ವಿಜಯ ವೀರ ಸಂಘದಿಂದ ಉಚಿತ ರೇಬಿಸ್ ಲಸಿಕಾ ಶಿಬಿರ; 100ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿಗೆ ಲಸಿಕೆ

Spread the love

ವಿಜಯ ವೀರ ಸಂಘದಿಂದ ಉಚಿತ ರೇಬಿಸ್ ಲಸಿಕಾ ಶಿಬಿರ; 100ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿಗೆ ಲಸಿಕೆ

ಉಡುಪಿ: ವಿಜಯ ವೀರ ಸಂಘ, ಚಿಟ್ಪಾಡಿ-ಬೈಲೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿಗಳು, ಬೀದಿ ನಾಯಿಗಳು ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರವು ಭಾನುವಾರ ವಿಜಯ ವೀರ ಸಂಘದ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಶಿಬಿರವನ್ನು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಪಶು ಸಂಗೋಪನಾ ಇಲಾಖೆಯ ಡಾ. ಬಾಬಣ್ಣ ಪೂಜಾರಿ, ಡಾ. ಪ್ರಶಾಂತ್ ಶೆಟ್ಟಿ, ಡಾ. ರೆಡ್ಡಪ್ಪ ಹಾಗೂ ವಿಜಯ ವೀರ ಸಂಘದ ಅಧ್ಯಕ್ಷ ಡೆನ್ನೀಸ್ ಡಿ’ಸೋಜಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಜಯ ವೀರ ಸಂಘದ ಗೌರವಾಧ್ಯಕ್ಷ ಚಂದ್ರಮೋಹನ್ ಚಿಟ್ಪಾಡಿ, ಉಪಾಧ್ಯಕ್ಷರಾದ ಗುರುಪ್ರಸಾದ್ ಪೂಜಾರಿ ಮತ್ತು ನಿರಂಜನ್ ಬೇಕಲ್, ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ, ಕಲಾ ಕಾರ್ಯದರ್ಶಿ ಮೈಕಲ್ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿಗಳಾದ ಪ್ರೀತಮ್ ಹಾಗೂ ಶೆಲ್ಡನ್, ಗೌರವ ಸಲಹೆಗಾರರು ಮತ್ತು ಸಂಘದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಸಿಬ್ಬಂದಿ, ಸ್ಥಳೀಯ ನಾಗರಿಕರು ಹಾಗೂ ಶ್ವಾನ ಪ್ರಿಯರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಚಿಟ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 100ಕ್ಕೂ ಅಧಿಕ ಬೀದಿ ನಾಯಿಗಳು, ಸಾಕು ನಾಯಿಗಳು ಹಾಗೂ ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು. ಅಲ್ಲದೆ, ಸಂಘದ ಕಾರ್ಯಕರ್ತರು ಹಾಗೂ ಪಶುವೈದ್ಯಕೀಯ ಸಿಬ್ಬಂದಿ ಕೆಲವು ಮನೆಗಳಿಗೆ ತೆರಳಿ ಸಾಕು ಪ್ರಾಣಿಗಳಿಗೂ ಲಸಿಕೆ ಹಾಕುವ ಮೂಲಕ ಜನರಿಂದ ಮೆಚ್ಚುಗೆ ಪಡೆದರು.

ಸಮಾಜದಲ್ಲಿ ರೇಬಿಸ್ ಕುರಿತು ಜಾಗೃತಿ ಮೂಡಿಸುವ ಹಾಗೂ ಪ್ರಾಣಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಆಯೋಜಿಸಿದ್ದ ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.


Spread the love
Subscribe
Notify of

0 Comments