ಮಾ.23 ರಿಂದ 27 ರವರೆಗೆ ಶ್ರೀ ಗುಡೇ ಮಹಾಲಿಂಗೇಶ್ವರ ನೂತನ ರಾಜಗೋಪುರ ಸಮರ್ಪಣಾ ಕಾರ್ಯಕ್ರಮ
ಬೈಂದೂರು: ತಾಲ್ಲೂಕಿನ ಹೆರಂಜಾಲು ಗ್ರಾಮದ ಇತಿಹಾಸ ಹಾಗೂ ಪೌರಾಣಿಕ ಪ್ರಸಿದ್ಧವಾದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ರಾಜಗೋಪುರ ನಿರ್ಮಿಸಲಾಗಿದ್ದು, ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಮಾ.23 ರಿಂದ 27 ರವರೆಗೆ ಶ್ರೀ ಕ್ಷೇತ್ರದಲ್ಲಿ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ ಘಟಪ್ರಭಾ ಹೇಳಿದರು.

ಈ ಕುರಿತು ಭಾನುವಾರ ಹೆರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ನಮ್ಮ ಕುಟುಂಬಿಕರು ಸೇವಾರೂಪದಲ್ಲಿ ಕಟ್ಟಿಸಿಕೊಟ್ಟ ಶಿಲಾಮಯ ನೂತನ ರಾಜಗೋಪುರದ ಸಮರ್ಪಣಾ ಕಾರ್ಯಕ್ರಮದ ಜತೆಯಲ್ಲಿ ಕ್ಷೇತ್ರದ ಭಕ್ತರ ಸಹಕಾರದಿಂದ ನಿರ್ಮಿಸಲಾದ ನೂತನ ಹೊರ ಹೆಬ್ಬಾಗಿಲನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ಇದರೊಂದಿಗೆ ನೂತನ ಧ್ವಜಸ್ತಂಭ ಪ್ರತಿಷ್ಠೆ, ಮಹಾಬಲಿ ಪೀಠ, ಕ್ಷೇತ್ರಪಾಲ, ಸ್ವರ್ಣ ಶಿಖರ ಪ್ರತಿಷ್ಠೆ, ಯಾಗ ಶಾಲಾ ಹಾಗೂ ಭೋಜನಾ ಶಾಲೆಯ ಉದ್ಘಾಟನೆಗಳು ನಡೆಯಲಿದೆ ಎಂದರು.
ಮಾ.23 ರಂದು ಹೊರೆ ಕಾಣಿಕೆ ಸಮರ್ಪಣೆ. ಮಾ.24 ರಂದು ಅರಿರುದ್ರ ಮಹಾಯಾಗದ ಪ್ರಧಾನ ಸಂಕಲ್ಪ, ರುದ್ರ ಪಠಣ ಆರಂಭ. ಮಾ.25 ರಂದು ಬೆಳಿಗ್ಗೆ, ಧ್ವಜ ಪ್ರತಿಷ್ಠೆ ಮಹಾಬಲಿ ಪೀಠ, ಕ್ಷೇತ್ರಪಾಲ, ಸ್ವರ್ಣ ಶಿಖರ ಪ್ರತಿಷ್ಠೆ, ಕಲಾಹೋಮ ಮಹಾಪೂಜೆ, ಸಂಜೆ ರಂಗ ಪೂಜೆ, 108 ಕಲಶ ಸ್ಥಾಪನೆ, ಸಂಜೆ 7.30 ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಮಂಗಳೂರು ತಂಡದವರಿಂದ’ ಕೊಲ್ಲೂರು ಶ್ರೀ ಮೂಕಾಂಬಿಕಾ ಒಂದು ನೃತ್ಯ ಗಾಥೆ ಹಾಗೂ ಇತರ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.
ಮಾ.26 ರಂದು ಗುರುವಾರ ಬೆಳಿಗೆ, 11.32 ಕೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರು ನೂತನ ಮಹಾರಾಜಗೋಪುರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯ ಮುಜಾರಾಯಿ ಸಚಿವ ಆರ್.ರಾಮಲಿಂಗ ರೆಡ್ಡಿ ಅವರು ನೂತನ ಹೆಬ್ಬಾಗಿಲು ಸಮರ್ಪಣೆ ಮಾಡಲಿದ್ದಾರೆ. ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳರ್ ದೇವಳದ ಧ್ವಜಸ್ತಂಭ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳೆ ಅವರು ಯಾಗಿ ಶಾಲೆ ಸಮರ್ಪಣೆ ಮಾಡಲಿದ್ದಾರೆ. ನಂತರ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶಾಸಕ ಗುರುರಾಜ್ ಗಂಟಿಹೊಳೆ ವಹಿಸಲಿದ್ದಾರೆ. ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರುಗಳಾದ ಕೆ.ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದ್ಯಮಿ ಕಿಶೋರಕುಮಾರ ಹೆಗ್ಡೆ ಅವರುಗಳು ಭಾಗವಹಿಸಲಿದ್ದಾರೆ. ಸಂಜೆ 7 ಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರು ಕುಳಾಯಿಯ ಕಲಾ ಕುಂಭ ನಾಟಕ ತಂಡದವರಿಂದ ಭಕ್ತಿ ಪ್ರಧಾನ ಕನ್ನಡ ನಾಟಕ ‘ಪರಮಾತ್ಮ ವಂಜುರ್ಲಿ ‘ಪ್ರದರ್ಶನ ನಡೆಯಲಿದೆ
ಮಾ.27 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಸ್ಮ. ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವರಾದ ವಿ.ಸುನೀಲ್ ಕುಮಾರ, ಶಾಸಕರಾದ ಎ.ಕಿರಣ್ ಕುಮಾರ ಕೊಡ್ಲಿ ಮಾಜಿ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ಗಣ್ಯರಾದ ಆನಂದಸಿ ಕುಂದರ್, ಗುರುರಾಜ್ ಭಟ್, ಧರ್ಮರಾಜ್ ಜೈನ್, ಉದ್ಯಮಿ ಕುಶಲ್ ಶೆಟ್ಟಿ ಹಾಗೂ ಕಾಲ್ಲೋಡು ಶ್ರೀ ಮಹಾಲಸ ಮಾರಿಕಾಂಬ ದೇವಸ್ಥಾನದ ಅರ್ಚಕ ರಾಮಯ್ಯ ಉಪಸ್ಥಿತರಿರಲಿದ್ದಾರೆ. ಧಾರ್ಮಿಕ ಕ್ಷೇತ್ರದ ಪ್ರಮುಖರಾದ ಕಟ್ಟೆ ಶಂಕರ ಭಟ್ ನವೀಲುಗೋಣ ಹಾಗೂ ವಾಸ್ತುತಜ್ಞ ಸುಬ್ರಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ರಾತ್ರಿ 7 ರಿಂದ ಸನ್ಮಾನ ಕಾರ್ಯಕ್ರಮ. 8 ಕ್ಕೆ ಶ್ರೀ ಕ್ಷೇತ್ರ ಸಾಲಿಗ್ರಾಮ ಯಕ್ಷಗಾನ ಮೇಳದವರಿಂದ ನಂದೀಶ್ ಶೆಟ್ಟಿ ಬಿಲ್ಲಾಡಿ ಅವರ ರಚನೆಯ ‘ ಗುಡೇ ಮಹಾಲಿಂಗೇಶ್ವರ ಮಹಾತ್ಮ ‘ನೂತನ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮಗಳು ಸಾಂಗವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಊರ ಪ್ರಮುಖರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಸಾವಿರಾರು ಭಕ್ತಧಿಗಳು ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕಾಗಿ ಬರುವ ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ ಹೆಚ್.ಜಯಶೀಲ ಶೆಟ್ಟಿ ಘಟಪ್ರಭಾ, ಆಡಳಿತ ಸಮಿತಿ ಅಧ್ಯಕ್ಷ ಪದ್ಮನಾಭ ಮೇರ್ಟ್, ಖಜಾಂಜಿ ಹೆಚ್.ವಿಜಯ್ ಶೆಟ್ಟಿ ಕಾಲೋಡು, ಅರ್ಚಕ ಮಂಜುನಾಥ ಅಡಿಗ, ಗ್ರಾ. ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಸುಧಾಕರ ಶೆಟ್ಟಿ ಇದ್ದರು.













