ರಘುಪತಿ ಭಟ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕ ಬೆಳೂರು ಗೋಪಾಲಕೃಷ್ಣ!
ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು ಇದರ ಬೆನ್ನಲ್ಲೇ ಬುಧವಾರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರು ರಘುಪತಿ ಭಟ್ ಅವರ ಮನೆಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ.
ಕಾಪು ಮಾರಿಗುಡಿಯ ಜಾತ್ರೆಗೆ ಆಗಮಿಸಿದ್ದ ಶಾಸಕ ಗೋಪಾಲ ಕ್ರಷ್ಣ ಅವರು ತಮ್ಮ ಹಿಂದಿನ ಗೆಳೆಯರಾಗಿದ್ದ ರಘುಪತಿ ಭಟ್ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳು ನಡೆದಿಲ್ಲ ಬದಲಾಗಿ ಕೇವಲ ಇದೊಂದು ಔಪಚಾರಿಕ ಭೇಟಿ ಎನ್ನಲಾಗಿದೆ.
ಇದೇ ವೇಳೆ ರಘುಪತಿ ಭಟ್ ಅವರ ಪ್ರತಿಭಟನೆ ವಿಚಾರವನ್ನು ಭೇಟಿಯ ವೇಳೆ ಪ್ರಸ್ತಾಪಿಸಿದ ಬೇಳೂರು ಅವರು ಒರ್ವ ಮಾಜಿ ಶಾಸಕರಿಗೆ ಇಂತಹ ಅನ್ಯಾಯ ಆಗಬಾರದಿತ್ತು. ಮಾಜಿ ಶಾಸಕರಿಗೆ ಈ ರೀತಿ ಸತಾಯಿಸಿದ ಅಧಿಕಾರಿ ಸಾಮಾನ್ಯ ಜನರಿಗೆ ಯಾವ ರೀತಿಯಲ್ಲಿ ಸಮಸ್ಯೆ ಮಾಡಬಹುದು. ಅಂತಹ ಅಧಿಕಾರಿಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು ಎಂದು ತಿಳಿದು ಬಂದಿದೆ.
ರಘುಪತಿ ಭಟ್ ಅವರ ಪ್ರಸ್ತುತ ರಾಜಕೀಯ ಜೀವನದ ಕುರಿತು ಪ್ರಸ್ತಾಪಿಸಿ ಬೆಳೂರು ಅವರು ತಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಶಾಸಕನಾಗಿ ಖುಷಿಯಾಗಿರುವೆ ಎಂದು ಪರೋಕ್ಷವಾಗಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದ್ದು ಬೆಳೂರು ಅವರ ಆಹ್ವಾನಕ್ಕೆ ರಘುಪತಿ ಭಟ್ ಅವರು ಕೇವಲ ನಕ್ಕು ಸುಮ್ಮನಾಗಿದ್ದಾರೆ ಎನ್ನಲಾಗಿದೆ.













