ಭವಿಷ್ಯಕ್ಕೆ ಬಲ ನೀಡುವ ಬಜೆಟ್ – ವಿಕಸಿತ ಭಾರತದ ಹೊಸ ಅಧ್ಯಾಯ- ಶ್ರೀನಿಧಿ ಹೆಗ್ಡೆ
ಭಾರತದ 2026ರ ಕೇಂದ್ರ ಬಜೆಟ್ ದೇಶದ ಸಮಗ್ರ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ತೋರಿಸುವ ಭವಿಷ್ಯನಿರ್ಮಾಣದ ಬಜೆಟ್ ಆಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ ಭವನದಲ್ಲಿ ಸಿದ್ಧಗೊಂಡ ಮೊದಲ ಬಜೆಟ್ ಇದಾಗಿದ್ದು, ಉತ್ಪಾದಕತೆ ವೃದ್ಧಿ, ಜನಪಾಲ್ಗೊಳ್ಳಿಕೆ ಹಾಗೂ “ಸಬ್ ಕಾ ಸಾಥ್–ಸಬ್ ಕಾ ವಿಕಾಸ್” ತತ್ವಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವುದಕ್ಕಾಗಿ ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯುವಶಕ್ತಿ, ಮಹಿಳಾ ಸಬಲೀಕರಣ, ರೈತರ ಆದಾಯ ವೃದ್ಧಿ, ಉದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನಾಧಾರಿತ ಆರ್ಥಿಕತೆಯತ್ತ ಈ ಬಜೆಟ್ ಸ್ಪಷ್ಟ ಹಾಗೂ ದೃಢ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರ, ಕೈಗಾರಿಕಾ ಕ್ಲಸ್ಟರ್ಗಳು, ಕೃತಕ ಬುದ್ಧಿಮತ್ತೆ (AI), ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಪ್ರವಾಸೋದ್ಯಮ ವಲಯಗಳಿಗೆ ನೀಡಿರುವ ಭಾರೀ ಉತ್ತೇಜನವು ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದ್ದಾರೆ.
ಸಾರಿಗೆ ವಲಯದಲ್ಲಿ ಜಲಮಾರ್ಗಗಳ ಅಭಿವೃದ್ಧಿ, ಹೈಸ್ಪೀಡ್ ರೈಲು ಕಾರಿಡಾರ್ಗಳು, ಎಲೆಕ್ಟ್ರಿಕ್ ಬಸ್ಗಳು ಹಾಗೂ ಪ್ರಮುಖ ಬಂದರು ಸಂಪರ್ಕ ಯೋಜನೆಗಳು ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಅವರು ತಿಳಿಸಿದ್ದಾರೆ. ಆಯುಷ್, ಮಾನಸಿಕ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಹಬ್ಗಳು ಹಾಗೂ ಅಪರೂಪದ ಕಾಯಿಲೆಗಳ ಔಷಧಗಳಿಗೆ ನೀಡಿರುವ ತೆರಿಗೆ ವಿನಾಯಿತಿಗಳು ಸರ್ಕಾರದ ಜನಪರ ಕಾಳಜಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ‘’ಶಿ- ಮಾರ್ಟ್ಸ್ , ಶಿ-ಮಾರ್ಕ್ ಯೋಜನೆಯ ಮೂಲಕ ಉತ್ತೇಜನ, ಬಾಲಕಿಯರ ಹಾಸ್ಟೆಲ್ ನಿರ್ಮಾಣ, ಲಖಪತಿ ಯೋಜನೆಗೆ ಹೆಚ್ಚಿನ ಆದ್ಯತೆ, ತೆರಿಗೆ ವ್ಯವಸ್ಥೆಯ ಸರಳೀಕರಣ ಮತ್ತು ಸಣ್ಣ ತೆರಿಗೆದಾರರಿಗೆ ಅನುಕೂಲಕರ ಕ್ರಮಗಳು ಆರ್ಥಿಕ ಒಳಗೊಳ್ಳುವಿಕೆಯನ್ನು ಇನ್ನಷ್ಟು ಬಲಪಡಿಸಲಿವೆ ಎಂದು ಅವರು ತಿಳಿಸಿದ್ದಾರೆ. ರಾಜ್ಯಗಳಿಗೆ ಹೆಚ್ಚುವರಿ ಅನುದಾನ, ರಫ್ತು ಉತ್ತೇಜನ ಹಾಗೂ ಹೂಡಿಕೆ ಪ್ರೋತ್ಸಾಹ ಕ್ರಮಗಳು ವಿಕಸಿತ ಭಾರತ ಎಂಬ ಮಹತ್ತರ ಗುರಿಯತ್ತ ದೇಶವನ್ನು ಮುನ್ನಡೆಸಲಿವೆ ಎಂದು ಅವರು ಹೇಳಿದರು.
ಒಟ್ಟಾರೆ, ಈ ಬಜೆಟ್ ಯುವಕರು, ರೈತರು, ಮಹಿಳೆಯರು, ಉದ್ಯಮಿಗಳು ಮತ್ತು ಸಾಮಾನ್ಯ ನಾಗರಿಕರ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಪ್ರಗತಿಪರ ಹಾಗೂ ಜನಪರ ಬಜೆಟ್ ಆಗಿದ್ದು, ದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ಮತ್ತು ವೇಗವನ್ನು ನೀಡಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













