

ಮೆರವಣಿಗೆ ಸಾಗುವ ಪುರಭವನ-ಕ್ಲಾಕ್‌ಟವರ್-ಕೆ.ಬಿ.ಕಟ್ಟೆ-ಹಂಪನಕಟ್ಟ-ಕೆ.ಎಸ್.ಅರ್ ರಾವ್ ರಸ್ತೆ -ನವಭಾರತ ವೃತ್ತ – ಪಿ.ವಿ.ಎಸ್ ವೃತ್ತ-ಎಂ.ಜಿ ರಸ್ತೆ (ಪಿ.ವಿ.ಎಸ್‌ನಿಂದ ನಾರಾಯಣ ಗುರು ವೃತ್ತ)-ಮಂಗಳ ಕ್ರೀಡಾಂಗಣ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ. ಅಲ್ಲದೆ ನಾರಾಯಣಗುರು ವೃತ್ತ (ಲೇಡಿಹಿಲ್)ದಿಂದ ಮಣ್ಣಗುಡ್ಡ ದವರೆಗಿನ ಕೂಳೂರು ಫೆರಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ಸಲಾಗಿದೆ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love