3 ಪ್ರಕರಣಗಳನ್ನು ಎನ್ಐಎಗೆ ವಹಿಸಿ: ಮಂಜುನಾಥ್ ಭಂಡಾರಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಿಂದೀಚೆಗೆ ಮೂರು ಕೊಲೆ ಪ್ರಕರಣಗಳು ನಡೆದಿದ್ದು, ಇಡೀ ಕರಾವಳಿಯಲ್ಲಿ ಆತಂಕ ಮೂಡಿಸಿತು. ಈ ಕೊಲೆಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಎನ್ಐಎ ತನಿಖೆಗೆ ವಹಿಸಿದರೆ ದುಷ್ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ಕೇಂದ್ರ ಗೃಹ ಇಲಾಖೆಯು ಬಜಪೆ ಕಿನ್ನಿಪದವಿನಲ್ಲಿ ನಡೆದ ಸುಹಾಸ್ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿದೆ. ಇದೇ ಮಾದರಿಯಲ್ಲಿ ಕುಡುಪುವಿನಲ್ಲಿ ಎ.27ರಂದು ಅಶ್ರಫ್ ಎಂಬಾತನನ್ನು ಗುಂಪು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಬಜಪೆ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿ ಕೊಲೆ ನಡೆದರೆ, ಈ ಘಟನೆ ನಡೆದ ಕೆಲವೇ ದಿನದ ಬಳಿಕ ಮೇ 27ರಂದು ಕುರಿಯಾಳ ಕಾಂಬೋಡಿ ಬಳಿ ಅಬ್ದುಲ್ ರಹ್ಮಾನ್ ಕೊಲೆಯಾಗಿದೆ ಎಂದು ತಿಳಿಸಿದರು.
ತನಿಖೆಯಲ್ಲಿ ತಾರತಮ್ಯ ಬೇಡ: ಈ ಮೂರು ಪ್ರಕರಣಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿ ರುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಬಳಿಯುವ ಬದಲು ಮೂರು ಪ್ರಕರಣಗಳು ಎನ್ಐಎ ವಹಿಸಲಿ. ಆಗ ಇಡೀ ಕರಾವಳಿಯ ಕೋಮು ಸಂಘರ್ಷದ ಜಾಲ ಬಯಲಾಗಿದೆ. ನಾಗರಿಕರಿಗೂ ಇದರ ಹಿಂದಿರುವ ಸತ್ಯವನ್ನು ಅರಿಯಬಹುದಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಮೂರು ಪ್ರಕರಣವನ್ನು ಎನ್ಐಎಗೆ ವಹಿಸಲಿ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.