ಮಂಗಳೂರು| ಶಾಲಾ ಕಟ್ಟಡದ ಮೇಲ್ಬಾವಣಿ ಕುಸಿತ ; ಮಕ್ಕಳು ಹೊರಗೋಡಿದ್ದರಿಂದ ತಪ್ಪಿದ ಭಾರೀ ಅನಾಹುತ

Spread the love

ಮಂಗಳೂರು| ಶಾಲಾ ಕಟ್ಟಡದ ಮೇಲ್ಬಾವಣಿ ಕುಸಿತ ; ಮಕ್ಕಳು ಹೊರಗೋಡಿದ್ದರಿಂದ ತಪ್ಪಿದ ಭಾರೀ ಅನಾಹುತ

ಮಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಹಂಚಿನ ಮೇಲ್ಬಾವಣಿ ಜೋರಾದ ಗಾಳಿಗೆ ಏಕಾಏಕಿ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಪೇಜಾವರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು ಹಂಚು ಜಾರುವುದನ್ನು ತಿಳಿದು ಮಕ್ಕಳು ಹೊರಗೆ ಓಡಿದ್ದರಿಂದ ಭಾರೀ ದೊಡ್ಡ ದುರಂತ ತಪ್ಪಿದೆ.

.ಜೋಕಟ್ಟೆ ಸಮೀಪದ ಪೇಜಾವರ ಮೂಲ ಮಠದ ಬಳಿಯಿರುವ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12.30ರ ವೇಳೆಗೆ ಘಟನೆಯಾಗಿದ್ದು ಗಾಳಿಗೆ ಒಂದು ಬದಿಯ ಹಂಚು ಜಾರುತ್ತಿದ್ದಂತೆ ಮಕ್ಕಳು ಹೊರಗೆ ಓಡಿ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ತರಗತಿ ಕೊಠಡಿಯಿದ್ದ ಆ ಭಾಗದ ಹಂಚು ಪೂರ್ತಿಯಾಗಿ ಕುಸಿದು ಕೆಳಕ್ಕೆ ಬಿದ್ದಿದೆ.

ಘಟನೆಯಲ್ಲಿ ಶೋನಿತ್ ಎಂಬ ಯುಕೆಜಿ ವಿದ್ಯಾರ್ಥಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಶಾಲೆಯನ್ನು ದುರಸ್ತಿ ಪಡಿಸಲಾಗಿತ್ತು. ಶಾಲೆಯಲ್ಲಿ 21 ವಿದ್ಯಾರ್ಥಿಗಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಿಂದೆ ಇದು ಅನುದಾನಿತ ಶಾಲೆಯಾಗಿದ್ದು ಆನಂತರ ಇಲ್ಲಿನ ಮುಖ್ಯ ಶಿಕ್ಷಕಿ ನಿವೃತ್ತಿಯಾದ ಬಳಿಕ ಮತ್ತೆ ಸರ್ಕಾರದಿಂದ ನೇಮಕಾತಿ ಆಗಿರಲಿಲ್ಲ. ಮುಖ್ಯಪ್ರಾಣ ದೇವರ ಹೆಸರಲ್ಲಿದ್ದ ಶಾಲೆ ನಿಲುಗಡೆ ಆಗುತ್ತದೆ ಎನ್ನುವಾಗ ಊರವರು ಸೇರಿ ದಾನಿಗಳ ಸಹಕಾರದಿಂದ ಶಾಲೆಯನ್ನು ಉಳಿಸಿದ್ದೆವು. ಈಗ ಮೂರು ವರ್ಷದಿಂದ ಎಲ್ಲೆಜಿ, ಯುಕೆಜಿ ಮತ್ತು ನರ್ಸರಿ ತರಗತಿಯನ್ನು ಖಾಸಗಿಯಾಗಿಯೇ ನಡೆಸುತ್ತಿದ್ದೇವೆ. ಸರ್ಕಾರದ ಯಾವುದೇ ಅನುದಾನ ಇಲ್ಲ. ಊರಿಗೊಂದು ಶಾಲೆ ಬೇಕೆಂಬ ಕಾಳಜಿಯಿಂದ ಮಾಡುತ್ತಿದ್ದೇವೆ. ಕಳೆದ ವರ್ಷ ನಾವು ಸ್ಥಳೀಯರು ಸೇರಿ ಶ್ರಮದಾನದ ಮೂಲಕ ಶಾಲೆ ದುರಸ್ತಿ ಮಾಡಿದ್ದೆವು. ಹಂಚು, ಪಕ್ಕಾಸು ಎಲ್ಲ ಬದಲಾಯಿಸಿದ್ದೆವು. ಈಗ ಸಣ್ಣ ಗಾಳಿಗೆ ಕುಸಿದು ಬಿದ್ದಿದೆ. ಹೇಗೆ ಬಿದ್ದಿದೆ ಎನ್ನುವುದು ಗೊತ್ತಿಲ್ಲ. ಆದರೆ ದೇವರು ಯಾವುದೇ ಅಪಾಯ ಆಗದಂತೆ ನೋಡಿಕೊಂಡಿದ್ದಾರೆ. ಶಾಲೆಯಲ್ಲಿ 21 ಸಣ್ಣ ಮಕ್ಕಳಿದ್ದರೂ ಒಂದು ಮಗು ಬಿಟ್ಟರೆ ಯಾರಿಗೂ ತೊಂದರೆ ಆಗಿಲ್ಲ ಎಂದು ಸ್ಥಳೀಯರಾದ ವಿಜಯ ಕುಮಾ‌ರ್ ಮತ್ತು ಬಾಲು ಪೇಜಾವರ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments