ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ – ಪೇಜಾವರ ಸ್ವಾಮೀಜಿ

Spread the love

ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ – ಪೇಜಾವರ ಸ್ವಾಮೀಜಿ

ಉಡುಪಿ: ಅಯೋಧ್ಯೆಯಲ್ಲಿ ರಾಮಲಲ್ಲಾಗೆ ಪ್ರಾಣಪ್ರತಿಷ್ಠೆ ಪೊರೈಸಿ ಮಂಡಲ ಪೂಜೆ ಮುಗಿಸಿ ಉಡುಪಿಗೆ ಬಂದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಯವರೆಗೂ ಸ್ವಾಮೀಜಿಯವರಿಎಗೆ ಅದ್ದೂರಿ ಸ್ವಾಗತ ನೀಡಿದ್ದು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಆಯ್ದ ಸ್ಥಳಗಳಲ್ಲಿ ಗೌರವಾರ್ಪಣೆ ನಡೆಸಲಾಯಿತು. ನಗರದ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ್ದು ಸಂಸ್ಕೃತ ಕಾಲೇಜಿನಿಂದ ರಥ ಬೀದಿಯವರೆಗೆ ವಿಶೇಷ ಮೆರವಣಿಗೆ ಮೂಲಕ ಸ್ವಾಮೀಜಿಗಳಿಗೆ ಸ್ವಾಗತ ನೀಡಲಾಯಿತು. ಈ ವೇಳೆ ನೂರಾರು ಬೈಕುಗಳ ಮೂಲಕ ನಾಗರಿಕರು ಆಗಮಿಸಿದ್ದರು.

ರಥಬೀದಿಗೆ ಆಗಮಿಸಿದ ಸ್ವಾಮೀಜಿ ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮ ಜರುಗಿತು. ಈ ವೇಳೆ ವಿಶ್ವಪ್ರಸನ್ನ ತೀರ್ಥರಿಗೆ ಪರ್ಯಾಯ ಮಠದಿಂದ ಅಭಿನವ ಆಂಜನೇಯ ಬಿರುದು ನೀಡಿ ಗೌರವಿಸಲಾಯಿತು.

ಈ ವೇಳೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ಪೇಜಾವರ ಶ್ರೀಗಳು ಅಯೋಧ್ಯ ಪೂಜೆ ಕೈಗೊಂಡಿರುವುದು ಸಂತ ಸಮಾಜಕ್ಕೆ ಸಂತೋಷದ ವಿಚಾರವಾಗಿದ್ದು, ಅಯೋಧ್ಯೆಯ ಎಲ್ಲಾ ಘಟನೆಗಳಿಗೂ ಉಡುಪಿಯಲ್ಲಿ ಮುಹೂರ್ತ ನಿಗದಿಯಾಗಿದ್ದು ಉಡುಪಿಯಿಂದಲೇ ಥಾಲ ಕೋಲೋ ಅಭಿಯಾನ ಪ್ರಾರಂಭವಾಗಿತ್ತು. ಜೈಲಿನಲ್ಲಿದ್ದ ರಾಮದೇವರ ಕೊಠಡಿಯ ಬೀಗವನ್ನು ಒಡೆಯುವ ಸೌಭಾಗ್ಯ ನಮ್ಮದಾಗಿತ್ತು ಅಯೋಧ್ಯೆಯ ಈ ಧಾರ್ಮಿಕ ಕ್ರಾಂತಿಗೆ ಮೂಲ ಉಡುಪಿಯಲ್ಲಿದೆ ಎಂದರು.

ಅಯೋಧ್ಯೆಯ ಹನುಮಂತ ಉಡುಪಿಯಲ್ಲಿ ಪ್ರತಿಷ್ಠಾಪಿತನಾಗಿದ್ದು ಅವನ ಪ್ರೇರಣೆಯಿಂದಲೇ ಉಡುಪಿಯ ಶ್ರೀಗಳು ರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ವಿಶ್ವ ಪ್ರಸನ್ನ ತೀರ್ಥರ ಮುಖಾಂತರ ಪ್ರಾಣ ಪ್ರತಿಷ್ಠೆಯಾಗಿದ್ದು, ರಾಮಮಂದಿರದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕದ ಶಿಲ್ಪಿಗಳೆ ರಾಮದೇವರ ವಿಗ್ರಹ ರಚಿಸಿದ್ದು ಈ ಎಲ್ಲಾ ಕಾರ್ಯದ ಹಿಂದೆ ಆಂಜನೇಯನ ಶಕ್ತಿ ಇದೆ ಎಂದರು.

ಆಂಜನೇಯ ಕನ್ನಡಿಗ ಕರ್ನಾಟಕದಲ್ಲಿ ಅವತರಿಸಿದ ದೇವರಾಗಿದ್ದು ಎಲ್ಲಾ ಕಾರ್ಯಗಳು ಕನ್ನಡಿಗರಿಂದ ಆಗುವಂತೆ ಆಂಜನೇಯ ಹರಸಿದ್ದಾನೆ. ಉಡುಪಿಯಲ್ಲಿ ಅಯೋಧ್ಯೆಯಿಂದ ಬಂದ ಮುಖ್ಯ ಪ್ರಾಣ ದೇವರಿದ್ದಾರೆ.
ವಿಶ್ವೇಶ ತೀರ್ಥರಿಗೂ ವಿಶ್ವ ಪ್ರಸನ್ನ ತೀರ್ಥರಿಗೂ ಇದೇ ಆಂಜನೇಯನ ಪ್ರೇರಣೆ ಇದ್ದು ವಿಶ್ವ ಪ್ರಸನ್ನ ತೀರ್ಥರಿಗೆ ಅಭಿನವ ಆಂಜನೇಯ ಬಿರುದು ನೀಡುತ್ತಿದ್ದೇವೆ. ಇದರಿಂದ ಆಂಜನೇಯ ಹೋಗಿ ರಾಮದೇವರ ಪ್ರತಿಷ್ಠೆ ಮಾಡಿ ಬಂದಂತಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ ಅಯೋಧ್ಯೆಯ ಎಲ್ಲಾ ಬೆಳವಣಿಗೆಗಳಿಗೆ ಉಡುಪಿ ಕೃಷ್ಣನೇ ಮೂಲ ಪ್ರೇರಣೆಯಾಗಿದ್ದು ಅಯೋಧ್ಯೆಯಲ್ಲಿ ನಡೆಸಿದ ಎಲ್ಲಾ ಸತ್ಕಾರ್ಯಗಳನ್ನು ಕೃಷ್ಣನಿಗೆ ಅರ್ಪಿಸಿದ್ದೇನೆ. ಎಲ್ಲಾ ಸತ್ಕಾರ್ಯಗಳನ್ನು ಕೃಷ್ಣಾರ್ಪಣ ಮಾಡಿದ್ದು ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ ಎಂದು ಆಶಿಸುತ್ತೇವೆ. ಮುಖ್ಯಪ್ರಾಣ ದೇವರ ಶಕ್ತಿ ಮಥುರಾ ವಿಚಾರದಲ್ಲೂ ಕೆಲಸ ಮಾಡಿ ಆದಷ್ಟು ಬೇಗ ಮಥುರ ಕ್ಷೇತ್ರದ ವಿಮೋಚನೆಯಾಗಲಿ ಎಂದರು.

ರಾಮಮಂದಿರ ಚುನಾವಣಾ ವಿಚಾರವಾಗಿದ್ದು ಎಲ್ಲಾ ಪಕ್ಷದವರು ಈ ಬಗ್ಗೆ ಕೆಲಸ ಮಾಡಲಿ. ಎಲ್ಲ ಪಕ್ಷದವರು ರಾಮಮಂದಿರ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳಲಿ ಎಂದು ಸ್ವಾಮೀಜಿ ವಿಶ್ವೇಶ ತೀರ್ಥರು ಉಡುಪಿ ಹಾಗೂ ಅಯೋಧ್ಯೆಯಲ್ಲಿ ವಿಶೇಷ ಸೇವೆ ಮಾಡಿದ್ದಾರೆ ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕರಾದ ರಘುಪತಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love