ವೈಫಲ್ಯ ಮರೆಮಾಚಲು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ ರಾಜ್ಯ ಸರಕಾರ : ಯಶ್ಪಾಲ್ ಸುವರ್ಣ
ಉಡುಪಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಅಮಾಯಕರ ಸಾವಿನ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಬೆದರಿ ಸರ್ಕಾರದ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿರಿಯ ಪೋಲಿಸ್ ಅಧಿಕಾರಿಗಳನ್ನು ಅಮಾನತು ಮಾಡಿ ಬಲಿಪಶು ಮಾಡಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖುದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ರವರೇ ಈ ಅನಾಹುತಕ್ಕೆ ಪೊಲೀಸರು ಹೊಣೆಯಲ್ಲ ಎಂದು ಹೇಳಿಕೆ ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ಸರ್ಕಾರದ ವರ್ಚಸ್ಸಿನ ಹಾನಿ ನಿಯಂತ್ರಿಸಲು ಈ ಕ್ರಮ ಕೈಗೊಂಡಿದೆ.
ಆರ್. ಸಿ. ಬಿ. ತಂಡದ ಐತಿಹಾಸಿಕ ಗೆಲುವಿನ ಸಾಧನೆಯನ್ನು ತಮ್ಮ ರಾಜಕೀಯ ಪ್ರತಿಷ್ಟೆಯ ಉದ್ದೇಶಕ್ಕಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾಡಿದ ಪರಿಣಾಮದಿಂದ ಇಂದು 11 ಮಂದಿ ಅಮಾಯಕ ಯುವ ಜನತೆಯ ಹೃದಯವಿದ್ರಾವಕ ಸಾವಿಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು.
ಪೋಲಿಸರು ನೀಡಿದ ಅಪಾಯದ ಸೂಚನೆಯನ್ನು ಪರಿಗಣಿಸದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಿ ಉಂಟಾದ ದುರಂತಕ್ಕೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವುದು ಖಂಡನೀಯ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಲು ಮುಂದಾಗಿದೆ.
ಸರ್ಕಾರದ ಕೈಗೊಂಬೆಯಂತೆ ವರ್ತಿಸುವ ಪೋಲಿಸ್ ಇಲಾಖೆಗೂ ಸರ್ಕಾರದ ಈ ನಿರ್ಧಾರ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಸರಕಾರದ ಸ್ವಯಂಕೃತ ಅಪರಾಧದಿಂದ ಸಮಸ್ಯೆ ಉಂಟಾದಾಗ ಪೊಲೀಸರನ್ನೇ ಬಲಿಪಶು ಮಾಡಲು ಸರ್ಕಾರ ಹಿಂಜರಿಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.