ಹತ್ಯೆ ಯತ್ನ ಪ್ರಕರಣ; ನಾಲ್ವರ ಬಂಧನ

Spread the love

ಹತ್ಯೆ ಯತ್ನ ಪ್ರಕರಣ; ನಾಲ್ವರ ಬಂಧನ

ಮಂಗಳೂರು: ವ್ಯಕ್ತಿಯೊಬ್ಬನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧೀಸಿ ಸಿಸಿಬಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಟಿಪಳ್ಳದ ಅಬ್ದುಲ್ ನೌಫಲ್ ಯಾನೆ ಬಶೀರ್ (42), ಕುಂಜತ್ ಬೈಲ್ ಗ್ರಾಮದ ಅಬ್ದುಲ್ ನಾಸಿರ್ (30), ಪುದು ಗ್ರಾಮದ ಮಹಮ್ಮದ್ ಶಬೀರ್ (21), ಇಡ್ಯಾದ ಮಹಮ್ಮದ್ ಶಬ್ಬೀರ್ (31) ಎಂದು ಗುರುತಿಸಲಾಗಿದೆ.

ಫೆಬ್ರವರಿ 21 ರಂದು ಜೋಕಟ್ಟೆ ಕೋಡಿಕೆರೆ ನಿವಾಸಿ ಶ್ರೀ ಪ್ರಕಾಶ್ ಪೂಜಾರಿ ಯವರು ಮದ್ಯಾಹ್ನ ತನ್ನ ಕಳವಾರು ಬಳಿಯ ಅಂಗಡಿಯಿಂದ ತನ್ನ ಅಕ್ಟಿವಾ ಹೊಂಡಾ ಸ್ಕೂಟರ್ ನಂಬ್ರ: ಕೆಎ-19-ಇಜಿ-3052 ರಲ್ಲಿ ಮನೆಗೆ ಊಟಕ್ಕೆ ಬಂದು ವಾಪಾಸು ಮದ್ಯಾಹ್ನ 3-45 ಗಂಟೆಗೆ ಮನೆಯಿಂದ ಕಳವಾರಿನ ಅಂಗಡಿಗೆ ಜೋಕಟ್ಟೆ ಮುಖೇನ ಎಂ ಆರ್ ಪಿ ಎಲ್ ಕಾರಿಡಾರ್ ರಸ್ತೆಯಲ್ಲಿ ಕಳವಾರು ರಸ್ತೆಗೆ ಹೋಗುತ್ತಿದ್ದಾಗ ಹಿಂದುಗಡೆಯಿಂದ 2 ಬೈಕ್ ನಲ್ಲಿ ಬಂದವರು ಪ್ರಕಾಶ್ ಪೂಜಾರಿಯ ಸ್ಕೂಟರ್ ನ್ನು ಅಡ್ಡಗಟ್ಟಿ ಬೈಕ್ ನ ಹಿಂಬದಿಯಲ್ಲಿ ಕುಳಿತ್ತಿದ್ದವರು ಏಕಾಎಕಿಯಾಗಿ ಪ್ರಕಾಶ್ ಪೂಜಾರಿಯ ಬೈಕ್ ನ್ನು ಅಡ್ಡಗಟ್ಟಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪರಿಣಾಮ ಪ್ರಕಾಶ್ ಪೂಜಾರಿಯವರು ತೀವ್ರ ಗಾಯಗೊಂಡು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಬಗ್ಗೆ ಪ್ರಕಾಶ್ ಪೂಜಾರಿಯವರ ತಮ್ಮ ಕಿರಣ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಅವರ ವಶದಿಂದ ಒಂದು ಬೈಕ್ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ಬಳಿ ಅನ್ಸಾರ್ ಎಂಬವರಿಗೆ ನಿಖಿಲ್, ಭರತ್ ಮತ್ತು ಅರ್ಜುನ್ ಎಂಬವರು ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತಿಕಾರವಾಗಿ ಪ್ರಕಾಶ್ ಪೂಜಾರಿಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. 2016 ನೇ ಫೆಬ್ರವರಿ ತಿಂಗಳಿನಲ್ಲಿ ನಡೆದ ಈ ಕೃತ್ಯವನ್ನು ಸುಮಾರು ಒಂದು ವರ್ಷ 1 ತಿಂಗಳ ನಂತರ ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿಗಳ ಪೈಕಿ ಮೊಹಮ್ಮದ್ ಶಬೀರ್ ಎಂಬಾತನ ವಿರುದ್ದ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿರುತ್ತದೆ.. ಈ ಪ್ರಕರಣದಲ್ಲಿ ಇನ್ನೂ ಇತರ ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love