ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಪೂರೈಸಲು ಬದ್ಧ: ಸಚಿವ ಕೆ.ಜೆ.ಜಾರ್ಜ್

Spread the love

ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಪೂರೈಸಲು ಬದ್ಧ: ಸಚಿವ ಕೆ.ಜೆ.ಜಾರ್ಜ್

-ಕೆಪಿಸಿಸಿ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಭೇಟಿ,ಅಹವಾಲು ಸ್ವೀಕಾರ

-ಗ್ಯಾರಂಟಿ ಯೋಜನೆಗಳಿಂದಲೇ ತಲಾ ಆದಾಯದಲ್ಲಿ ರಾಜ್ಯವು ದೇಶಕ್ಕೆ ನಂಬರ್ 1

ಬೆಂಗಳೂರು, ಫೆಬ್ರವರಿ 27, 2026: ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಕುಸುಮ-ಸಿ ಯೋಜನೆಯಡಿ ಕೃಷಿ ಫೀಡರ್ ಗಳ ಸೌರೀಕರಣ ಕಾರ್ಯವನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ಕುಸುಮ್-ಸಿ ಯೋಜನೆ ಮೂಲಕ ಕೃಷಿಗೆ ವಿದ್ಯುತ್ ಒದಗಿಸುವ ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಿ 2500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ನೀಡಲು ಕ್ರಮ ವಹಿಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಅದರೆ ಶೇ. 80 ರಷ್ಟು ಸಬ್ಸಿಡಿಯೊಂದಿಗೆ ಕುಸುಮ್- ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಒದಗಿಸುತ್ತಿದ್ದೇವೆ. ಇದು ಕೃಷಿ ಕ್ಷೇತ್ರಕ್ಕೆ ಇಂಧನ ಇಲಾಖೆಯ ಕ್ರಾಂತಿಕಾರಕ ಹೆಜ್ಜೆಯಾಗಿದೆ,” ಎಂದು ತಿಳಿಸಿದರು.

“ನಾಡಿನ ಜನರಿಗೆ ಹಾಗೂ ರೈತರರಿಗೆ ವಿದ್ಯುತ್ ನೀಡುವ ಮೂಲಕ ಇಂಧನ ಇಲಾಖೆ ರಾಜ್ಯದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದು 1.65 ಕೋಟಿ ಕುಟುಂಬಗಳಿಗೆ ಬೆಳಕಾಗಿದೆ. ಇಂಧನ ಇಲಾಖೆ ಇರುವ ಸದವಕಾಶಗಳನ್ನು ಬಳಸಿಕೊಂಡು ನಾಡಿನ ಜನರ ಮುಖ್ಯವಾಗಿ ರೈತರ ಏಳಿಗೆಗೆ ಶ್ರಮಿಸುತ್ತಿದೆ,” ಎಂದರು.

“ಸೌರಶಕ್ತಿಯನ್ನು ಕೃಷಿ ಚಟುವಟಿಕೆಗಳಿಗೆ ಸಂಯೋಜಿಸುವ ಮೂಲಕ ವಿದ್ಯುತ್ ಪರಿವರ್ತಕಗಳ ಮೇಲೆ ಬೀಳುತ್ತಿದ್ದ ಒತ್ತಡ ಹಾಗೂ ವಿದ್ಯುತ್ ಕಳ್ಳತನಗಳಿಗೆ ಕಡಿವಾಣ ಹಾಕಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪಗ್ರತಿ ಸಾಧಿಸಿದ್ದು, ವಿಶ್ವಾಸಾರ್ಹ ಪ್ರಸರಣವನ್ನು ಕಾಯ್ದುಕೊಂಡಿದ್ದೇವೆ,” ಎಂದು ಹೇಳಿದರು.

“ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ನೀಡಿದೆ. ಸರ್ಕಾರ ಗ್ಯಾರಂಟಿಗಳಿಗೆ ಕಳೆದ ಸಾಲಿನಲ್ಲಿ 55,000 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ ಪ್ರತಿ ಕುಟುಂಬಕ್ಕೆ 5,000 ರೂ. ಸಿಗುತ್ತಿದೆ. ಪ್ರತಿಯಾಗಿ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ದುರದೃಷ್ಟವಶಾತ್ ನಾವು ಕಟ್ಟುವ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಕೇವಲ 60,000 ಕೋಟಿ ಹಣವನ್ನು ಮಾತ್ರ ರಾಜ್ಯಕ್ಕೆ ವಾಪಸ್ ನೀಡುತ್ತಿದೆ. ನಮ್ಮ ರಾಜ್ಯದ ಅಭಿವೃದ್ದಿಗೆ ಕೇಂದ್ರವೇ ಅಡ್ಡಗಾಲಾಗಿದೆ,” ಎಂದು ಸಚಿವರು ಆರೋಪಿಸಿದರು.

ಬಿಜೆಪಿಯವರದ್ದು ಹುಸಿ ದೇಶಪ್ರೇಮ

“ಜವಾಹರಲಾಲ ನೆಹರು ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದರು. ಗಾಂಧಿಜೀ ಜತೆಗೆ ಜೈಲುವಾಸ ಅನುಭವಿಸಿದ್ದರು. ಬಿಜೆಪಿಯವರು ಯಾರೂ ದೇಶಕ್ಕಾಗಿ ಜೇಲು ಸೇರಿಲ್ಲ, ಹೋರಾಟ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನೆಹರು ಅವರ ಪರಿಶ್ರಮ ಇವತ್ತು ಫಲಕೊಟ್ಟಿದೆ. ದೇಶ ಅಭಿವೃದ್ಧಿಯತ್ತ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಈಗ ಅವರು ಹೋಗಿ ಸ್ವಿಚ್ ಆನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಹೋಗಿ ಕೇವಲ ಭಾಷಣ ಬಿಗಿಯುತ್ತಾರೆ. ಕೇವಲ ಹುಸಿ ದೇಶಪ್ರೇಮದ ಪ್ರಚೋದನೆಯ ಮಾತುಗಳು ಅಷ್ಟೇ ಇವರ ಬಂಡವಾಳ,” ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಸಚಿವರ ಕೆಪಿಸಿಸಿ ಕಚೇರಿ ಭೇಟಿ ವೇಳೆ ಕಾಂಗ್ರೆಸ್ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ವಾಜೀದ್, ಕೇಂದ್ರ ವಿಭಾಗದ ಅಧ್ಯಕ್ಷ ನಂದಕುಮಾರ್, ಕೆಪಿಸಿಸಿ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments