ಶುದ್ಧ ನೀರು ಘಟಕ: ಪ್ರತೀ ವಾರ ವರದಿ ನೀಡಲು ಜಿ.ಪಂ.ಅಧ್ಯಕ್ಷೆ ಸೂಚನೆ

Spread the love

ಶುದ್ಧ ನೀರು ಘಟಕ: ಪ್ರತೀ ವಾರ ವರದಿ ನೀಡಲು ಜಿ.ಪಂ.ಅಧ್ಯಕ್ಷೆ ಸೂಚನೆ

ಮ0ಗಳೂರು : ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳ ಪ್ರಗತಿಯ ಬಗ್ಗೆ ಪ್ರತೀ ವಾರ ತನಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದ್ದಾರೆ.

ಅವರು ಮಂಗಳವಾರ ಜಿ.ಪ ಮ. ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳ ಅನುಷ್ಠಾನದಲ್ಲಿ ತೀವ್ರ ವಿಳಂಭವಾಗುತ್ತಿದೆ. ಈಗಾಗಲೇ ಪೂರ್ಣಗೊಂಡಿರುವ ಘಟಕಗಳಿಗೆ ಕಾಯಿನ್ ಬಾಕ್ಸ್, ವಿದ್ಯುತ್ ಸಂಪರ್ಕ ಸೇರಿದಂತೆ ಅಂತಿಮ ಹಂತದ ಮೂಲಸೌಕರ್ಯ ಕಲ್ಪಿಸದೇ ಇರುವುದರಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸದ್ಯದ ಸಂದರ್ಭದಲ್ಲಿ ಶುದ್ಧ ನೀರು ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ಶುದ್ಧ ನೀರು ಘಟಕಗಳ ಅನುಷ್ಠಾನ ವಹಿಸಿಕೊಂಡಿರುವ ಕೆಆರ್‍ಐಡಿಎಲ್ ಸಂಸ್ಥೆಯ ವಿಳಂಭ ಧೋರಣೆಯಿಂದ ಜಿಲ್ಲೆಯಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕೆಆರ್‍ಐಡಿಎಲ್ ಸಂಸ್ಥೆಯ ಕಾರ್ಯಕಾರಿ ಅಭಿಯಂತರರ ಕಾರ್ಯವೈಖರಿ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಉಡುಪಿ ಜಿಲ್ಲೆಯ ಇಇ ಅವರಿಗೆ ಪ್ರಭಾರ ವಹಿಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ಅಂತಿಮ ಹಂತದಲ್ಲಿರುವ ಶುದ್ಧ ನೀರು ಘಟಕಗಳ ಎಲ್ಲಾ ಕಾಮಗಾರಿಗಳನ್ನು ಈ ತಿಂಗಳಾಂತ್ಯಕ್ಕೆ ಮುಗಿಸುವಂತೆ ಅಧ್ಯಕ್ಷರು ಸೂಚಿಸಿದರು.

ಮುಂಬರುವ ಮಳೆಗಾಳದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗದಂತೆ ಮತ್ತು ಕೃತಕ ನೆರೆಗಳುಂಟಾಗದಂತೆ ಎಲ್ಲಾ ರಸ್ತೆ ಬದಿಗಳಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಹಾಗೂ ಚರಂಡಿಗಳ ಹೂಳೆತ್ತಲು ತಕ್ಷಣವೇ ಕ್ರಮ ವಹಿಸುವಂತೆ ಎಲ್ಲಾ ಗ್ರಾ.ಪಂ.ಪಿಡಿಓಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿರ್ದೇಶಿಸಿದರು.

ಮಂಗಳೂರು ನಗರದ ಕಪಿತಾನಿಯೋ ಎಂಬಲ್ಲಿ ಸರಕಾರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಮರಳು, ಜಲ್ಲಿಗಳನ್ನು ನಿರಂತರವಾಗಿ ರಸ್ತೆಯಲ್ಲಿ ಸುರಿದು ಹಾಗೂ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಜಿ.ಪಂ.ಅಧ್ಯಕ್ಷರು ಸೂಚಿಸಿದರು.

ಮಲೇರಿಯಾ ನಿಯಂತ್ರಣಕ್ಕೆ ವಿತರಿಸಲಾಗುವ ಸೊಳ್ಳೆ ಪರದೆಗಳನ್ನು ಆರೋಗ್ಯ ಇಲಾಖೆಯು ಅಗತ್ಯವಿರುವ ಕಡೆ ತೆರಳಿ ವಿತರಿಸುವಂತೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಆರಂಭಿಸುವುದರಿಂದ ಅಂಗನವಾಡಿಗಳಲ್ಲಿ ಸಿಗುವ ಸೌಲಭ್ಯದಿಂದ ಪುಟಾಣಿಗಳು ವಂಚಿತರಾಗುತ್ತಿದ್ದು, ಇನ್ನು ಮುಂದೆ ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಆರಂಭಿಸಲು ಅನುಮತಿ ನೀಡದಂತೆ ಅಧ್ಯಕ್ಷರು ಸೂಚಿಸಿದರು.

ಈ ಬಾರಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಎರಡನೇ ಸ್ಥಾನ ಪಡೆದು ಅತ್ಯುತ್ತಮ ಫಲಿತಾಂಶ ಪಡೆದಿರುವುದಕ್ಕೆ ಕೆಡಿಪಿ ಸಭೆಯಲ್ಲಿ ಅಭಿನಂದಿಸಲಾಯಿತು.

ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಉಪಸ್ಥಿತರಿದ್ದರು.


Spread the love