ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಿದ ಕರಾವಳಿ ರಕ್ಷಾಪಡೆ
ಮಂಗಳೂರು: ಇಲ್ಲಿಗೆ ಸಮೀಪ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯು ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಜೂನ್ 29 ರಂದು ಸೋಮವಾರ ಐಎಫ್ಬಿ ಮಂಜು ಮಾತಾ ದೋಣಿಯು ಪ್ರಕ್ಷುಬ್ಧಗೊಂಡಿರುವ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿತ್ತು. ದೋಣಿಯ ಒಳಗೆ ನೀರು ತುಂಬಿಕೊಳ್ಳಲು ಪ್ರಾರಂಭಿಸಿದಾಗ ಅದರಲ್ಲಿದ್ದವರು ರಕ್ಷಣೆಗಾಗಿ ಕರಾವಳಿ ರಕ್ಷಣಾ ಪಡೆಯ ನೆರವು ಯಾಚಿಸಿದ್ದರು, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಸಾಚೇತ್ ನೌಕೆಯಲ್ಲಿ ಸ್ಥಳಕ್ಕೆ ತೆರಳಿ, ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಆರು ಮಂದಿಯನ್ನು ರಿಮೋಟ್-ಚಾಲಿತ ಜೀವರಕ್ಷಕ ಸಾಧನಗಳನ್ನು (ಲೈಫ್ ಬಾಯ್ – Lifebuoys) ಬಳಸಿ ರಕ್ಷಣೆ ಮಾಡದ್ದಾರೆ.
ವೈದ್ಯಕೀಯ ಚಿಕಿತ್ಸೆ ಒದಗಿಸಲು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ಅವರನ್ನು ನವ ಮಂಗಳೂರು ಬಂದರಿಗೆ ಕರೆತರಲಾಗುತ್ತಿದೆ ಎಂದು ಕರಾವಳಿ ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.













