ಮಾದಕ ವ್ಯಸನಕ್ಕೆ ‘ನೋ’ಅನ್ನದಿದ್ದರೆ ಜೀವನ ಹಾಳು: ವ್ಯಸನದಿಂದ ಹೊರಬಂದ ಸಂತ್ರಸ್ತೆಯ ಕಿವಿಮಾತು
ಮಂಗಳೂರು: ‘ಕಾಲೇಜಿನ ಹದಿ ಹರೆಯದಲ್ಲಿ ಶೋಕಿಗಾಗಿ, ನನ್ನ ಜೀವನಕ್ಕೆ ಸ್ವಾತಂತ್ರ್ಯ ಬೇಕೆನ್ನುವ ಉನ್ಮಾದದಲ್ಲಿ ಮಾದಕ ವ್ಯಸನದ ಚಟಕ್ಕೆ ತುತ್ತಾಗಿ ದೈಹಿಕವಾಗಿ, ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿ ಅದರಿಂದ ಹೊರಬೇಕೆಂದರೆ ಸಮಾಜದೆದುರು ನಾನು ಮಾತ್ರವಲ್ಲ, ನನ್ನ ತಾಯಿಯೂ ತಲೆತಗ್ಗಿಸುವಂತಾಯಿತು. ಹಾಗಾಗಿ ಯಾವುದೇ ರೀತಿಯ ಮಾದಕ ವ್ಯಸನಗಳಿಗೆ ‘ನೋ’ ಎಂಬುದನ್ನು ಕಲಿಯಿರಿ’ ಎಂದು ಸುಮಾರು 12 ವರ್ಷಗಳ ಮಾದಕ ವ್ಯಸನ ಚಟದಿಂದ ಹೊರಬಂದು ಇದೀಗ ಈ ದುಶ್ಚಟದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಬೀನಾ ಎಂಬವರು ಕಿವಿಮಾತು ಹೇಳಿದ್ದಾರೆ.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ಅನುಭವಗಳನ್ನು ಅವರು ಹಂಚಿಕೊಂಡರು.
‘ಕಾಲೇಜಿನ ಅವಧಿಯಲ್ಲಿ ಸಿಗರೇಟ್, ಬಿಯರ್, ವೈನ್, ಗಾಂಜಾದಿಂದ ಆರಂಭವಾದ ನನ್ನ ಮಾದಕ ವ್ಯಸನದ ಪಯಣ, ಉತ್ತಮ ವೇತನದ ಉದ್ಯೋಗ, ವಿದೇಶ ಪ್ರಯಾಣದ ಅವಕಾಶದ ಹೊರತಾಗಿಯೂ ನನ್ನ ತಾಯಿಯಿಂದ ದೂರವಾಗಿ, ಭಾವನೆಗಳೇ ಇಲ್ಲದಂತೆ ನನ್ನನ್ನು ರೂಪಿಸಿತ್ತು. ಕೊನೆಗೊಂದು ದಿನ ಈ ಚಟದಿಂದ ಹೊರಬರಲಾರದೆ ನನ್ನ ಜೀವನವನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದು ತಾಯಿಗೆ ಕರೆ ಮಾಡಿದಾಗ, ಆಕೆಯ ಸಾಂತ್ವಾನದ ನುಡಿ ನಾನು ಮತ್ತೆ ತಾಯಿ ಬಳಿ ಬರುವಂತೆ ಮಾಡಿತು. ಆದರೆ ಅದಾಗಲೇ ಹದಗೆಟ್ಟಿದ್ದ ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಯಿಂದ ನಾನು ಹೊರಬರಲು ಇನ್ನಿಲ್ಲದಂತೆ ಒದ್ದಾಡಬೇಕಾಯಿತು. ನಮ್ಮ ಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬ ಚಿಂತನೆ ಇಲ್ಲದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಮ್ಮ ಜತೆ ನಮ್ಮ ಕುಟುಂಬವನ್ನೂ ಜೀವನಪೂರ್ತಿ ತಲೆತಗ್ಗಿಸುವಂತೆ ಮಾಡುತ್ತದೆ. ಅದಕ್ಕೆ ನಾವು ಅವಕಾಶ ನೀಡಬಾರದು. ಮಾದಕ ದ್ರವ್ಯದ ವ್ಯಸನವೆಂಬ ಅಪರಾಧದ ಸಂತ್ರಸ್ತರಾಗುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದ್ದು, ಮಹಿಳೆಯರಿಗಾಗಿನ ಡಿಎಡಿಕ್ಷನ್ ಸೆಂಟರ್ಗಳ ಅಗತ್ಯವಿದೆ’ ಎಂದು ಬೀನಾ ಅಭಿಪ್ರಾಯಿಸಿದರು.