ರೈತರ ಬೆಳೆ ವಿಮೆ ಪರಿಹಾರ ಮೊತ್ತ ಶೀಘ್ರವಾಗಿ ಮಂಜೂರು ಮಾಡುವಂತೆ ಶಾಸಕ ಯಶ್ಪಾಲ್ ಮನವಿ
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮೇ ತಿಂಗಳಿನಲ್ಲಿ ವಾಡಿಕೆಯ ಸರಾಸರಿ 166 ಮಿ. ಮೀ. ಬದಲಾಗಿ 837 ಮಿ. ಮೀ. ನಷ್ಟು ಮಳೆಯಾಗಿದ್ದು, ಶೇಕಡಾ 409 ರಷ್ಟು ಹೆಚ್ಚುವರಿ ಮಳೆಯಾಗಿರುತ್ತದೆ. ಜೂನ್ ಮಾಹೆಯಲ್ಲಿಯೂ ಅಧಿಕ ಮಳೆಯಾಗಿದ್ದು, ದೇಶದಲ್ಲಿ ಅತ್ಯಧಿಕವಾಗಿ ಉಡುಪಿ ಜಿಲ್ಲೆಯಲ್ಲಿ ದಾಖಲೆ ಮಳೆ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮೇ 15 ರಂದು ಪ್ರಾರಂಭಗೊಂಡ ಮಳೆಯು ನವೆಂಬರ್ ಮಾಹೆಯ ಅಂತ್ಯದವರೆಗೂ ನಿರಂತರವಾಗಿ ಸುರಿದಿದ್ದು, ದೀರ್ಘಾವಧಿಯ ಮಳೆಗಾಲ ಎಂದೆನಿಸಿಕೊಂಡಿದೆ.
ಅನೇಕ ರೈತರು ಇತ್ತೀಚಿನ ಅಕಾಲಿಕ ಮಳೆ, ಗಾಳಿ ಮತ್ತು ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆ ವಿಮೆ ಪರಿಹಾರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿರುತ್ತಾರೆ.
ಸಂಕಷ್ಟಕ್ಕೊಳಗಾದ ರೈತರಿಗೆ ತಕ್ಷಣ ಪರಿಹಾರ ದೊರೆತರೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಸಹಾಯಕವಾಗುತ್ತದೆ. ಈ ಹಿನ್ನಲೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಯಶ್ ಪಾಲ್ ಎ. ಸುವರ್ಣ ರವರು ರೈತರ ಬೆಳೆ ವಿಮೆ ಪರಿಹಾರ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.













