ಈದುಲ್ ಫಿತ್ರ್ ಶಾಂತಿ, ಸೌಹಾರ್ದತೆಯ ಹಬ್ಬ: ಉಡುಪಿ ಜಿಲ್ಲಾ ಖಾಝಿ ಮಾಣಿ ಉಸ್ತಾದ್
ಉಡುಪಿ: ಪವಿತ್ರ ರಂಝಾನ್ ತಿಂಗಳಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.
ಪವಿತ್ರ ರಂಝಾನ್ ಮಾಸದಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ.
ಹಸಿದವರಿಗೆ ಉಣಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ‘ಫಿತ್ರ್ ಝಕಾತ್’ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ.
ನೆರೆಹೊರೆಯವರೊಂದಿಗೆ, ಅನ್ಯಧರ್ಮೀಯ ಬಾಂಧವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಅನಾಚಾರ ಅಥವಾ ದುಂದುವೆಚ್ಚಗಳಿಗೆ ಅವಕಾಶ ನೀಡದೆ, ಶರೀಅತ್ ಚೌಕಟ್ಟಿನೊಳಗೆ ಸಂಭ್ರಮಿಸಬೇಕು.
ರಂಝಾನ್ ನಮಗೆ ಕಲಿಸಿದ ತಾಳ್ಮೆ ಮತ್ತು ದೈವಭಕ್ತಿ ನಮ್ಮ ಮುಂದಿನ ಜೀವನದ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಲ್ಲಾಹನು ಬರಕತ್ ನೀಡಲಿ.”
“ಈದ್ ಹಬ್ಬದ ಪವಿತ್ರ ಸಂದೇಶವು ಜಾಗತಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಶಾಶ್ವತ ಶಾಂತಿಗೆ ಪ್ರೇರಣೆಯಾಗಲಿ.”
ಈ ಸುದಿನದಂದು ಜಗತ್ತಿನಾದ್ಯಂತ ನಡೆಯುತ್ತಿರುವ ಅಶಾಂತಿ, ಯುದ್ಧ ಮತ್ತು ರೋಗರುಜಿನಗಳು ದೂರವಾಗಲಿ ಎಂದು ಪ್ರಾರ್ಥಿಸೋಣ. ನಮ್ಮ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಹೋದರತೆ ನೆಲೆಸಲಿ. ರಂಝಾನ್ ತಿಂಗಳಲ್ಲಿ ನಾವು ರೂಢಿಸಿಕೊಂಡ ಶಿಸ್ತು ಮತ್ತು ಸತ್ಕರ್ಮಗಳು ವರ್ಷದ ಉಳಿದ ದಿನಗಳಲ್ಲೂ ನಮ್ಮ ಜೀವನದ ಭಾಗವಾಗಲಿ. ಪ್ರೀತಿ ಹಂಚೋಣ, ದ್ವೇಷ ಅಳಿಸೋಣ. ಎಲ್ಲಾ ನಾಡಬಾಂಧವರಿಗೂ ಈದುಲ್-ಫಿರ್ತ ಹಬ್ಬದ ಹೃದಯಸ್ಪರ್ಶಿ ಶುಭಾಶಯಗಳು ಎಂದು ಅವರು ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.













