ಮಳೆ ನೀರಿನ ಕೊಯ್ಲು ಇಂದಿನ ಅನಿವಾರ್ಯತೆ – ಜಿಲ್ಲಾಧಿಕಾರಿ ಜಿ.ಜಗದೀಶ್ 

Spread the love

ಮಳೆ ನೀರಿನ ಕೊಯ್ಲು ಇಂದಿನ ಅನಿವಾರ್ಯತೆ – ಜಿಲ್ಲಾಧಿಕಾರಿ ಜಿ.ಜಗದೀಶ್ 

ಉಡುಪಿ: ಯುವಕರು ಕಡಿಮೆ ಅಂದರೂ ವರ್ಷಕ್ಕೆ 5 ಗಿಡಗಳನ್ನಾದರು ನೆಟ್ಟು ಅವುಗಳ ಪೋಷಣೆ ಮಾಡುವುದು ಇಂದು ಅನಿವಾರ್ಯವಾಗಿದೆ. ಹೀಗೆ ಮಾಡುವುದರಿಂದ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮಿಂದಲೇ ನಾಶವಾಗುತ್ತಿರುವ ಕಾಡನ್ನು ಪುನರ್ ರಚಿಸಲು ಮಹತ್ವದ ಹೆಜ್ಜೆಯನ್ನು ಇಟ್ಟಂತಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡಿ ಅದರಿಂದ ಉತ್ಪತ್ತಿಯಾದ ಸಾವಯವ ಗೊಬ್ಬರವನ್ನು ತಮ್ಮ ಮನೆಯ ಕೈ ತೋಟಕ್ಕೆ, ಗಿಡ ಮರಗಳಿಗೆ ಉಪಯೋಗಿಸಿದರೆ ಅದರಿಂದ ಉತ್ಪತ್ತಿಯಾದ ರಾಸಾಯನಿಕ ಅಂಶವಿಲ್ಲದ ತಾಜಾ ತರಕಾರಿಗಳನ್ನು, ಹಣ್ಣುಹಂಪಲುಗಳನ್ನು ಉಪಯೋಗಿಸುವುದರಿಂದ ಉತ್ತಮ ಆರೋಗ್ಯದಿಂದ ಇರಬಹುದು ಮತ್ತು ನಮ್ಮ ಪರಿಸರವನ್ನು ತ್ಯಾಜ್ಯ ಮುಕ್ತ ಗೊಳಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಿವಿ ಮಾತು ಹೇಳಿದರು.

ಅವರು ಸೋಮವಾರ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಮಿಲಾಗ್ರೆಸ್ ಕಾಲೇಜ್ ಕಲ್ಯಾಣಪುರ, ಮಿಲಾಗ್ರೆಸ್ ಪಿಯು ಕಾಲೇಜ್ ಕಲ್ಯಾಣಪುರ, ಯುವಕ ವೃಂದ ಗಂಗನಾಡು ಬೈಂದೂರು ಇವರ ಸಹಯೋಗದಲ್ಲಿ ನೆಹರು ಯುವ ಕೇಂದ್ರ ಉಡುಪಿ ಇವರು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಎಂಬ ವಿಷಯಗಳ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಲ ಸಂರಕ್ಷಣೆಯನ್ನು ಸಾರಿ ಹೇಳುವ “ಮಳೆ ನೀರಿನೊಂದಿಗೆ ಅನುಸಂಧಾನ” ಎಂಬ ಚಿನ್ನೆ/ಲಾಂಛನ ವನ್ನು ಅನಾವರಣಗೊಳಿಸಿ ಮಾತಾನಾಡಿದ ಅವರು, ಮಳೆ ನೀರಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ, ಕಳೆದ ವರುಷ ಉಡುಪಿ ಜಿಲ್ಲೆ ಅನುಭವಿಸಿದ ನೀರಿನ ಬರಗಾಲ, ಜನತೆ ಅನುಭವಿಸಿದ ಭವಣೆ, ಇದಕ್ಕೆಲ್ಲಾ ಏನು ಕಾರಣ ಎಂಬ ವಿಷಯದ ಬಗ್ಗೆ ಯುವಜನರೊಂದಿಗೆ ಸಂವಾದಿಸಿದ ಅವರು, ಕಳೆದ ಬಾರಿ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪಾವತಿಗಾಗಿ ಜಿಲ್ಲಾಡಳಿತ, ನಗರ ಸಭೆ ಹಾಗೂ ಸ್ಥಳೀಯ ಆಡಳಿತ, ಕೊಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿದೆ. ಅದೇ ನಾವು ಮಳೆ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿ ಸೂಕ್ತ ವಿಧಾನಗಳ ಮೂಲಕ ಉಳಿಸಿಕೊಂಡಿದಿದ್ದರೆ, ಕೆರೆ ಕುಂಟೆ, ಮದಗಗಳ ಹೂಳನ್ನು ಸೂಕ್ತ ಕಾಲದಲ್ಲಿ ತೆಗೆದಿದ್ದರೆ, ಇನ್ನೂ ಹೆಚ್ಚು ಮಳೆ ನೀರು ಶೇಖರಿಸಿಕೊಂಡು ಅತೀ ಬೇಸಿಗೆಯಲ್ಲಿ ನೀರಿನ ಬವಣೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿತ್ತು. ಅಷ್ಟೇ ಅಲ್ಲದೇ ಪ್ರತೀ ಒಬ್ಬರು ತಮ್ಮ ಮನೆಗಳಲ್ಲಿ ಮಳೆ ನೀರಿನ ಕೊಯ್ಲಿನ ವಿಧಾನಗಳನ್ನು ಅಳವಡಿಸಿ, ತೆರೆದ ಬಾವಿ, ಕೊಳವೆ ಬಾವಿ, ಮಳೆ ನೀರು ಶೇಖರಣಾ ಘಟಕಗಳನ್ನು ರೂಪಿಸಿಕೊಂಡು ಬಂದಿದ್ದರೆ ಅಂತರ್ಜಲದ ಮಟ್ಟ ಮೇಲೇರುತ್ತಿತ್ತು ಹಾಗೂ ನೀರಿನ ಬವಣೆ ಕಡಿಮೆ ಆಗುತ್ತಿತ್ತು ಎಂದರು.

ತಮ್ಮ ಮನೆಯ ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ವಿಲೇವಾರಿ ಸಮರ್ಪಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ಅಳವಡಿಸಿಕೊಂಡಿದ್ದು , ಸಾರ್ವಜನಿಕರು ವೀಕ್ಷಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿಯನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ/ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಿಕೊಂಡು ಬರುವಲ್ಲಿ ನೀಲ ನಕ್ಷೆಯ ತಯಾರಿ ಈಗಾಗಲೆ ನಡೆದಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಹಾಗೂ ಪ್ರವಾಸೋದ್ಯಮದ ಪರಿಣಿತರೊಂದಿಗೆ ಚರ್ಚಿಸಿ ಈ ಮಹತ್ವದ ನಿರ್ದಾರವನ್ನೂ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೆರೆ ಒತ್ತುವರಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವ ಜವಾಬ್ದಾರಿಯನ್ನು ಸ್ಥಳೀಯ ನಾಗರಿಕರು ವಹಿಸಬೇಕೆಂದು ಕೋರಿದರು.

ಈ ವರ್ಷದ ಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ, ಆಯ್ಕೆಯಾದ ಕಾಪು ತಾಲೂಕು ಹೆಜಮಾಡಿ “ಯುವಕ/ಯುವತಿ ವೃಂದ (ರಿ) ಕ್ಕೆ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರಧಾನ ಮಾಡಿದರು.

ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕ ಡಾ. ಲಾರೆನ್ಸ್ ಸಿ ಡಿಸೋಜ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ರಾಜ್, “ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ” ಯ ಬಗ್ಗೆ ತಿಳಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜೋಸೆಫ್ ಜಿ ಎಮ್ ರೆಬೆಲ್ಲೊ “ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ” ವಿಚಾರದಲ್ಲಿ ದೃಶ್ಯ ಶ್ರಾವ್ಯಗಳ ಮೂಲಕ ಯುವಜನರಿಗೆ ಕಾರ್ಯಾಗಾರದ ಮಾಹಿತಿಯನ್ನು ನೀಡಿದರು.

ಮಿಲಾಗ್ರಿಸ್ ಕಾಲೇಜಿನ ಪದವಿ ಮತ್ತು ಪದವಿ ಪೂರ್ವ ಪ್ರಾಂಶುಪಾಲರುಗಳಾದ ಡಾ. ವಿನ್ಸೆಂಟ್ ಆಳ್ವಾ ಹಾಗೂ ಸವಿತ ಕುಮಾರಿ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ವಿಲ್ಪ್ರೇಡ್ ಡಿಸೋಜ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜೋಸೆಫ್ ಜಿ ಎಮ್ ರೆಬೆಲ್ಲೊ ವಂದಿಸಿದರು. ಮಿಲಾಗ್ರಿಸ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿನಂದನ್ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.


Spread the love