ಪರಶುರಾಮ ಥೀಮ್ಪಾರ್ಕ್ನ ತಾಮ್ರದ ಹೊದಿಕೆ ಕಳವು: ಪ್ರಕರಣ ದಾಖಲು
ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್ಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ತಾಮ್ರದ ಹೊದಿಕೆಯನ್ನು ಕಳವು ಮಾಡಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲೂರಿನ ಪರಶುರಾಮ ಥೀಮ್ ಪಾರ್ಕ್ನ ಮುಖ್ಯ ದ್ವಾರವನ್ನು ಆಯುಧದಿಂದ ಮೀಟಿ ಬಾಗಿಲನ್ನು ಒಡೆದು, ಒಳನುಗ್ಗಿದ ಕಳ್ಳರು, ಇಲ್ಲಿನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳ್ಳತನ ಮಾಡಿದ್ದಾರೆಂದು ದೂರಲಾಗಿದೆ.
ಜ.3ರಂದು ಸಂಜೆ ವೇಳೆ ಪಾರ್ಕ್ನ ಮಾಜಿ ಕವಾಲುಗಾರ ಬೈಲೂರಿನ ಸಂತೋಷ್, ಈ ವಿಷಯವನ್ನು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಠಾಣಾ ಉಪನಿರೀಕ್ಷಕ ಶಿವಕುಮಾರ್ ಎಸ್.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಸೋಕೋ ತಂಡ ಆಗಮಿಸಿ ಘಟನಾ ಸ್ಥಳದಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.













