ವಿಟ್ಲ| ಗುಂಪು ಕಟ್ಟಿಕೊಂಡು ಲಾರಿಗಳನ್ನು ತಡೆದ ಆರೋಪ: ಸುಮಾರು 30 ಮಂದಿಯ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಅಪಘಾತದ ವಿಚಾರವಾಗಿ ಗುಂಪು ಕಟ್ಟಿಕೊಂಡು ರಸ್ತೆಯಲ್ಲಿ ಸಂಚರಿಸುವ ಲಾರಿಗಳನ್ನು ತಡೆದು ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿ ಸುಮಾರು 30 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ರಿಯಾಝ್, ಸಮದ್, ಮೋನು, ರಹಿಮಾನ್, ಸುಲೈಮಾನ್ ಮತ್ತು ಇತರ ಸುಮಾರು 25 ಮಂದಿ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸಂಭವಿಸಿದ ವಿಚಾರವಾಗಿ ಸೋಮವಾರ ರಾತ್ರಿ ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಅಕ್ರಮ ಕೂಟ ಸೇರಿಕೊಂಡು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ನಿಲ್ಲಿಸಿ, ಲಾರಿಗಳು ಸಂಚರಿಸದಂತೆ ತಡೆಯೊಡ್ಡಿ, ಬೊಬ್ಬೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಮಂಗಳಪದವು ಎಂಬಲ್ಲಿ ಬೈಕೊಂದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದು ಬೈಕ್ನಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವಿಚಾರದಲ್ಲಿ ಜನರು ಸೇರಿಕೊಂಡು ಲಾರಿಗಳನ್ನು ತಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.