ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ; ವನ ಮಹೋತ್ಸವ ಕಾರ್ಯಕ್ರಮ
ಪಟ್ಲ: ರೂರಲ್ ಎಜುಕೇಶನ್ ಸೊಸೈಟಿ (ರಿ.), ಪಟ್ಲ ಇದರ 50ನೇ ವರ್ಷದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ವನ ಮಹೋತ್ಸವ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರೂರಲ್ ಎಜುಕೇಶನ್ ಸೊಸೈಟಿಯ ನೂತನ ಅಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್ ಚಾಲನೆ ನೀಡಿ, ವರ್ಷವಿಡೀ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸುವರ್ಣ ಮಹೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವೆಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಪ್ರಾಂತ ಪರಿಸರ ಗತವಿಧಿ ಸಹ ಸಂಯೋಜಕ ಪಿ. ಚಂದ್ರಹಾಸ ಅವರು ಸುವರ್ಣ ಮಹೋತ್ಸವಕ್ಕೆ ಶುಭ ಹಾರೈಸಿ, ಪರಿಸರ ಸಂರಕ್ಷಣೆ, ಜೀವಜಲ ಮತ್ತು ಮಣ್ಣಿನ ಸಂರಕ್ಷಣೆಯ ಮಹತ್ವದ ಕುರಿತು ವಿವರಿಸಿದರು. ಬಳಿಕ ಶಾಲಾ ಆವರಣದಲ್ಲಿ ಗಿಡ ನೆಟ್ಟು ಸಂಭ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಹಿರಿಯಡ್ಕ–ಪೆರ್ಡೂರು ವಿಭಾಗದ ಆರ್ಎಫ್ಒ ಅನುಷಾ ಭಟ್ ಭಾಗವಹಿಸಿ, ಪರಿಸರ ಸಂರಕ್ಷಣೆ ಹಾಗೂ ಅದರ ಅಗತ್ಯತೆಯ ಕುರಿತು ಮಾಹಿತಿ ನೀಡಿದರು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಉಪಸ್ಥಿತರಿದ್ದರು.
ರೂರಲ್ ಎಜುಕೇಶನ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಸಮೂಹ ಸಂಸ್ಥೆಗಳ ಶಾಲಾ ಸಂಚಾಲಕರಾದ ಡಾ. ಕೆ. ನಾರಾಯಣ ಶೆಣೈ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಾಂತಪ್ಪ ಮೂಲಂಗಿ ವಂದಿಸಿದರು. ಶಾಲಾ ಮಾತಾಜಿಯರಾದ ಕುಮಾರಿ ವರ್ಣಶ್ರೀ ಹಾಗೂ ಶ್ರೀಮತಿ ವಿಜೇತಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಠಾರದಲ್ಲಿ ಗುಡ್ ಮಾರ್ನಿಂಗ್ ಪಟ್ಲ ಸಂಸ್ಥೆಯ ಸಹಕಾರದೊಂದಿಗೆ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಕೇತನ್ ಬಿ. ಅವರ ಮಾರ್ಗದರ್ಶನದಲ್ಲಿ ನೂರಾರು ಉಪಯುಕ್ತ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಆಡಳಿತ ಮಂಡಳಿಯ ಸದಸ್ಯರು, ಊರಿನ ಗಣ್ಯರು, ಸಮೂಹ ಸಂಸ್ಥೆಗಳ ಗುರುಜಿ–ಮಾತಾಜಿಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.













