ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮಗಳು : ವಂ|ಡೆನಿಸ್ ಡೆಸಾ
ಮಲ್ಪೆ: ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮಗಳಾಗಿದ್ದು ಒಟ್ಟಾಗಿ ಆಚರಿಸಿದಾಗ ಪರಸ್ಪರ ಸೌಹಾರ್ದತೆಯನ್ನು ಸಾರುತ್ತವೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.


ಅವರು ಮಂಗಳವಾರ ಸಂಜೆ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆಯ ವತಿಯಿಂದ ಮಲ್ಪೆ ಚಿಲ್ಲಿಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಈದ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆ, ಉಪವಾಸ, ದಾನಧರ್ಮ ಪ್ರಮುಖವಾಗಿ ಕಾಣಸಿಗುವ ವಿಷಯವಾಗಿದ್ದು ಇತರ ಧರ್ಮಗಳಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣುತ್ತೇವೆ. ಉಪವಾಸ, ಪ್ರಾರ್ಥನೆಯ ಮೂಲಕ ದೇಹದ ಶುದ್ದಿ, ಮಾನಸಿಕ ಹಾಗೂ ಆಧ್ಯಾತ್ಮಿಕ ಪರಿವರ್ತನೆಗೆ ಕಾರಣವಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಸಕಾರತ್ಮಕ ಆಲೋಚನೆಗಳನ್ನು ಮಾಡಲು ಹಬ್ಬದ ಸಮಯದಲ್ಲಿ ಸೂಕ್ತ ಅವಕಾಶವಾಗಿದೆ ಎಂದರು.

ಈದ್ ಸಂದೇಶ ನೀಡಿದ ಮಣಿಪಾಲ ಎಂ ಐಟಿ ಅಸೋಸಿಯೇಟ್ ಪ್ರೊಫೇಸರ್ ಜಮಾಲುದ್ದೀನ್ ಹಿಂದಿ ಮಾತನಾಡಿ ಈದ್ ಸಾರ್ವತ್ರಿಕ ಹಬ್ಬವಾಗಿದ್ದು, ಈ ವೇಳೆ ಮಾನವ ಮತ್ತು ಸೃಷ್ಟಿಕರ್ತನ ನಡುವಿನ ಸಂಬಂದ ಮತ್ತು ಸೃಷ್ಟಿಗಳೊಂದಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸುವ ಸಮಯವಾಗಿದೆ. ರಮ್ಜಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ನೆರೆಹೊರೆಯವರು ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ಸ್ಪಷ್ಟ ಸಂದೇಶವಿದೆ. ನಮ್ಮ ಆಚರಣೆಗಳು ಇತರರೊಂದಿಗೆ ಹಂಚಿಕೊಂಡಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಮಲ್ಪೆ ಸಿಎಸ್ ಐ ಚರ್ಚಿನ ಧರ್ಮಗುರು ವಂ|ವಿನಯ್ ಸಂದೇಶ್ ಹಬ್ಬದ ಸಂದೇಶ ನೀಡಿದರು.
ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕರಾದ ಅಬ್ದುಲ್ ಅಝೀಜ್, ಸ್ಥಾನೀಯ ಸಂಚಾಲಕರಾದ ಅಬ್ದುಲ್ ರೆಹಮಾನ್ ಹಾಗೂ ಇತರರು ಉಪಸ್ಥಿತರಿದ್ದರು.
ಸಫ್ವಾನ್ ಪ್ರಾರ್ಥನೆ ನೆರವೇರಿಸಿ, ಶಬೀರ್ ಮಲ್ಪೆ ವಂದಿಸಿದರು. ಶೊಯೆಬ್ ಅಹ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.












