ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ಹಂತದ 15ನೇ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ಹಂತದ 15ನೇ ಶ್ರಮದಾನದ ವರದಿ

ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 15 ನೇ ಭಾನುವಾರದ ಶ್ರಮದಾನವನ್ನು ದಿನಾಂಕ 17-3-2019 ರಂದು ವೆಲೆನ್ಸಿಯಾ ಗೋರಿಗುಡ್ಡೆ ಪರಿಸರದಲ್ಲಿ ಆಯೋಜಿಸಲಾಗಿತ್ತು. ವೆಲೆನ್ಸಿಯಾ ಚರ್ಚಿನ ಹತ್ತಿರ ಬೆಳಿಗ್ಗೆ 7-30 ಕ್ಕೆ ವಂದನೀಯ ಫಾ. ಜೇಮ್ಸ ಡಿಸೋಜಾ ಹಾಗೂ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಶ್ರಮದಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫಾ. ಜೇಮ್ಸ್ ಡಿಸೋಜಾ “ನಾವಿರುವ ಈ ಪರಿಸರ ಮನುಕುಲಕ್ಕೆ ದೇವರು ನೀಡಿದ ಕೊಡುಗೆ ಆದ್ದರಿಂದ ಇದನ್ನು ಜವಾಬ್ದಾರಿಯಿಂದ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈಗಾಗಲೇ ಮಾನವ ಪರಿಸರವನ್ನು ಹಾಳು ಮಾಡಿದ್ದಾನೆ. ಆದರೆ ಇದೀಗ ಅದನ್ನು ಸರಿಪಡಿಸಿ ಭವಿಷ್ಯ ಜನಾಂಗಕ್ಕೆ ಉತ್ತಮ ಪರಿಸರವನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಸ್ವಚ್ಛತೆ ಪ್ರತಿನಿತ್ಯ ನಡೆಯುವ ಪ್ರಕ್ರಿಯೆಯಾಗಬೇಕು. ನಮ್ಮ ಪರಿಸರವನ್ನು ಕಾಪಾಡಲು ಎಲ್ಲರೂ ಕೈ ಜೋಡಿಸುವಂತಾಗಬೇಕು. ರಾಮಕೃಷ್ಣ ಮಿಷನ್ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತೆ ಹಾಗೂ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ರೂಪಿಸಿ ಜನಜಾಗೃತಿ ಮಾಡುತ್ತಿರುವುದು ಅಭಿನಂದನೀಯ ಕಾರ್ಯ” ಎಂದು ತಿಳಿಸಿದರು.

ತದನಂತರ ಮಾತನಾಡಿದ ಅನಿಲ್ ಲೋಬೊ “ಸ್ವಚ್ಛತೆ ನಮ್ಮ ಜೀವನದ ಭಾಗವಾಗಬೇಕು. ಹೇಗೆ ನಮ್ಮ ದೇಹವನ್ನು ಆಸ್ಥೆಯಿಂದ ನಿತ್ಯವೂ ಶುಚಿ ಮಾಡುತ್ತೇವೆಯೋ ಹಾಗೆ ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ನನ್ನ ಮನೆ, ನನ್ನ ಪರಿಸರ, ನನ್ನ ಊರು ಎನ್ನುವ ಭಾವ ನಮ್ಮಲ್ಲಿ ಬರಬೇಕು. ಇಂತಹ ಭಾವವನ್ನು ಜಾಗೃತಿಗೊಳಿಸುವಲ್ಲಿ ಇಂತಹ ಶ್ರಮದಾನಗಳು ಸಹಾಯಕಾರಿ” ಎಂದು ತಿಳಿಸಿ ಶುಭ ಹಾರೈಸಿದರು.

ಫಾ. ಅರುಣ ಲೋಬೊ, ಫಾ. ಜೊಸ್ವಿನ್ ಪ್ರವೀನ್, ಕುದ್ರೋಳಿ ಗಣೇಶ್, ಪ್ಯಾಟ್ರಿಕ್ ಡಿಸೋಜಾ, ಮನೋಹರ್ ಶೆಟ್ಟಿ, ಲಿಜಿ ಪಿಂಟೋ, ರಾಧಾಕೃಷ್ಣ ಪಡೀಲ್, ಪೆÇ್ರೀ. ಫ್ರಾನ್ಸಿಸ್ ಕ್ರಾಸ್ತಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರಮದಾನ: ಪ್ರಥಮದಲ್ಲಿ ಸ್ವಚ್ಛ ಯಕ್ಕೂರು ಕಾರ್ಯಕರ್ತರು ಗೋರಿಗುಡ್ಡೆಯಲ್ಲಿರುವ ಸ್ಮಶಾನದ ಮುಂಭಾಗದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿದರು. ಹಾಗೂ ಅಲ್ಲಿ ಕಲ್ಲು ಮಣ್ಣುಗಳ ರಾಶಿಯನ್ನು ಜೆಸಿಬಿ ಬಳಸಿ ತೆಗೆಯಲಾಯಿತು. ಜೊತೆಗೆ ತ್ಯಾಜ್ಯಗಳಿಂದ ತುಂಬಿದ್ದ ತೋಡುಗಳನ್ನು ಸ್ವಚ್ಛಗೊಳಿಸಲಾಯಿತು.

ಇದೀಗ ಅಲ್ಲಿಯ ಇಡೀ ಜಾಗದಲ್ಲಿ ಹೂಕುಂಡಗಳನ್ನಿಟ್ಟು ಆಕರ್ಷಣೀಯ ಸ್ಥಳವನ್ನಾಗಿಸಲಾಗಿದೆ. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಡಾ. ಧನೇಶ್ ಕುಮಾರ ನೇತೃತ್ವದಲ್ಲಿ ವೆಲೆನ್ಸಿಯಾ ಚರ್ಚ ಬದಿಯ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಹಸನು ಮಾಡಿದರು. ಸಂದೀಪ್ ಕೋಡಿಕಲ್ ಹಾಗೂ ಕಾರ್ಯಕರ್ತರು ವೆಲೆನ್ಸಿಯಾ ಸರ್ಕಲ್ ಬಳಿಯಿದ್ದ ತ್ಯಾಜ್ಯರಾಶಿಯನ್ನು ತೆಗೆದು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಿ ಮಣ್ಣು ಹಾಕಿ ಹೂಗಿಡಗಳನ್ನಿಟ್ಟು ಮತ್ತೆ ಅಲ್ಲಿ ಯಾರೂ ಕಸ ಹಾಕದಂತೆ ಜಾಗವನ್ನು ಸುಂದರಗೊಳಿಸಿದರು. ಅದೇ ರೀತಿ ಗೋರಿಗುಡ್ಡ ನಾಲ್ಕನೇ ಅಡ್ಡರಸ್ತೆಯಲ್ಲಿದ್ದ ಕಲ್ಲುಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಉಳಿದಂತೆ ಆಶ್ರಮದ ಹಿರಿಯ ಸ್ವಯಂಸೇವಕರು ಗೋರಿಗುಡ್ಡ ರಸ್ತೆಯಲ್ಲಿ ಶ್ರಮದಾನ ಮಾಡಿದರು. ಪ್ರಮುಖರಾದ ದಿಲ್‍ರಾಜ್ ಆಳ್ವ ಶ್ರಮದಾನದ ನೇತೃತ್ವ ವಹಿಸಿದ್ದರು.

ಮನೆ ಮನೆ ಭೇಟಿ: ಸೂಟರ ಪೇಟೆ, ಗೋರಿಗುಡ್ಡ ಹಾಗೂ ವೆಲೆನ್ಸಿಯಾ ಪರಿಸರದ ಆಯ್ದ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿ ಮಾಡಲಾಯಿತು. ಎರಡು ತಂಡಗಳಲ್ಲಿ ಒಟ್ಟು 300 ಮನೆಗಳನ್ನು ಸಂಪರ್ಕಿಸಲಾಯಿತು. ಅನಿರುದ್ಧ ನಾಯಕ್ ಹಾಗೂ ಸುರೇಶ್ ಶೆಟ್ಟಿ ಸ್ವಯಂ ಸೇವಕರನ್ನು ಮಾರ್ಗದರ್ಶಿಸಿದರು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಸೂಕ್ತವಾಗಿ ವಿಲೇವಾರಿ ಮಾಡುವಂತೆ ವಿನಂತಿಸಲಾಯಿತು.

ಮಾರ್ಗಸೂಚಕ ಫಲಕಗಳ ನವೀಕರಣ: ಮಂಗಳೂರಿನ ಅನೇಕ ಕಡೆಗಳಲ್ಲಿ ಮಾರ್ಗಸೂಚಕ ಫಲಕಗಳ ಬಣ್ಣ ಮಾಸಿಹೋಗಿ ದಾರಿಹೋಕರಿಗೆ ಸರಿಯಾಗಿ ಹೆಸರುಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಅಂತಹ ಬೋರ್ಡ್‍ಗಳನ್ನು ನವೀಕರಿಸಲಾಗುತ್ತಿದೆ. ಇಂದು ವೆಲೆನ್ಸಿಯಾ ಬಲ 2ನೇ ಅಡ್ಡರಸ್ತೆ, ಗೋರಿಗುಡ್ಡ ಬಲ 2ನೇ ಅಡ್ಡರಸ್ತೆ, ಗೋರಿಗುಡ್ಡ ಬಲ 4ನೇ ಅಡ್ದರಸ್ತೆ ಹೀಗೆ ಮೂರು ನಾಮ ಫಲಕಗಳನ್ನು ನವೀಕರಿಸಲಾಗಿದೆ. ಆಸನಗಳ ಅಳವಡಿಕೆ ಕಳೆದ ಹಲವು ವಾರಗಳಿಂದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದೂ ಕೂಡ ಉದಯ ಕೆ ಪಿ, ಲೋಕೇಶ್ ಕೊಟ್ಟಾರ ಸೇರಿದಂತೆ ಹಲವು ಜನ ಸ್ವಯಂ ಸೇವಕರು ಅಲ್ಲಿ ಶ್ರಮದಾನ ಮಾಡಿದರು. ಈ ವಾರ ಕುಳಿತುಕೊಳ್ಳುವ ಆಸನಗಳನ್ನು ಅಲ್ಲಿ ಅಳವಡಿಸಿ ಅದಕ್ಕೆ ಬಣ್ಣ ಬಳಿದು ಚೆಂದಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು.

ಸ್ವಚ್ಛ ಸೋಚ್: ವಿಚಾರ ಸಂಕಿರಣಗಳು: ಈ ಬಾರಿ ಕೊನೆಯ ಹಂತದಲ್ಲಿ ಒಟ್ಟು ಏಳು ಕಾಲೇಜುಗಳಲ್ಲಿ ಸೆಮಿನಾರ್‍ಗಳನ್ನು ಆಯೋಜಿಸಲಾಯಿತು. ಕಳೆದ ವಾರ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯ ಉಜಿರೆ, ನಿಟ್ಟೆ ಫಿಸಿಯೋಥೆರಪಿ ಕಾಲೇಜು ದೇರಳಕಟ್ಟೆ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀಧ.ಮ. ಐಐಟಿ ಕಾಲೇಜು ವೇಣೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಕಾರ್ಮೆಲ್ ಪದವಿ ಕಾಲೇಜು ಬಂಟ್ವಾಳ ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಸೆಮಿನಾರಗಳನ್ನು ಹಮ್ಮಿಕೊಳ್ಳಲಾಯಿತು.

ಈ ಗೋಷ್ಠಿಗಳು ಸ್ವಚ್ಛತೆಗೆ ಸಂಬಂಧಿಸಿದ ಭಾಷಣ, ಚರ್ಚೆ, ಪ್ರತಿಜ್ಞಾವಿಧಿ ಹಾಗೂ ಹಸಿಕಸ ಒಣಕಸದ ನಿರ್ವಹಣೆ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದ್ದವು. ಶ್ರೀಲತಾ ಯು, ಎ, ಪೆÇ್ರೀ. ಶೇಷಪ್ಪ ಅಮೀನ್, ನಿವೇದಿತಾ ಕಾಮತ್, ಸರಿತಾ ಶೆಟ್ಟಿ, ಹಾಗೂ ಗೋಪಿನಾಥ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿದ್ದರು. ಸ್ವಚ್ಛ ಸೋಚ್ ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಇಲ್ಲಿಯ ತನಕ ಒಟ್ಟು 48 ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು ಜರುಗಿದವು. ಎಂ.ಆರ್.ಪಿ.ಎಲ್ ಸಂಸ್ಥೆ ಈ ಅಭಿಯಾನಗಳಿಗೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.


Spread the love