ಮಾ.17: ಸಹಬಾಳ್ವೆ ತಂಡದ ಸರ್ವಜನೋತ್ಸವ ಸಮಾವೇಶಕ್ಕೆ ಉಡುಪಿ ಸರ್ವ ಸಿದ್ದ – ಅಮೃತ್ ಶೆಣೈ

Spread the love

ಮಾ.17: ಸಹಬಾಳ್ವೆ ತಂಡದ ಸರ್ವಜನೋತ್ಸವ ಸಮಾವೇಶಕ್ಕೆ ಉಡುಪಿ ಸರ್ವ ಸಿದ್ದ – ಅಮೃತ್ ಶೆಣೈ

ಉಡುಪಿ: ವಿವಿಧತೆಯಲ್ಲಿ ಏಕತೆ ಮತ್ತು ಮತ್ತು ಸಹಬಾಳ್ವೆಯನ್ನು ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಬಾಳ್ವೆ ಸಂಘಟನೆಯ ವತಿಯಿಂದ ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ ಬಳಿ ಮಾರ್ಚ್ 17 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸರ್ವಜನೋತ್ಸವ ಸಮಾವೇಶ ಜರುಗಲಿದೆ ಎಂದು ಸಹಬಾಳ್ವೆ ತಂಡದ ಸಂಚಾಲಕ ಅಮೃತ್ ಶೆಣೈ ಹೇಳಿದರು.

ಅವರು ಶುಕ್ರವಾರ ಸಹಬಾಳ್ವೆ ತಂಡದ ಕಚೇರಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ, ಸಹಬಾಳ್ವೆ ಎನ್ನುವುದು ಭಾರತದ ಜನರ ಸಹಜ ಬದುಕು. ಆದರೆ ಇತ್ತಿಚಿನ ದಿನಗಳಲ್ಲಿ ಈ ಕಲ್ಪನೆಯನ್ನು ತೀರಾ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾನವೀಯತೆಯ ಮೂಲಾಧಾರವಾಗಿರುವ ಈ ಸಿದ್ದಾಂತವನ್ನು ಉಡುಪಿಯೂ ಸೇರಿದಂತೆ ದೇಶದಾದ್ಯಂತ ದುರ್ಬಲಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇದರ ಪರಿಣಾಮವಾಗಿ ಮಾನವ ಜೀವ ಮತ್ತು ಮನುಷ್ಯನ ಘನತೆಯ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ಒಂದು ಪ್ರಯತ್ನವಾಗಿ ಸಹಬಾಳ್ವೆ ಉಡುಪಿ ವತಿಯಿಂದ ಮಾರ್ಚ್ 17 ರಂದು ಸಮಾವೇಶವನ್ನು ಆಯೋಜಿಸಲಾಗಿದ್ದು ಸಮಾವೇಶದ ಉದ್ದೇಶಗಳು ಹೀಗಿವೆ.

ದೇಶದ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವಗಳನ್ನು ಎತ್ತಿಹಿಡಿಯುವುದು, ಪ್ರಜಾಪ್ರಭುತ್ತವದ ಮೂಲಾಧಾರವಾಗಿರುವ ಭಾರತದ ಸಂವಿಧಾನವನ್ನು ರಕ್ಷಿಸುವುದು, ದೇಶದ ಸರ್ವಧರ್ಮ ಸಮಭಾವ ಹಾಗೂ ಜಾತ್ಯಾತೀತ ಪರಂಪರೆಯನ್ನು ಉಳಿಸಿಕೊಳ್ಳುವುದು. ಮತ ಧರ್ಮ, ಜಾತಿ ಭಾಷೆ, ಪ್ರಾಂತ್ಯ, ಪಂಥ ಇತ್ಯಾದಿ ವೈವಿದ್ಯತೆಗಳ ಜೊತೆ ಜೊತೆಗೆ ದೇಶದಅಖಂಡತೆ ಹಾಗೂ ಐಕ್ಯತೆಗಳನ್ನು ಇನ್ನಷ್ಠು ಗಟ್ಟಿಗೊಳಿಸುವುದು. ವಿಚ್ಛಿದ್ರಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸರ್ವಜನಾಂಗದ ಶಾಂತಿಯ ತೋಟ ಎಂಬಈ ದೇಶದ ಹಿರಿಮೆಯನ್ನು ಶಾಶ್ವತಗೊಳಿಸುವುದು ಇದು ವಿವಿಧ ಸಿದ್ಧಾಂತ, ಸರ್ವಪಕ್ಷ ಹಾಗೂ ಸರ್ವಧರ್ಮಿಯರ ಈ ಸಮಾವೇಶವನ್ನು ನಮ್ಮ ಜಿಲ್ಲೆಯ ಸಹಬಾಳ್ವೆ ಹಾಗೂ ಸಹೋದರತೆಯ ಒಂದು ವಿರಾಟ್ ಪ್ರದರ್ಶನದ ರೂಪದಲ್ಲಿ ಪ್ರಸ್ತುತ ಪಡಿಸಿ ಜಿಲ್ಲೆಯ ಬಗ್ಗೆ ಸದಭಿಪ್ರಾಯವನ್ನು ಹೆಚ್ಚಿಸುವುದು ಸಮಾವೇಶದ ಪ್ರಮುಖ ಉದ್ಧೇಶವಾಗಿದೆ ಎಂದರು.

ಸಮಾವೇಶದಲ್ಲಿ ಮರುಳಕಂಕರ ದೇವರ ಗುರುಪೀಠ ಕಲಬುರ್ಗಿ ಇದರ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ರಾಜ್ಯದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಸಿಪಿಐ(ಎಮ್) ನಾಯಕರಾದ ಜಿ ಎನ್ ನಾಗರಾಜ್, ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ, ಅಂಕಣಕಾರರು, ಪತ್ರಕರ್ತರು ಆಗಿರುವ ಶಿವಸುಂದರ್, ಪತ್ರಕರ್ತರು ಹಾಗೂ ಚಿಂತಕರೂ ಅಗಿರುವ ದಿನೇಶ್ ಅಮೀನ್ ಮಟ್ಟು, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ದಲಿತ ಚಿಂತಕರು ಮತ್ತು ಪತ್ರಕರ್ತರಾಗಿರುವ ಇಂದೂಧರ ಹೊನ್ನಾಪುರ, ಉಜ್ವಾಡ್ ಪತ್ರಿಕೆಯ ಸಂಪಾದಕ ಚೇತನ್ ಲೋಬೊ, ವಾರ್ತಾಭಾರತಿ ಕನ್ನಡ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ, ಮಾಜಿ ವಿಧಾಪರಿಷತ್ ಸಭಾಪತಿ ವಿ ಆರ್ ಸುದರ್ಶನ್ ಭಾಗವಹಿಸಲಿದ್ದಾರೆ ಎಂದರು. ಸಮಾವೇಶದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಮಿತಿಯ ಸದಸ್ಯರಾದ ಜಿ ರಾಜ್ ಶೇಖರ್, ವೆರೋನಿಕಾ ಕರ್ನೆಲಿಯೋ, ಯೋಗಿಶ್ ಶೆಟ್ಟಿ, ರೋಶನಿ ಒಲಿವೇರಾ, ಯಾಸಿನ್ ಮಲ್ಪೆ, ವಂ|ವಿಲಿಯಂ ಮಾರ್ಟಿಸ್, ಸ್ಟೀವನ್ ಕುಲಾಸೊ, ಇದ್ರೀಸ್ ಹೂಡೆ, ಖಲೀಲ್ ಕೆರಾಡಿ, ಅನಿತಾ, ಪ್ರಮೀಳಾ ಜತ್ತನ್ನ, ಬಾಲಕೃಷ್ಣ ಶೆಟ್ಟಿ, ಜನಾರ್ಧನ್ ಭಂಡಾರ್ ಕರ್, ಶ್ಯಾಮ್ ರಾಜ್ ಬಿರ್ತಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love