ಮೃತದೇಹ ಹೊತ್ತು ಕಣ್ಣೀರಿಟ್ಟ ಪೊಲೀಸ್ ಸಿಬ್ಬಂದಿಗಳ ತಲೆದಂಡ ಎಷ್ಟು ಸರಿ?
- ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ ಶ್ರೀನಿಧಿ ಹೆಗ್ಡೆ ಪ್ರಶ್ನೆ
ಉಡುಪಿ: ಐಪಿಎಲ್ ಟ್ರೋಫಿ ಗೆದ್ದ RCB ತಂಡದ ಆಟಗಾರರು l ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಕೈಗೊಂಡ ಸಂದರ್ಭದಲ್ಲಿ 11 ಜನ ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗಿರುವುದು ವಿಪರ್ಯಾಸ. ಫ್ರ್ಯಾಂಚೈಸಿ ಒಂದರ ಗೆಲುವನ್ನು ತಮ್ಮ ಗೆಲುವೆಂದು ಬಿಂಬಿಸಲು ಹೊರಟ ರಾಜ್ಯ ಸರ್ಕಾರ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿದ್ದರು. ಆದರೆ ಈಗ ಅದೇ ಪೊಲೀಸ್ ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಆಟಗಾರರನ್ನು ಅಭಿನಂದಿಸಲು, ಅವರ ಜೊತೆ ಫೋಟೊ ಹೊಡೆಸಿಕೊಳ್ಳಲು ತರಾತುರಿಯಲ್ಲಿ ವಿಧಾನ ಸೌಧದ ಮುಂಭಾಗ ಪೂರ್ವ ಸಿದ್ಧತೆ, ಸರಿಯಾದ ಮಾಹಿತಿ ಇಲ್ಲದೆ ಲಕ್ಷಾಂತರ ಜನರನ್ನು ಸೇರಿಸಿ ಮಸಣಕ್ಕೆ ಆಹ್ವಾನ ನೀಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಇದಕ್ಕೆಲ್ಲ ನೇರ ಹೊಣೆ, ಘಟನೆಯ ಮಧ್ಯಾಹ್ನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಮನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡುವಾಗ ಜನರೆಲ್ಲ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದು ಮತ್ತೊಂದು ತಪ್ಪು. ತನ್ನ ಪ್ರಚಾರದ ತೆವಲಿಗೆ ಅಮಾಯಕರ ಜೀವ ಬಲಿ ಪಡೆದ ಉಪಮುಖ್ಯಮಂತ್ರಿ, ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು. ಅದು ಬಿಟ್ಟು ಪೊಲೀಸ್ ಇಲಾಖೆಯನ್ನೇ ದೂಶಿಸುವುದು ಸರಿಯಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 65 ಕೋಟಿಗೂ ಅಧಿಕ ಜನ ಸೇರಿದಾಗ ಆದ ಕಾಲ್ತುಳಿತ ಕುರಿತು ಟೀಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಇಲ್ಲಿನ ಘಟನೆಯ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾಣಸಿಗುತ್ತಿರುವುದು ವಿಪರ್ಯಾಸ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿವೈಎಸ್ಪಿ ಗಣಪತಿ, ಡಿಕೆ ರವಿ ಸಹಿತ ನಿಷ್ಠಾವಂತ ಅಧಿಕಾರಗಳು ಇಂತಹ ಒತ್ತಡಕ್ಕೆ ಸಿಲುಕಿ ಜೀವ ಕಳೆದುಕೊಂಡಿರುವುದು ರಾಜ್ಯಕ್ಕೆ ತಿಳಿದಿರುವ ಸಂಗತಿ. ಹುಬ್ಬಳ್ಳಿಯಲ್ಲಿ ಗಲಭೆ ದಂಗೆ ಮಾಡಿ ಪೊಲೀಸ್ ಸ್ಟೇಶನ್ ಗೆ ಬೆಂಕಿ ಇಡಲು ಮುಂದಾದವರ ಮೇಲಿನ ಕೇಸ್ ವಾಪಸ್ ಮಾಡಿರುವುದು ರಾಜ್ಯದ ಜನತೆ ಮರೆಯಲು ಹೇಗೆ ಸಾಧ್ಯ?, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಶಾಸಕರ ಮನೆಗೆ ಬೆಂಕಿ ಹಾಕಿರುವುದು ಇದೆ ಕಾಂಗ್ರೆಸ್ಸ್ ಸರ್ಕಾರದ ಅವಧಿಯಲ್ಲಿ ಎಂಬುದು ತಿಳಿದಿದೆ. ತನ್ನ ತುಷ್ಟೀಕರಣ ರಾಜಕೀಯಕ್ಕೆ ಹಾಗೂ ಪ್ರಚಾರದ ತೆವಲಿಗೆ ಒತ್ತಡ ಹೇರುವ ಮೂಲಕ ಕಾರ್ಯಕ್ರಮ ನಡೆಸಿ ಬಳಿಕ ಅಮಾಯಕರ ಜೀವಕ್ಕೆ ಕುತ್ತು ತರುವ ರಾಜ್ಯ ಸರ್ಕಾರದ ನಡೆ ನಿಜಕ್ಕೂ ಯಾರು ಒಪ್ಪುವಂತಹದಲ್ಲ.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿಗಳು ರಾಜ್ಯದ ಶಕ್ತಿ ಕೇಂದ್ರದ ದ್ವಾರಕ್ಕೆ ತುಳಿದು ಅಂದಿನ ಐಪಿಎಸ್ ಅಧಿಕಾರಿ ಕಮಿಷನರ್ ಶಂಕರ್ ಬಿದರಿ ಅವರನ್ನು ದೂಡಿರುವುದು, ಇತ್ತೀಚೆಗೆ ವಿಜಯನಗರದಲ್ಲಿ ಜಿಲ್ಲಾಧಿಕಾರಿಗೆ, ಬೆಳಗಾವಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕವಾಗಿ ನಿಂದಿಸಿ ಕಪಾಳಕ್ಕೆ ಹೊಡೆಯಲು ಮುಂದಾಗಿದ್ದು ರಾಜ್ಯದ ಜನತೆ ಮಾನ್ಯ ಮುಖ್ಯಮಂತ್ರಿಗಳ ಇಂತಹ ಅಧಿಕಾರ ದರ್ಪ ದುರ್ವರ್ತನೆ ನೋಡಿ ರೋಸಿ ಹೋಗಿದ್ದಾರೆ ಈಗ ಇಂದಿನ ಘಟನೆ ಸಿದ್ದರಾಮಯ್ಯ ಸರಕಾರಕ್ಕೆ ತನ್ನ ದುರ್ವರ್ತನೆಯ ಹೊಸ ಕಿರೀಟವಷ್ಟೇ. ಜನಸಾಮಾನ್ಯರ ಹೆಣ ಬಿದ್ದಾಗ ಸಂಭ್ರಚಾರಣೆಯ ಮೈದಾನದ ಒಳ ಬಂದು ಟ್ರೋಫಿಗೆ ಮುತ್ತಿಕ್ಕಿದ್ದು ಇದೆ ಸೂತ್ರಧಾರ ಕಣ್ಣೀರು ಹಾಕುತ್ತ ಪೊಲೀಸರನ್ನು ಮನೆಗೆ ಕಳುಹಿಸಿದ್ದು ರಾಜ್ಯದ ದುರವಸ್ಥೆ.
ಅನಾವಶ್ಯಕವಾಗಿ ಅಮಾಯಕ ಜನರ ಮನೆಗೆ ಮದ್ಯರಾತ್ರಿ ವೇಳೆಯಲ್ಲಿ ತೆರಳಿ ಫೋಟೋ ತೆಗೆದು ಜಿಪಿಎಸ್ ಅಳವಡಿಸಿ ಬೆದರಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ ಅದು ಬಿಟ್ಟು ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯಕ್ರಮಕ್ಕೆ ಅವಕಾಶ ಗಿಟ್ಟಿಸಿಕೊಂಡು ತಮ್ಮ ಮಕ್ಕಳು ಮೊಮ್ಮಕ್ಕಳು ಹಿಂಬಾಲಕರ ಫೋಟೋ ಹುಚ್ಚಿಗೆ ನಿಷ್ಠಾವಂತ ಪೊಲೀಸ್ ತಲೆದಂಡ ಸರಿಯಲ್ಲ ಇದು “ಕೋತಿ ಮೊಸರು ತಿಂದು ಮೇಕೆ ಬಾಯಿಗೆ ವರೆಸಿತು” ಎಂಬ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಇದು ಖಂಡನೀಯ ಮತ್ತು ಅಮಾನವೀಯ ಎಂದು ತಿಳಿಸಿದ್ದಾರೆ