ಮಂಗಳೂರು: ರೌಡಿಶೀಟರ್ ನೌಫಲ್ ಬಜಾಲ್ ಹತ್ಯೆ
ಉಪ್ಪಳ: ಮಂಗಳೂರು ಮೂಲದ ರೌಡಿಶೀಟರ್, ಜೋಡಿಕೊಲೆ ಆರೋಪಿ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್ ಎಂಬಾತತನ್ನು ಉಪ್ಪಳದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರಿನ ಬಜಾಲ್ ಫೈಝಲ್ ನಗರ ನಿವಾಸಿಯಾಗಿದ್ದ ಈತ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಟೋಪಿ ನೌಫಾಲ್ ಮಂಗಳೂರು ನಗರದ ಬಜಾಲ್ ಫೈಸಲ್ ನಗರ ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ಬಳಿಕ ಕಾಸರಗೋಡು ಭಾಗದಲ್ಲಿ ಸಕ್ರಿಯವಾಗಿದ್ದ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಉಪ್ಪಳ ಗೇಟ್ ಬಳಿಗೆ ಕರೆಸಿದ್ದ ತಂಡ ಅಲ್ಲಿಯೇ ತಲವಾರುಗಳಿಂದ ಕಡಿದು ಹಾಕಿದೆ ಎನ್ನಲಾಗುತ್ತಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು ಶವವನ್ನು ಪೆರಿಯಾರಂ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿದ್ದು ಪೋಸ್ಟ್ ಮಾರ್ಟಂ ಬಳಿಕ ಕೊಲೆಯ ಬಗ್ಗೆ ತಿಳಿಯಬಹುದು ಎಂದಿದ್ದಾರೆ.
ರೈಲ್ವೇ ಟ್ರಾಕ್ ಬಳಿಯಲ್ಲೇ ಶವ ಬಿದ್ದಿದ್ದು ತಲೆ, ಕುತ್ತಿಗೆ ಭಾಗಕ್ಕೆ ಕಡಿದ ಗುರುತುಗಳಿವೆ. ಅಲ್ಲದೆ, ಶವದ ದೇಹದಲ್ಲಿ ಬನಿಯಾನ್ ಮತ್ತು ಪ್ಯಾಂಟ್ ಮಾತ್ರ ಇದ್ದು ಹೊಡೆದಾಟ ಸಂದರ್ಭದಲ್ಲಿ ಶರ್ಟ್ ಎಳೆದುಕೊಂಡು ಹೋಗಿದೆಯಾ ಎನ್ನುವ ಸಂಶಯ ಇದೆ. ಸ್ಥಳಕ್ಕೆ ಸ್ಕೂಟರಿನಲ್ಲಿ ತೆರಳಿದ್ದ ಎನ್ನುವ ಮಾಹಿತಿ ಇದೆ. ಟೋಪಿ ನೌಫಾಲ್ ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಜೊತೆಗೆ ಡ್ರಗ್ಸ್ ಸೇವನೆ ಮತ್ತು ವಹಿವಾಟಿನಲ್ಲಿ ಗುರುತಿಸಿಕೊಂಡಿದ್ದ. 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೊಬ್ಬನ ಡಬಲ್ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ. ಆ ಸಂದರ್ಭದಲ್ಲಿ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೆ ಗುರುತಿಸಿಕೊಂಡಿದ್ದ.
ತಲ್ಲತ್ ಮತ್ತು ಜಬ್ಬಾರ್ ನ್ಯೂಟ್ರಲ್ ಆದಬಳಿಕ ನೌಫಾಲ್ ತನ್ನದೇ ತಂಡ ಕಟ್ಟಿಕೊಂಡು ಕೊಲೆಯತ್ನ, ವಸೂಲಿ, ಡ್ರಗ್ಸ್, ಅಕ್ರಮ ಗೋಲ್ಡ್ ವಹಿವಾಟಿನಲ್ಲಿ ಸಕ್ರಿಯವಾಗಿದ್ದ. ಕಂಕನಾಡಿ ನಗರ, ವಾಮಂಜೂರು, ಸುರತ್ಕಲ್, ಕಾವೂರು ಸೇರಿ ಹಲವಾರು ಕಡೆಗಳಲ್ಲಿ ಕೇಸುಗಳನ್ನು ಹೊಂದಿದ್ದಾನೆ. ಜಿಯಾ ಕೊಲೆ ಕೇಸಿನಲ್ಲಿ ಈತನೇ ಪ್ರಮುಖ ಆರೋಪಿಯಾಗಿದ್ದ. ಇದೀಗ ಉಪ್ಪಳ ಗೇಟ್ ಬಳಿಯಲ್ಲಿ ಕೊಲೆ ಆಗಿರುವುದರಿಂದ ಅಲ್ಲಿನದ್ದೇ ಗ್ಯಾಂಗ್ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೌಫಲ್ ನ ಮೃತದೇಹವನ್ನು ಕಾಸರಗೋಡಿನ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.












