ಹಾಸನ: ಸೆಸ್ಕ್ ಎಇಇ ಮೇಲೆ ಮಚ್ಚಿನಿಂದ ಹಲ್ಲೆ
ಹಾಸನ: ಸಂತೆಪೇಟೆಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಪರಿಚಾರಕ ಎಂ.ಎನ್.ಮಂಜುನಾಥ್ ಎಂಬಾತ ಶುಕ್ರವಾರ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಘಟನೆಯಲ್ಲಿ ಸ್ವಾತಿ ಅವರ ತಲೆ, ಮುಖ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬೆರಳುಗಳು ತುಂಡಾಗಿವೆ. ಸ್ವಾತಿ ಅವರ ನೆರವಿಗೆ ಧಾವಿಸಿದ ಸಹೋದ್ಯೋಗಿ ವೆಂಕಟೇಗೌಡ ಎಂಬುವವರಿಗೂ ಪೆಟ್ಟು ಬಿದ್ದಿದೆ.
ವಿದ್ಯುತ್ ವಿತರಣಾ ಕೇಂದ್ರದ ಹೂದೋಟ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಸೂಚಿಸಿದ್ದಕ್ಕೆ ಕುಪಿತಗೊಂಡು ಮಂಜುನಾಥ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಮಂಜುನಾಥನನ್ನು ಸೇವೆ ಯಿಂದ ಅಮಾನತು ಮಾಡಲಾಗಿದೆ.













