ವಿಶ್ವ ತುಳು ಸಮ್ಮೇಳನದಲ್ಲಿ ತುಳು ಕೀಬೋರ್ಡ್‌ ಬಿಡುಗಡೆ

Spread the love

ವಿಶ್ವ ತುಳು ಸಮ್ಮೇಳನದಲ್ಲಿ ತುಳು ಕೀಬೋರ್ಡ್‌ ಬಿಡುಗಡೆ

ಭಾರತೀಯ ವಿವಿಧ ಭಾಷೆಗಳನ್ನು ಒಂದೇ ಕೀ-ಬೋರ್ಡ್ ಮೂಲಕ ಬಳಸಲು ಸಾಧ್ಯವಾಗುವಂತಹಾ ಫೋನೆಟಿಕ್ ಕೀ-ಬೋರ್ಡ್ ಸಿದ್ದಗೊಂಡಿದ್ದು, ಅದರ ತುಳು ಲಿಪಿಯ ಕೀ-ಬೋರ್ಡನ್ನು ದಿನಾಂಕ 23.11.2018 ರಂದು ದುಬೈನಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದಲ್ಲಿ ಮಾನ್ಯ ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಅಮೃತ ಹಸ್ತದಲ್ಲಿ ವಿಶ್ವದಾದ್ಯಂತ ಬಳಕೆಗೆ ಅನುಕೂಲವಾಗುವಂತೆ ಬಿಡುಗಡೆ ಮಾಡಲಿದ್ದಾರೆ.

ಈ ಕೀ-ಬೋರ್ಡನ್ನು ಉಡುಪಿ ಜಿಲ್ಲೆಯ ಕುತ್ಯಾರು ಮೂಲದ ಅಮೆರಿಕಾದಲ್ಲಿ ನೆಲೆಸಿರುವ ಸಾಫ್ಟವೇರ್ ತಜ್ಞ ಶ್ರೀಯುತ ಗುರುಪ್ರಸಾದ್ ರವರು ತಯಾರಿಸಿದ್ದು, ಇದರಲ್ಲಿ 12 ಭಾರತೀಯ ಭಾಷೆಗಳನ್ನು ಕೇವಲ ಸಂಕೇತಗಳನ್ನು ಬದಲಾಯಿಸುವ ಮೂಲಕ ಬಳಸಲು ಸಾದ್ಯವಾಗುವಂತೆ ತಯಾರು ಮಾಡಲಾಗಿದೆ. ಕನ್ನಡ, ತಮಿಳ್, ತೆಲುಗು, ಮಲಯಾಳಮ್, ತುಳು, ದೇವನಾಗರಿ, ಸಂಸ್ಕ್ರತ, ಬೆಂಗಾಳಿ, ಗುರುಮುಖಿ, ಒಡಿಯಾ, ಗುಜರಾತಿ ಅಲ್ಲದೆ ಕಾಶ್ಮೀರಿ ಲಿಪಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ನಮಗೆ ತಿಳಿದಿರುವ ಲಿಪಿಯ ಕೀ-ಬೋರ್ಡನ್ನು ಬಳಸಿ ಯಾವುದೇ ಭಾರತೀಯ ಲಿಪಿಗಳನ್ನು ಮುದ್ರಿಸಬಹುದು, ಅಂದರೆ ನಮಗೆ ತಿಳಿದಿರುವ ಕನ್ನಡ ಲಿಪಿಯ ಕೀ-ಬೋರ್ಡನ್ನು ಬಳಸಿ ಕಾಶ್ಮೀರಿ ಬಾಷೆಯ ಲೇಖನವನ್ನು ರಚಿಸಬಹುದು. ಇದರಿಂದಾಗುವ ಅತೀ ಮುಖ್ಯ ಲಾಭ ಅಂದರೆ, ನಮಗೆ ತಿಳಿಯದೇ ಇರುವ ಲಿಪಿಯಾದ ತುಳುವನ್ನು ಕಲಿಯಲು ಹಾಗೂ ತುಳು ಲಿಪಿಯಲ್ಲಿ ಲೇಖನವನ್ನು ಬರೆಯಲು ಸುಲಭ ಸಾದ್ಯವಾಗುತ್ತದೆ. ಅಲ್ಲದೆ ತುಳು ಲಿಪಿಗೆ ಯುನಿಕೋಡ್ ಸಿಗದೇ ಇದ್ದರೂ ಈಚೆಗೆ ಲಬ್ಯವಾದ ತುಳುಲಿಪಿಯನ್ನು ಬಳಸಲು ಸಾಧ್ಯವಾಗುವಂತೆ ಈ ಕೀ-ಬೋರ್ಡನ್ನು ತಯಾರಿಸಿದ್ದಾರೆ. ಈ ಕೀ-ಬೋರ್ಡ್ ಯು.ಎಸ್.ಬಿ ಮೂಲಕ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಗಳಿಗೆ ಸಂಪರ್ಕ ಕಲ್ಪಿಸುವಂತೆ ತಯಾರು ಮಾಡಲಾಗಿದ್ದು ವಿಂಡೋಸ್ ಅಪರೇಟಿಂಗ್ ಸಿಸ್ಟಮ್, ಲೀನಕ್ಸ್ ಹಾಗೂ ಆಂಡ್ರಾಯ್ಡ್ ಗಳಲ್ಲೂ ಬಳಸಬಹುದಾಗಿದ್ದರಿಂದ ತುಳು ಲಿಪಿ ಕಲಿಯಲು ಆಸಕ್ತರಿಗೊಂದು ವರದಾನವಾಗಲಿದೆ.

ಪ್ರಪ್ರಥಮ ತುಳು ಲಿಪಿಯನ್ನು ಗಣಕೀಕರಿಸಿ ತುಳುವರಿಗೆ ಸಮರ್ಪಿಸಿದ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಮಾ. ನಿಷ್ಕಲ್ ರಾವ್ ಹಾಗೂ ಮಾ. ನಿಶ್ಚಿತ್ ರಾವ್ ಸಹೋದರರು ನಿರ್ಮಿಸಿರುವ “ಶ್ರೀಹರಿ” ತುಳು ಲಿಪಿಯನ್ನೇ ಈ ಕಿ-ಬೋರ್ಡ್ ನಲ್ಲಿಬಳಸಲಾಗಿದ್ದು, ದುಬೈನಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಸಂಘಟಕರ ವಿಶೇಷ ಆಹ್ವಾನದ ಮೇರೆಗೆ ಇಬ್ಬರೂ ಸಹೊದರರು ದುಬೈಗೆ ತೆರಳಿ “ತುಳು ಲಿಪಿಯ ಗಣಕೀಕರಣದ ಮಹತ್ವ” ದ ಕುರಿತು ವಿಚಾರ ಮಂಡಿಸಲಿದ್ದು ಆ ಬಳಿಕ ಈ ಫೊನೆಟಿಕ್ ಕೀ-ಬೋರ್ಡ್ ಲೋಕಾರ್ಪಣೆಗೊಳ್ಳಲಿದೆ.


Spread the love