ಸುನಿಲ್ ಕುಮಾರ್ ಅವರೇ,ಮೊದಲು ನಿಮ್ಮ ಸೋಲನ್ನು ಒಪ್ಪಿಕೊಳ್ಳಿ: ಗೀತಾ ವಾಗ್ಳೆ
- ಪರಶುರಾಮನ ಪ್ರತಿಮೆ ಕಂಚಿನದ್ದಲ್ಲ ಎಂದು ಕೋರ್ಟ್ ಹೇಳಿರುವಾಗ ಸೋಲಾಗಿದ್ದು ಯಾರಿಗೆ?
ಕಾರ್ಕಳದಲ್ಲಿ ಸ್ಥಾಪಿಸಿರುವ ಪರಶುರಾಮನ ಪ್ರತಿಮೆಯ ಕಾಲುಗಳು ಫೈಬರ್ ನಿಂದ ಮಾಡಲಾಗಿದೆ ಎಂದು ಹೇಳಿದ್ದ ಕಾಂಗ್ರೆಸ್ ಗೆ ಸೋಲಾಗಿದೆ ಎಂದು ಲೇವಡಿ ಮಾಡಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರ ಬಗ್ಗೆ ಅನುಕಂಪ ಮೂಡುತ್ತಿದೆ.ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆಹೇಳಿದ್ದಾರೆ.
ಶಾಸಕರೇ , ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳುವ ಮೊದಲೊಮ್ಮೆ ನ್ಯಾಯಾಲಯದ ಇನ್ನೊಂದು ತೀರ್ಪನ್ನು ನಿಮಗೆ ನೆನಪಿಸುತ್ತಿದ್ದೇವೆ.ಪರಶುರಾಮನನ್ನು ಕಾರ್ಕಳದ ಉಮಿಕಲ್ ಗುಡ್ಡದ ಮೇಲೆ ಪ್ರತಿಷ್ಠಾಪಿಸಿದಾಗ ನೀವು ಹೇಳಿದ್ದೇನು?ಈ ಮೂರ್ತಿಯನ್ನು ಪೂರ್ತಿಯಾಗಿ ಕಂಚಿನಿಂದ ತಯಾರಿಸಲಾಗಿದೆ ಎಂದಿದ್ದೀರಿ ತಾನೇ?? ನಿಮ್ಮ ಹಿಂಬಾಲಕರೂ ಇದನ್ನೇ ಹೇಳಿಕೊಂಡು ತಿರುಗಿದ್ದರಲ್ಲವೇ?ಈಗ ಕೋರ್ಟ್ ಹೇಳಿರುವುದೇನು?ಈ ಪ್ರತಿಮೆ ಕಂಚಿನದ್ದಲ್ಲ ಎಂದಲ್ಲವೇ?ಕೋರ್ಟ್ ಇದನ್ನು ಸ್ಪಷ್ಟವಾಗಿ ಹೇಳಿದ್ದರೂ ಅಡಿಗೆ ಬಿದ್ದರೂ ಮೂಗು ಮೇಲೆ ಎಂಬ ಮಾತಿನಂತೆ ನಿಮಗಾದ ಸೋಲನ್ನು ಮುಚ್ಚಿಟ್ಟುಕೊಂಡು ನೀವು ಕಾಂಗ್ರೆಸ್ ಪಕ್ಷದ ನಾಯಕರನ್ನು ಲೇವಡಿ ಮಾಡಿರುವುದು ಎಷ್ಟು ಸರಿ?ಈಗ ಕಾಂಗ್ರೆಸ್ ಗೆದ್ದಿದೆ.ಸೋತಿದ್ದು ನೀವು ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.
ಸುನಿಲ್ ಕುಮಾರ್ ಅವರೇ, ಕಾಂಗ್ರೆಸ್ ಪಕ್ಷದವರು ಪರಶುರಾಮ ಮೂರ್ತಿಯ ನಿರ್ಮಾಣದ ಬಗ್ಗೆ ಸಂಶಯ ವ್ಯಕ್ತಪಡಿಸಿರದಿದ್ದರೆ ನೀವು ಮಾಡಿದ ಭ್ರಷ್ಟಾಚಾರದ ವಾಸನೆಯೂ ನಮ್ಮ ಮುಗ್ಧ ಮತದಾರರ ಹತ್ತಿರ ಸುಳಿಯುತ್ತಿರಲಿಲ್ಲ.ಈಗ ನಿಮ್ಮೊಳಗಿನ ಇನ್ನೊಂದು ಕರಾಳ ಮುಖ ಎಲ್ಲಾ ಮತದಾರರಿಗೂ ತಿಳಿದಿದೆ.
ಸುನಿಲ್ ಕುಮಾರ್ ಅವರೇ, ಆನೆ ಕದ್ದರೂ ಕಳ್ಳ,ಅಡಿಕೆ ಕದ್ದರೂ ಕಳ್ಳ ಎಂಬ ಗಾದೆಯ ಮಾತು ನೆನಪಿದೆಯೇ?ನೀವೆಂದದ್ದು ಕಂಚಿನ ಮೂರ್ತಿ,ಈಗ ಅದು ಕಂಚಿನ ಮೂರ್ತಿ ಅಲ್ಲ ಎಂದಾದ ಮೇಲೆ ಹಿತ್ತಾಳೆಯದ್ದಾಗಿರಲಿ ಅಥವಾ ಫೈಬರ್ ದ್ದಾಗಿರಲಿ, ಯಾವುದೇ ವ್ಯತ್ಯಾಸ ಸಿಗುವುದಿಲ್ಲ.ನೀವು ಹೇಳಿದ್ದು ಸುಳ್ಳು,ನೀವು ಮಾಡಿದ್ದು ಮೋಸ ಎಂಬುದು ಜಗಜ್ಜಾಹೀರಾಗಿದೆ.ಹೀಗಿರುವಾಗ ವೃಥಾ ಈ ಹೇಳಿಕೆ ಕೊಡಬೇಕಾದ ಅಗತ್ಯವೇನಿದೆ?ಅವಮಾನದಿಂದ ವಿಚಲಿತರಾಗಿರುವ ನೀವು ಹತಾಶರಾಗಿ ಈ ಹೇಳಿಕೆ ನೀಡಿದ್ದೀರಿ ಎನ್ನುವುದು ಎಲ್ಲರಿಗೂ ತಿಳಿದಿದೆ.ಎಂದವರು ಹೇಳಿದ್ದಾರೆ.
ಜನರ ಧಾರ್ಮಿಕ ಭಾವನೆಗಳ ಜೊತೆಗೆ ಚೆಲ್ಲಾಟವಾಡಿದ ನೀವು ಇದೇ ಜನರಲ್ಲಿ ಕ್ಷಮೆ ಕೇಳಬೇಕು.ದಿನಬೆಳಗಾದರೆ ಧಾರ್ಮಿಕತೆಯ ಬಗ್ಗೆ ಭಾಷಣ ಮಾಡುವ ನೀವು ಈಗ ಈ ರೀತಿ ಜನರನ್ನು ವಂಚಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ನಿಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳಿ ಎಂಬುದಾಗಿ ಗೀತಾ ವಾಗ್ಳೆ ಹೇಳಿದ್ದಾರೆ.