ಸಿದ್ದರಾಮಯ್ಯರಿಂದ ಜಾತಿ, ಧರ್ಮ ಒಡೆಯುವ ಕೆಲಸ: ಸಚಿವೆ ಶೋಭಾ ಕರಂದ್ಲಾಜೆ

Spread the love

ಸಿದ್ದರಾಮಯ್ಯರಿಂದ ಜಾತಿ, ಧರ್ಮ ಒಡೆಯುವ ಕೆಲಸ: ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು: ಸಿದ್ದರಾಮಯ್ಯ ಯಾವಾಗ ಅಧಿಕಾರಕ್ಕೆ ಬರುತ್ತಾರೋ ಆಗೆಲ್ಲ ಜಾತಿಗಳ ಮಧ್ಯೆ ಧರ್ಮಗಳ ಮಧ್ಯೆ ಒಡೆಯುವ ಕೆಲಸವನ್ನು ಮಾಡುತ್ತಾರೆ ಎಂಧು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ, ಜಾತಿ ಗಣತಿಯನ್ನು ಪ್ರಸ್ತಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದೇ ಜನರ ಮನಸ್ಸಿನಿಂದ ಕಾಲ್ತುಳಿತ ಘಟನೆಯನ್ನು ಮರೆಸಿ, ಹೊಸ ವಿಚಾರ ತರಬೇಕು ಎಂದು ತಿಳಿಸಲು ಎಂದರು.

ಕಾಂತರಾಜ್ ಆಯೋಗ ಮತ್ತು ಜಯಪ್ರಕಾಶ್ ಹೆಗ್ಡೆ ಆಯೋಗದ ನೇತೃತ್ವದಲ್ಲಿ ನಡೆದ ಜಾತಿ ಜನಗಣತಿಗೆ 10 ವರ್ಷಗಳಲ್ಲಿ ಎಷ್ಟು ಖರ್ಚು ಮಾಡಿದ್ರಿ? ಆ ಜಾತಿ ಗಣತಿ ವರದಿಯನ್ನು ಎಲ್ಲರ ವಿರೋಧದ ಮಧ್ಯೆ ಮಂಡನೆ ಮಾಡಿದ್ದೀರಲ್ಲ, ಯಾವ ಅಶಾಂತಿ ಸೃಷ್ಟಿಸಲು ಮಾಡಿದ್ರಿ ಆ ಕೆಲಸ ಮಾಡಿದ್ರಿ? ಈಗ ಯಾಕೆ ಅದನ್ನು ಬೇಡ ಹೇಳುತ್ತಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಅವರು, ಇದರ ಹಿಂದೆ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶ ಇಲ್ಲ. ಜಾತಿ -ಜಾತಿಯ ನಡುವೆ ಒಡಕು ಸೃಷ್ಟಿಸಿ ಅದನ್ನು ಇನ್ನಷ್ಟು ಸೂಕ್ಷ್ಮಮಾಡಿ ಉಪ ಜಾತಿಗಳ ನಡುವೆ ಹೊಡೆದಾಟ ಮಾಡಿಸುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

2004 ರಿಂದ 2014ರ ವರೆಗೆ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ದೊರೆತಿದ್ದು ₹1.44 ಲಕ್ಷ ಕೋಟಿ ಅನುದಾನ ಆಗಿದ್ದರೆ, 2014 ರಿಂದ 2024ರ ವರೆಗೆ ₹5.42 ಲಕ್ಷ ಕೋಟಿ ಅನುದಾನ ದೊರೆತಿದೆ. 275 ಹೆಚ್ಚುವರಿ ಅನುದಾನ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರು, ಅವರಿಗೆ ಲೆಕ್ಕ ಬಂದರೆ ಈ ಲೆಕ್ಕದ ಬಗ್ಗೆ ಹೇಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬ್ರಿಟಿಷರ ಕಾಲದ 29 ಕಾರ್ಮಿಕ ಕಾಯ್ದೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು, ಅವುಗಳನ್ನು ಪ್ರಸಕ್ತ ಕಾಲದ ಆವಶ್ಯಕತೆಗೆ ತಕ್ಕಂತೆ ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಮುತುವರ್ಜಿ ವಹಿಸುತ್ತಿದೆ ಎಂದರು.

ಗಿಗ್ ಹಾಗೂ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ದೊಡ್ಡ ಯೋಜನೆ ರೂಪು ಗೊಳ್ಳುತ್ತಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ದುಡಿಯುತ್ತಿರುವ ಸುಮಾರು 80 ಕೋಟಿ ಜನರಲ್ಲಿ 10 ಕೋಟಿ ಜನರಿಗೆ ಮಾತ್ರ ಪಿಎಫ್, ಇಎಸ್‌ಐ ಮತ್ತಿತರ ಸಾಮಾಜಿಕ ಭದ್ರತೆಯ ಯೋಜನೆ ಪ್ರಯೋಜನ ದೊರೆಯುತ್ತಿದೆ. ಉಳಿದ 70 ಕೋಟಿ ಕಾರ್ಮಿಕರು ಈ ಸೌಲಭ್ಯ ವಂಚಿತರಾಗಿದ್ದಾರೆ ಎಂದವರು ಹೇಳಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವಾಲದಯದ ಪೋರ್ಟಲ್‌ನಲ್ಲಿ ಸಚಿವಾಲಯದ ವ್ಯಾಪ್ತಿಯಲ್ಲಿ ಒಳಪಡುವ 6.45 ಉದ್ಯಮಗಳು ನೋಂದಣಿಯಾಗಿವೆ. ದೇಶದಲ್ಲಿ ಅತ್ಯಧಿಕ ಜನರು ಅವಲಂಬಿಸಿರುವ ಕೃಷಿ ಕ್ಷೇತ್ರವು ಜಿಡಿಪಿಗೆ ಶೇ.18 ಕೊಡುಗೆ ನೀಡುತ್ತಿದ್ದರೆ, ಅಧಿಕ ಉದ್ಯೋಗ ಒದಗಿಸುವ ವಿಷಯದಲ್ಲಿ ಎರಡನೇ ಸ್ಥಾನದಲ್ಲಿರುವ ಎಂಎಸ್‌ಎಂಇ ದೇಶದ ಸುಮಾರು 26 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಜಿಡಿಪಿಗೆ ಶೇ.30 ಕೊಡುಗೆ ನೀಡುತ್ತಿದೆ. ರಫ್ತಾಗುವ ವಸ್ತುಗಳಲ್ಲಿ ಎಂಎಸ್‌ಎಂಇ ಪಾಲು ಶೇ.40 ಇದೆ ಎಂದು ಅವರು ವಿವರಿಸಿದರು.

ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶದಲ್ಲಿ ಪ್ರವಾಸ ನಡೆಸುವ ಸಂದರ್ಭ ಗಡಿಗಳ ರಕ್ಷಣೆ, ಭ್ರಷ್ಟಾಚಾರ ರಹಿತ ಸರ್ಕಾರ, ಪ್ರಧಾನಿ ಸ್ಥಾನದ ಘನತೆಯ ರಕ್ಷಣೆ ಹಾಗೂ ದೇಶದ ಅಭಿವದ್ಧಿಗೆ ವೇಗ ಎನ್ನುವ ಪ್ರಧಾನ ನಾಲ್ಕು ಪ್ರಧಾನ ನಾಲ್ಕು ಭರವಸೆಗಳನ್ನು ಜನತೆಗೆ ನೀಡಿದ್ದರು. ಈ ಭರವಸೆ ಇಂದು ಈಡೇರಿದೆ. ಆಂತರಿಕ, ಬಾಹ್ಯ ಸುರಕ್ಷೆ ಎರಡೂ ಸಾಧ್ಯವಾಗಿದೆ. ದೇಶದ ಸೇನೆಯು ಶೇ.95 ರಷ್ಟು ಸ್ವಾವಲಂಬನೆ, ಆತ್ಮ ನಿರ್ಭರತೆ ಸಾಧಿಸಿದೆ ಸಾಧಿಸಿದೆ. ಯುದ್ಧ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಷ್ಟು ನಾವು ಬೆಳೆದಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಭಾರತದ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದ ಸಮೀಪವಿದೆ. ಶೀಘ್ರದಲ್ಲೇ ಮೂರನೇ ಸ್ಥಾನ ಪಡೆಯುವುದು ಮೋದಿ ಅವರ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ರೈಲ್ವೆ, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಸೌಲಭ್ಯ ವಿಸ್ತರಣೆಗೆ ರಾಜ್ಯ ಸರ್ಕಾರ ಅಗತ್ಯ ಜಮೀನು ಒದಗಿಸುತ್ತಿಲ್ಲ. ರಾಜ್ಯದ ಜಿಲ್ಲಾಧಿಕಾರಿಗಳು ಸಹಕಾರ ನೀಡುತ್ತಿಲ್ಲ. ನೀತಿ ಆಯೋಗದ, ಹಳೇ ಯೋಜನಾ ಆಯೋಗದ ಸಭೆಗಳಿಗೆ ಮುಖ್ಯಮಂತ್ರಿ ಹಾಜರಾಗುವುದಿಲ್ಲ. ಸಭೆಯಲ್ಲಿ ರಾಜ್ಯದ ಬೇಡಿಕೆಗಳನ್ನು ಮುಂದಿಡಬೇಕಾದ ಮುಖ್ಯಮಂತ್ರಿ ಗೈರು ಹಾಜರಾದರೆ ನಷ್ಟವಾಗುವುದು ಜನರಿಗೆ ಎಂದು ಅವರು ಆಕ್ಷೇಪಿಸಿದರು.

ರಾಜ್ಯ ಸರ್ಕಾರದ ತೆರಿಗೆ ಪಾಲು ಕೇಂದ್ರ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿಯವರು ಆರೋಪಿಸುತ್ತಾರೆ. 2004 ರಿಂದ 2014 ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದಿರುವ ಮೊತ್ತ 1,044,58 ಕೋಟಿ ರೂಪಾಯಿ. ಆದರೆ 2014 ರಿಂದ 2024 ತನಕ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 5,42,341 ಕೋಟಿ ರೂ ಬಂದಿದೆ. ಇದರಲ್ಲಿ ಯಾವುದು ದೊಡ್ಡ ಮೊತ್ತ ಎನ್ನುವುದನ್ನು ಹಣಕಾಸು ಸಚಿವರಾಗಿ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಹೇಳಬೇಕು ಎಂದು ಸಚಿವೆ ಶೋಭಾ ಹೇಳಿದರು.

ಸಿದ್ದರಾಮಯ್ಯ ಅವರು ಗ್ಯಾರಂಟಿ ಹೆಸರಿನಲ್ಲಿ ಸುಮ್ಮನೆ ಡ್ರಾಮಾ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಡ್ರಾಮಾ ಮಾಡೋಣ. ಆದರೆ ಇತರ ಸಂದರ್ಭ ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡೋಣ ಎಂದರು.


Spread the love
Subscribe
Notify of

0 Comments
Inline Feedbacks
View all comments