ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಸಂದೇಶ ಹರಡುವವರು ತಮ್ಮ ಹೆತ್ತವರ ಗೌರವ ಉಳಿಸಲಿ : ಪದ್ಮರಾಜ್ ಸಲಹೆ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳ ಜೊತೆ ಕೆಟ್ಟ ಸಂದೇಶಗಳನ್ನು ಬರೆಯುವವರು ತಮ್ಮ ಹೆತ್ತವರ ಗೌರವ ಉಳಿಸುವತ್ತ ಯೋಚನೆ ಮಾಡಬೇಕು. ಪ್ರಚೋದನಕಾರಿ, ಕೆಟ್ಟ ಸಂದೇಶಗಳನ್ನು ಬರೆದು ಪ್ರಕರಣ ದಾಖಲಿಸಿಕೊಂಡಾಗ ಅದರಿಂದ ತೊಂದರೆಗೊಳಗಾಗುವುದು ಹೆತ್ತವರು ಎಂಬುದನ್ನು ಮರೆಯಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುವ ಸಂದೇಶಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾನೂನು ಕ್ರಮ ವಹಿಸುತ್ತದೆ. ಆದರೆ ಈ ರೀತಿಯಲ್ಲಿ ವರ್ತಿಸುವವರು ತಮ್ಮ ಹೆತ್ತವರ ಬಗ್ಗೆ ಆಲೋಚನೆ ಮಾಡಬೇಕು. ಅವರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕರಾವಳಿ ಶಾಸಕರ ಜೊತೆ ಸಮಾಲೋಚನೆ ನಡೆಸಿ ಮಾಸ್ಟರ್ ಪ್ಲಾನ್ ತಯಾರಾಗುತ್ತಿರುವ ಹೊತ್ತಿನಲ್ಲಿಯೇ ಕಳೆದ 10ರಿಂದ 12 ದಿನಗಳಿಂದೀಚೆಗೆ ಜಿಲ್ಲೆಗೆ ಕಪ್ಪು ಚುಕ್ಕೆ ತರುವ ಕಾರ್ಯ ನಡೆಯುತ್ತಿದೆ. ಬಜ್ಪೆಯಲ್ಲಿ ಅಮಾಯಕ ಅಶ್ರಫ್ನ ಗುಂಪು ಹತ್ಯೆ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ಈ ಪ್ರಕರಣದ ತನಿಖೆಯ ಆರಂಭದಲ್ಲಿ ಪೊಲೀಸರಿಂದ ವಿಳಂಬದ ಜತೆ ಹಾದಿ ತಪ್ಪಿಸುವ ಕೆಲಸ ಆಗಿತ್ತು. ಆದರೆ ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ತನಿಖೆ ಚುರುಕುಗೊಳಿಸಿ 21 ಮಂದಿಯ ಬಂಧನ ಹಾಗೂ 17 ಜನರಿಗೆ ನೋಟೀಸು ನೀಡುವ ಕೆಲಸವಾಗಿದೆ. ತನಿಖೆ ಸುಗಮವಾಗಿ ಸಾಗುತ್ತಿರುವ ವೇಳೆಯಲ್ಲೇ ಸುಹಾಸ್ ಕೊಲೆಯಾಗಿದೆ. ಸುಹಾಸ್ ಶೆಟ್ಟಿಯ ಕೊಲೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅನುಕರಣೀಯವೂ ಅಲ್ಲ. ಆ ಕೃತ್ಯ ಎಸಗಿದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಗ್ರಹ. ಆದರೆ ಆತನ ಮೇಲೆ ರೌಡಿ ಶೀಟ್ ತೆರೆದಿರುವುದು ಯಾರು ಹಾಗೂ ಯಾರ ಅವಧಿಯಲ್ಲಿ ಎಂಬುದನ್ನು ಮರೆಯಬಾರದು. ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿದವರನ್ನು ಸರಿದಾರಿಗೆ ತರುವ ಕೆಲಸವನ್ನು ಇದೀಗ ಆತನ ಕೊಲೆಯಾದ ಬಳಿಕ ಆತನನ್ನು ಹಿಂದೂ ಕಾರ್ಯಕರ್ತ ಎಂದು ಹೇಳವವರು ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
ಕೊಲೆಯಾದ ಸುಹಾಸ್ಗೆ ಹಿಂದೂ ಕಾರ್ಯಕರ್ತ ಎಂಬ ಹಣೆಪಟ್ಟಿ ಕೊಟ್ಟು, ಇಲ್ಲಿ ಮತ್ತಷ್ಟು ಜನರ ಮೇಲೆ ಹಲ್ಲೆಗೆ ಕಾರಣವಾಯಿತು. ಬಿಜೆಪಿ ಪಕ್ಷದ ಅಧ್ಯಕ್ಷರು, ನಾಯಕರು ಇಲ್ಲಿ ಬಂದು ಮಾಡಿರುವುದೇನು? ಇವರ ಅರ್ಥದಲ್ಲಿ ಹಿಂದೂ ಕಾರ್ಯರ್ತನೆಂದರೆ ಏನೆಂಬುದರ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ಪದ್ಮರಾಜ್ ಕೂಡಾ ಓರ್ವ ಹಿಂದೂ. ಆದರೆ ನನ್ನ ಹಿಂದೂ ಧರ್ಮ ಯಾವತ್ತೂ ಇನ್ನೊಂದು ಧರ್ಮವನ್ನು ದ್ವೇಷಿಸಲು ಹೇಳಿಕೊಟ್ಟಿಲ್ಲ. ನನ್ನ ಧರ್ಮದ ಅಶಕ್ತರನ್ನು ಮೇಲೆತ್ತುವುದು ಕೆಲಸ ನಮ್ಮಿಂದ ಆಗಬೇಕು. ದ್ವೇಷ ಹರಡುವುದು ಯಾವ ಧರ್ಮದಲ್ಲಿಯೂ ಇಲ್ಲ. ಸಾಮಾಜಿಕ ದುಷ್ಕೃತ್ಯದಲ್ಲಿ ತೊಡಗುವರು ಎಲ್ಲರನ್ನೂ ಭಯೋತ್ಪಾದಕರೆಂದೇ ಪರಿಗಣಿಸಬೇಕು ಹೊರತು ಧರ್ಮದ ಆಧಾರದಲ್ಲಿ ದ್ವೇಷ ಹರಡುವ ಕೃತ್ಯ ಎಸಗಬಾರದು ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಸಂಶುದ್ದೀನ್, ದುರ್ಗಾಪ್ರಸಾದ್, ಶಬ್ಬೀರ್, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.