ವಾಹನ ಕಳವು ವಿಮೆ ಕ್ಲೇಮು ನಿರಾಕರಣೆ : ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಗೆ ವಾಹನದ ಮೌಲ್ಯ, ದಂಡ ಮತ್ತು ಬಡ್ಡಿ ಸೇರಿಸಿ ಪರಿಹಾರ ನೀಡಲು ಆದೇಶಿಸಿದ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ
ವಾಹನದ ಕಳವು ಸಂದರ್ಭದಲ್ಲಿ ವಾಹನಕ್ಕೆ ಸೂಕ್ತ ವಿಮೆ ಇದ್ದರೂ ಸಕಾರಣವಿಲ್ಲದೆ ವಿಮಾ ಮೊತ್ತ ನಿರಾಕರಿಸಿದ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪೆನಿ ವಿರುದ್ದ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಚಾಟಿ ಬೀಸಿದ್ದು ವಾಹನದ ಮೌಲ್ಯವೂ ಸೇರಿದಂತೆ 20,000 ರೂಪಾಯಿ ದಂಡ, 10,000 ರೂಪಾಯಿ ಕೋರ್ಟ್ ಖರ್ಚು ಮತ್ತು ಇದಕ್ಕೆ ಬಡ್ಡಿ ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ಶ್ರೀ ಸಾಂತಪ್ಪ ಯು ಎಂಬವರು ಗೂಡ್ಸ್ ಟೆಂಪೋ ವಾಹನ ಸಂಖ್ಯೆ KA 19AD 3058 ರ ಮಾಲಿಕರಾಗಿದ್ದು ತಾರೀಕು 26 ಡಿಸೆಂಬರ್ 2023 ರಂದು ಸಂಜೆ ಕೆಲಸ ಮುಗಿಸಿ ಪಡೀಲ್ ಎಂಬಲ್ಲಿ ಈ ವಾಹನ ನಿಲುಗಡೆಗೊಳಿಸಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ವಾಹನ ಕಳವಾಗಿದ್ದು, ಅದಕ್ಕಾಗಿ ತೀವ್ರ ಹುಡುಕಾಟ ಮತ್ತು ಪೋಲಿಸರಿಗೆ ದೂರು ಕೊಟ್ಟಿದ್ದರೂ ಸಹ ವಾಹನ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಸದ್ರಿ ವಾಹನದ ವಿಮಾಕಂಪೆನಿಗೆ ವಾಹನದ ವಿಮೆಯ ಮೊತ್ತವನ್ನು ಪಾವತಿಸುವಂತೆ ಎಲ್ಲಾ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿದ್ದರೂ ವಿಮಾ ಕಂಪೆನಿಯವರು ನಿಲ್ಲಿಸಿದ ವಾಹನಕ್ಕೆ ಫಿಟ್ನೆಸ್ಸ್ ಇಲ್ಲ ಎಂಬ ಅನಗತ್ಯ ಕಾರಣವೊಡ್ಡಿ ಕ್ಲೇಮನ್ನು ನಿರಾಕರಿಸಿರುತ್ತಾರೆ. ಇದರ ವಿರುದ್ದ ಸಲ್ಲಿಸಿದ ದೂರನ್ನು ಕೂಲಂಕುಶವಾಗಿ ಪರಿಶೀಲಿಸಿದ ಮಾನ್ಯ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಳವಿನ ಸಂದರ್ಭದಲ್ಲಿ ವಾಹನವನ್ನು ದೈನಂದಿನ ಚಟುವಟಿಕೆಯ ನಂತರ ನಿಲುಗಡೆ ಮಾಡಿದ್ದು ಅದು ಚಾಲನೆಯ ಸ್ಥಿತಿಯಲ್ಲಿ ಇರಲಿಲ್ಲ .ಆದ್ದರಿಂದ ಆಗ ಫಿಟ್ನೆಸ್ಸ್ ಸರ್ಟಿಫಿಕೇಟ್ ಅಪ್ರಸ್ತುತ ಮತ್ತು ಕಳವಿಗೂ ಕ್ಲೇಮ್ ನಿರಾಕರಣೆಗೆ ನೀಡಿರುವ ಕಾರಣಕ್ಕೂ ಯಾವುದೇ ಸಂಬಂಧವಿಲ್ಲ . ವಿಮಾ ಕಂಪೆನಿಯವರಿಂದ ಸದ್ರಿ ವಾಹನ ಮಾಲಿಕರಿಗೆ ಸೇವಾ ನ್ಯೂನತೆ ಆಗಿರುತ್ತದೆ. ಈ ಕಾರಣಕ್ಕಾಗಿ ಸದ್ರಿ ವಾಹನದ ಮೌಲ್ಯದ ಜೊತೆಗೆ 20,000 ರೂಪಾಯಿ ದಂಡ, 10,000 ರೂಪಾಯಿ ಕೋರ್ಟ್ ಖರ್ಚು ಮತ್ತು ಬಡ್ಡಿ ಶೇ. 6% ರಂತೆ ಪಾವತಿಸುವಂತೆ ಕೋರ್ಟ್ ವಿಮಾ ಕಂಪೆನಿಗೆ ಆದೇಶಿಸಿದೆ.
ನ್ಯಾಯವಾದಿ ಶ್ರೀ ಅನಿಲ್ ಕುಮಾರ್ ಕೆ. ಇವರು ಗ್ರಾಹಕರ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.













