ಸುವರ್ಣ ತ್ರಿಭುಜ ಬೋಟ್‌ ದುರಂತ: ತಜ್ಞರಿಂದ ಮಾಹಿತಿ ಸಂಗ್ರಹ – ಎಸ್‌ಪಿ ನಿಶಾ ಜೇಮ್ಸ್‌

Spread the love

ಸುವರ್ಣ ತ್ರಿಭುಜ ಬೋಟ್‌ ದುರಂತ: ತಜ್ಞರಿಂದ ಮಾಹಿತಿ ಸಂಗ್ರಹ – ಎಸ್‌ಪಿ ನಿಶಾ ಜೇಮ್ಸ್‌

ಉಡುಪಿ: ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ದಿನಗಳ ಹಿಂದೆ ಉಡುಪಿಯ ಪೊಲೀಸ್‌ ತಂಡ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕರಾವಳಿಯಲ್ಲಿರುವ ಪೊಲೀಸ್‌ ಠಾಣೆಗಳಿಗೆ ತೆರಳಿ ಬೋಟು ನಾಪತ್ತೆಯಾದ ದಿನದಿಂದ ಈವರೆಗೆ ತೀರದಲ್ಲಿ ಯಾವೂದಾದರು ಮೃತದೇಹ ಪತ್ತೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದೆ ಆದರೆ ಈ ಬಗ್ಗೆ ಯಾವುದೇ ಮಾಹಿತಿ ತಂಡಕ್ಕೆ ಲಭಿಸಿಲ್ಲ ಎಂದು ಜಿಲ್ಲಾ ಎಸ್‌ಪಿ ನಿಶಾ ಜೇಮ್ಸ್‌ ಹೇಳಿದರು.

‘ಸುವರ್ಣ ತ್ರಿಭುಜ ಬೋಟು ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಕೂಲಂಕಷ ವರದಿ ಹಾಗೂ ಮಾಹಿತಿಯನ್ನು ಪಡೆದುಕೊಳ್ಳ ಲಾಗುವುದು. ನೌಕಪಡೆಯವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಬೋಟಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇಲಾಖೆಗೆ ನೀಡಿದ್ದಾರೆ. ಬೋಟು ಯಾವ ವೇಗದಲ್ಲಿ ಚಲಿಸಿರಬಹುದು, ಅವಘಡ ಸಂಭವಿಸಲು ಕಾರಣ ಏನು, ಬೋಟಿನಲ್ಲಿದ್ದವರು ಎಲ್ಲಿ ಹೋದರು ಎಂಬುದರ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆದುಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಅವಘಡದಿಂದ 60 ಅಡಿ ಆಳದ ಸಮುದ್ರದಲ್ಲಿ ಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಅವಶೇಷವನ್ನು ಖಾಸಗಿ ಏಜೆನ್ಸಿ ಮೂಲಕ ಸರ್ಕಾರದ ಸಹಾಯದೊಂದಿಗೆ ಮೇಲಕ್ಕೆತ್ತಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.


Spread the love