ಸಂಪರ್ಕ ರಸ್ತೆಗಳೇ ಅಭಿವೃದ್ಧಿಗೆ ಸಾಕ್ಷಿ-ಪ್ರಮೋದ್ ಮಧ್ವರಾಜ್

Spread the love

ಸಂಪರ್ಕ ರಸ್ತೆಗಳೇ ಅಭಿವೃದ್ಧಿಗೆ ಸಾಕ್ಷಿ-ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಡಿ ಬರುವ ಎಲ್ಲ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸುವುದು ಮತ್ತು ಸ್ಥಳೀಯ ನಾಗರೀಕರ ಮನವಿಗೆ ಸ್ಪಂದಿಸಿ ಆರ್ ಸಿ ಸಿ ಚರಂಡಿ ರಚನೆಗೆ ಎಸ್ ಎಫ್ ಸಿ ವಿಶೇಷ ಅನುದಾನದಡಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ನಗರ ಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಶಿಲಾನ್ಯಾಸವನ್ನು ನೆರವೇರಿಸಿದರು.

ಸುಮಾರು 10 ಕೋಟಿ ರೂ.ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿದ ಸಚಿವರಿಗೆ ಸ್ಥಳೀಯರು ಅಭಿನಂದನೆಗಳನ್ನು ತಿಳಿಸಿದರು. ಕೊಡವೂರು ವಾರ್ಡಿನ ಮಾರಿಗುಡಿಗೆ ಹೋಗುವ ಮುಖ್ಯ ರಸ್ತೆಯ ಬಳಿ ಸ್ಥಳೀಯರಾದ ಡೀನ ಅವರು ಸಚಿವರ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿ’ಯು ಆರ್ ಡುಯಿಂಗ್ ಗ್ರೇಟ್ ಜಾಬ್’ ಎಂದರು.

ಜನರ ಬೇಡಿಕೆಗಳಿಗೆ ಸ್ಪಂದಿಸಿ, ಮಳೆಯಿಂದ ನೆರೆಯುಂಟಾಗುವಲ್ಲಿ, ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲು ಬೇಡಿಕೆ ಇರಿಸಿದ ಮನವಿಗಳಿಗೆ ಸ್ಪಂದಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೊಡವೂರು ವಾರ್ಡಿನ ಶಂಕರ ನಾರಾಯಣ ದೇವಸ್ಥಾನದಿಂದ ಮಾರಿಗುಡಿಗೆ ಹೋಗುವ ಮುಖ್ಯ ರಸ್ತೆ ಕಾಂಕ್ರೀಟಿಕರಣಕ್ಕೆ ನಿಗದಿತ ವೇಳೆಗೆ ಮುಂಚೆಯೇ ಆಗಮಿಸಿದ ಸಚಿವರು, ಇಲ್ಲಿ ಒಟ್ಟು 20 ಲಕ್ಷ ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ಅಲ್ಲಿನ ಮಾರಿಗುಡಿಗೆ ತೆರಳಿ ಪೂಜೆ ಸಲ್ಲಿಸಿದರು.

ಕೊಡವೂರು ವಾರ್ಡಿನ ಪಾಳೆಕಟ್ಟೆ 3ನೇ ಅಡ್ಡರಸ್ತೆ ಕಾಂಕ್ರೀಟಿಕರಣ ನೆರವೇರಿಸಿ ಅಲ್ಲೇ ಪಕ್ಕದಲ್ಲಿ ಬಾವಿ ಶುದ್ದೀಕರಣದ ಕಾಮಗಾರಿಯನ್ನು ನೆನಪಿಸಿಕೊಂಡು ಪರಿಶೀಲನೆ ನಡೆಸಿದರು. ಬಡವರಿಗಾಗಿ ದಾನಿಗಳ ನೆರವಿನಿಂದ ನಿರ್ಮಾಣ ಮಾಡಿ ಹಸ್ತಾಂತರಿಸಿದ ಮನೆಯನ್ನೂ ನೆರದವರಿಗೆ ತೋರಿಸಿದರು. ಕೊಡವೂರು, ವಡಭಾಂಡೇಶ್ವರ ವಾರ್ಡಿನ ಹೆಚ್ಚಿನ ಎಲ್ಲ ರಸ್ತೆಗಳು ಕಾಂಕ್ರೀಟಿಕರಣಗೊಂಡಿದ್ದು ಕೆಲವು ರಸ್ತೆಗಳಷ್ಟೆ ಸಂಪೂರ್ಣಗೊಳ್ಳಲು ಬಾಕಿಯಿದೆ.

ಕಲ್ಮಾಡಿ ವಾರ್ಡಿನ ಬಳಿ ಸ್ಥಳೀಯ ಮಹಿಳೆಯರು ರಸ್ತೆಯನ್ನು ತಮ್ಮ ಮನೆಯವರೆಗೆ ವಿಸ್ತರಿಸಲು ಸಚಿವರಲ್ಲಿ ಮನವಿ ಮಾಡಿಕೊಂಡರು. ಹಂತ ಹಂತವಾಗಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಸಚಿವರು ನೀಡಿದರು. ಇದೇ ಸಂದರ್ಭದಲ್ಲಿ ಪಡುಕೆರೆ ಬೀಚ್ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಬೀಚ್ ಬಳಿ ಮೂಲಸೌಕರ್ಯ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಿದರು. ಕಾಮಗಾರಿಗಳಿಗೆ ಗುತ್ತಿಗೆ ನೀಡಿಯಾದ ಬಳಿಕವೂ ಕೆಲಸ ಆರಂಭಿಸದೆ ಇರುವವರ ಪಟ್ಟಿಯನ್ನು ತಕ್ಷಣವೇ ಸಲ್ಲಿಸಲು ಸಚಿವರು ಪೌರಾಯುಕ್ತರಿಗೆ ಸೂಚನೆ ನೀಡಿದರು.

ಕೊಡಂಕೂರು ವ್ಯಾಪ್ತಿಯಲ್ಲಿ, ಕೊಡಂಕೂರು ವಾರ್ಡಿನ ಕಂಬಳಕಟ್ಟ ಕೊರಗ ಕಾಲನಿ ರಸ್ತೆಯಲ್ಲಿ ಚರಂಡಿ ಸಮಸ್ಯೆಯಿದ್ದು, ಅದನ್ನು ಸರಿಪಡಿಸಲು 11.50 ಲಕ್ಷ ರೂ ವೆಚ್ಚದಲ್ಲಿ ಚರಂಡಿ ರಚನೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಮೂಡಬೆಟ್ಟುವಿನ ಎ.ಪಿ.ಎಂ.ಸಿ ಮಾರ್ಕೆಟ್ ಹಿಂಬದಿ ರಸ್ತೆಗೆ 15 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಮೂಡಬೆಟ್ಟು ವಾರ್ಡ್‍ನ ಸಿ.ಎಂ ಕೃಷ್ಣ ಕೆರೆಮಠ ಮೂಡಬೆಟ್ಟು ರಸ್ತೆ ಕಾಂಕ್ರೀಟಿಕರಣಕ್ಕೆ 20ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಮೂಡಬೆಟ್ಟು ವಾರ್ಡಿನ ಮೂಡಬೆಟ್ಟು ಮದರಸ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ.ರೂ ವೆಚ್ಚ, ಕೊಡವೂರಿನಲ್ಲಿ ಕೊಡವೂರು ವಾರ್ಡಿನ ಶ್ರೀ ಶಂಕರ ನಾರಾಯಣ ದೇವಸ್ಥಾನದಿಂದ ಮಾರಿಗುಡಿಗೆ ಹೋಗುವ ಮುಖ್ಯರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ.ರೂ ವೆಚ್ಚದಲ್ಲಿ, ಕೊಡವೂರು ವಾರ್ಡಿನ ಪಾಳೆಕಟ್ಟೆ ಅಂಗನವಾಡಿ ಕಟ್ಟಡ ಹಿಂಬದಿ ರಸ್ತೆ ಕಾಂಕ್ರೀಟಿಕರಣಕ್ಕೆ 15 ಲಕ್ಷ ರೂ., 10 ಲಕ್ಷ.ರೂ ವೆಚ್ಚದಲ್ಲಿ ಪಾಳೆಕಟ್ಟೆ ಅಂಗನವಾಡಿ ಕಟ್ಟಡ ಹಿಂಬದಿ ರಸ್ತೆ ಕಾಂಕ್ರೀಟಿಕರಣ 15 ಲಕ್ಷ.ರೂ ವೆಚ್ಚದಲ್ಲಿ ಕೊಡವೂರು ವಾರ್ಡಿನ ವೈಷ್ಣವಿ ನಗರ ಮುಖ್ಯ ರಸ್ತೆ ಕಾಂಕ್ರೀಟಿಕರಣ ಉದ್ದಿನ ಹಿತ್ಲು ತನಕ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ವಡಭಾಂಡೇಶ್ವರ ವ್ಯಾಪ್ತಿಯ ವಡಭಾಂಡೇಶ್ವರ ವಾರ್ಡಿನ ಅಂಬೇಡ್ಕರ ರಸ್ತೆಯ 2ನೇ ಅಡ್ಡ ರಸ್ತೆಗೆ ಆರ್.ಸಿ.ಸಿ ಚರಂಡಿ ರಚನೆಗೆ 10 ಲಕ್ಷ.ರೂ., ವಡಭಾಂಡೇಶ್ವರ ವಾರ್ಡಿನ 2ನೇ ರಸ್ತೆಯ ಕಾಂಕ್ರಿಟ್ ರಸ್ತೆ ಮುಂದುವರಿಕೆಗೆ 15ಲಕ್ಷ.ರೂ., ವಡಭಾಂಡೇಶ್ವರ ವಾರ್ಡಿನಲ್ಲಿ ನೆರ್ಗಿ 3ನೇ ಅಡ್ಡ ರಸ್ತೆ ಚರಂಡಿ ಕಾಂಕ್ರೀಟಿಕರಣ 10 ಲಕ್ಷ.ರೂ ವೆಚ್ಚದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕೊಳ ವಾರ್ಡಿನ ಪ್ರಮೋದ್ ಲಕ್ಷ್ಮಣ್ ಮನೆಯಿಂದ ವರ್ಗಿಸ್ ಮನೆಯ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ.ರೂ, ಕೊಳ ವಾರ್ಡಿನ ಕೊಳ ಮುಖ್ಯ ರಸ್ತೆಯ ಉತ್ತರ ಬದಿ ರಾಜ್ ಫಿಶ್ ಮಿಲ್ ಹಿಂಬದಿ ಮಳೆನೀರು ಹರಿಯುವ ತೋಡಿಗೆ ಆರ್.ಸಿ.ಸಿ.ಚರಂಡಿ ರಚನೆಗೆ 15ಲಕ್ಷ.ರೂ, ವೆಚ್ಚದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕಲ್ಮಾಡಿ ವಾರ್ಡಿನ ಮಲ್ಪೆಯ ಶ್ರೀ ರಕ್ತೇಶ್ವರಿ ದೇವಸ್ಥಾನದಿಂದ ಮಹಾಬಲ ,ಮಾಸ್ತರರ ಮನೆಯವರೆಗೆ ಹಾಗೂ ಸುರೇಶ್ ಕುಂದರವರ ಮನೆಯವರೆಗೆ ರಸ್ತೆಯ ಎರಡು ಅಂಚಿಗೆ ಕಲ್ಲು ಕಟ್ಟಿ ಕಾಂಕ್ರೀಟಿಕರಣಗೊಳಿಸಲು 10 ಲಕ್ಷ ರೂ , ಕಲ್ಮಾಡಿ ವಾರ್ಡಿನ ಕಲ್ಮಾಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸ್ಟೇಲ್ಲಾ ಮೇರಿಸ್ ಚರ್ಚಿನ ಎದುರಿನ ರಸ್ತೆ ಕಾಂಕ್ರೀಟಿಕರಣಕ್ಕೆ 15 ಲಕ್ಷ.ರೂ ಮೀಸಲಿರಿಸಿದ್ದು, ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಸ್ತೆ ಸಂಪರ್ಕ ವಿಸ್ತರಿಸಲು ಸಣ್ಣ ಸೇತುವೆ ನಿರ್ಮಿಸಲು ಸ್ಥಳೀಯರು ಬೇಡಿಕೆಯನ್ನು ಇರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷರಾದ ಸಂಧ್ಯಾ ತಿಲಕ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ, ನಗರ ಸಭೆಯ ಸದಸ್ಯರಾದ ಚಂದ್ರಕಾಂತ್ ನಾಯಕ್, ಪ್ರಶಾಂತ್ ಭಟ್, ಸತೀಶ್ ಅಮೀನ್ ಪಡುಕೆರೆ, ಪಿ.ಯುವರಾಜ್, ನಾರಾಯಣ ಕುಂದರ್, ಪ್ರಶಾಂತ್ ಕೊಳ, ಗಣೇಶ್ ನೆರ್ಗಿ, ಸೆಲಿನಾ ಕರ್ಕಡ, ಜಾನಕಿ ಗಣಪತಿ ಶೆಟ್ಟಿಗಾರ್ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.


Spread the love