ಹೆಮ್ಮಾಡಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ರಸ್ತೆಗೆ: ಗ್ರಾಮಸ್ಥರಿಂದ ಪ್ರತಿಭಟನೆ

Spread the love

ಹೆಮ್ಮಾಡಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ರಸ್ತೆಗೆ: ಗ್ರಾಮಸ್ಥರಿಂದ ಪ್ರತಿಭಟನೆ

ಕುಂದಾಪುರ: ಹೆಮ್ಮಾಡಿಯ ಹೃದಯಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬಹುಮಹಡಿ ವಾಣಿಜ್ಯ ಕಟ್ಟಡದಿಂದ ಹೊರಬಿಟ್ಟ ತ್ಯಾಜ್ಯ ನೀರಿನ ವಿಡಿಯೋ ದೃಶ್ಯಾವಳಿಗಳಿದ್ದರೂ ಇದುವರೆಗೂ ಸಂಬಂಧಪಟ್ಟ ಕಟ್ಟಡ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಯನ್ನು ಖಂಡಿಸಿ ಶುಕ್ರವಾರ ಬೆಳಿಗ್ಗೆ ಹೆಮ್ಮಾಡಿ ಭಟ್ರಬೆಟ್ಟು ಗ್ರಾಮಸ್ಥರು ಪಂಚಾಯಿತಿಗೆ ತೆರಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂತೋಷ್ ಹೆಮ್ಮಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಬಹುಮಹಡಿ ಕಟ್ಟಡ ಮಾಲಿಕರು ಮಳೆಗಾಲದಲ್ಲಿ ತ್ಯಾಜ್ಯ ನೀರು ಹೊರಬಿಡುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಮೂರ್ನಾಲ್ಕು ವರ್ಷಗಳಿಂದಲೂ ಪಂಚಾಯಿತಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಪ್ರತೀ ಗ್ರಾಮಸಭೆಯಲ್ಲೂ ಧ್ವನಿ ಎತ್ತಿದ್ದೇವೆ. ಆದರೆ ಆಡಳಿತ ಮಾತ್ರ ಸಿರಿವಂತರ ಪರ ನಿಂತಿದೆ. ಇದೀಗ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ನೀರನ್ನು ಬಿಡುವ ಮೂಲಕ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ದಿನ ಮಾಧ್ಯಮಗಳಲ್ಲಿ ಈ ಬಗ್ಗೆ ಸರಣಿ ವರದಿ ಪ್ರಕಟಗೊಳ್ಳುತ್ತಿದ್ದರೂ ಆಡಳಿತ ಮಾತ್ರ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದವರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಇದನ್ನೆಲ್ಲಾ ಗಮನಿಸಿದಾಗ ಸರ್ಕಾರಿ ಕಾಯ್ದೆ, ಕಾನೂನುಗಳು ಬಡವರಿಗೆ ಮಾತ್ರವಾ ಎಂದು ಪ್ರಶ್ನಿಸಿದ ಅವರು, ಇನ್ನುಮುಂದೆ ತ್ಯಾಜ್ಯ ನೀರು ಹೊರಬಿಟ್ಟರೆ ಆ ನೀರನ್ನೆಲ್ಲಾ ತಂದು ಪಂಚಾಯಿತಿ ಮುಂಭಾಗ ತಂದು ಸುರಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ನಿವಾಸಿ ಲಕ್ಷ್ಮಣ ಪೂಜಾರಿ ಮಾತನಾಡಿ ತ್ಯಾಜ್ಯ ನೀರು ಬಿಡುವುದರಿಂದ ಮನೆಗಳ ಬಾವಿ ನೀರಿನ ಬಣ್ಣ ಬದಲಾಗುತ್ತಿದೆ. ಸೊಳ್ಳೆ ಕಾಟದಿಂದಾಗಿ ಸಾಂಕ್ರಾಮಿಕ ರೋಗಗಳು ನಮ್ಮನ್ನು ಬಾಧಿಸುತ್ತಿವೆ. ಈಗಾಗಲೇ ಕೆಲವು ಮನೆಗಳ ಬಾವಿ ನೀರು ಬಳಸಲು ಯೋಗ್ಯವಲ್ಲದ ಸ್ಥಿತಿಗೆ ಬಂದು ತಲುಪಿದೆ. ಮನೆಯ ಮುಂದೆ ಬಾವಿಗಳಿದ್ದರೂ ನೀರನ್ನು ದುಡ್ಡು ಕೊಟ್ಟು ತರುವ ಪರಿಸ್ಥಿತಿ ಎದುರಾಗುತ್ತಿದೆ. ಈ ಎಲ್ಲಾ ತೊಂದರೆಗಳಿಗೆ ಕಾರಣರಾದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟಿಸಿದ ಗ್ರಾಮಸ್ಥರು ಸಂಬಂಧಪಟ್ಟ ಕಟ್ಟಡ ಮಾಲಿಕರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಸ್ಥಳದಲ್ಲೇ ಧರಣಿ ಆರಂಭಿಸಿದರು.

ಪ್ರತಿಭಟನಾನಿರತರ ಮನವಿಗೆ ಸ್ಪಂದಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸತೀಶ್ ತೋಳಾರ್, ಕಟ್ಟಡ ಮಾಲಿಕರನ್ನು ಸ್ಥಳಕ್ಕೆ ಕರೆಸಿದರು. ಈ ವೇಳೆಯಲ್ಲಿ ಪ್ರತಿಭಟನಾ ನಿರತರು ಹಾಗೂ ಕಟ್ಟಡ ಮಾಲಿಕರ ನಡುವೆ ವಾಕ್ಸಮರ ಉಂಟಾಯಿತು. ಒಂದು ವಾರಗಳ ಗಡುವು ಪಡೆದುಕೊಂಡ ಕಟ್ಟಡ ಮಾಲಿಕರು ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು. ಆ ಬಳಿಕ ಪ್ರತಿಭಟನಾನಿರತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ತೋಳಾರ್ ಮಾತನಾಡಿ ಶುಕ್ರವಾರವಷ್ಟೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ತ್ಯಾಜ್ಯ ನೀರಿನ ಸಮಸ್ಯೆಯ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕಟ್ಟಡ ಮಾಲಿಕರು ಯಂತ್ರೋಪಕರಣ ರಿಪೇರಿಗೆ ವಾರಗಳ ಸಮಯ ಕೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ನೀರು ಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ. ಈ ಕುರಿತು ನೊಟೀಸ್ ಕೂಡ ಹೊರಡಿಸುತ್ತೇವೆ. ನಮ್ಮ ಸೂಚನೆ ಮೀರಿ ಬಿಟ್ಟರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಲಕ್ಷ್ಮಣ ಪೂಜಾರಿ, ರಾಜೇಶ್ ದೇವಾಡಿಗ ಮೇಲ್ಮನೆ, ನರಸಿಂಹ ದೇವಾಡಿಗ, ಮಂಜು ದೇವಾಡಿಗ ಕಟ್ಟು, ನರಸಿಂಹ ಭಟ್ರಬೆಟ್ಟು, ಚಂದ್ರ ದೇವಾಡಿಗ, ಸೋಮ ಪೂಜಾರಿ, ನವೀನ್ ಫೆರ್ನಾಂಡೀಸ್ ಜಲಜ, ಸೀತಾ ಮೊದಲಾದವರು ಇದ್ದರು.

ಕುಂದಾಪುರ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.


Spread the love
Subscribe
Notify of

0 Comments
Inline Feedbacks
View all comments