ಕುಂದಾಪುರ| ಕೊರಗ ಸಮುದಾಯದ ವ್ಯಕ್ತಿಯನ್ನು ಜೀತಕ್ಕೆ ದುಡಿಸಿ ದೌರ್ಜನ್ಯ ಆರೋಪ: ಆರೋಪಿ ಮಹಿಳೆ ಬಂಧನ
ಕುಂದಾಪುರ: ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಸುಮಾರು 30 ವರ್ಷಗಳಿಂದ ಜೀತದಾಳಾಗಿ ದುಡಿಸಿಕೊಂಡಿರುವ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮಾಹಿತಿಯ ಪ್ರಕಾರ, ನಾಗ (65), ತಂದೆ ಹಾವಳಿ, ಕಬ್ಬೈಲು ಉಳಿಯಾರ ಮನೆ, ಕನ್ಯಾನ ಗ್ರಾಮ ನಿವಾಸಿಯಾಗಿದ್ದು, ಅವರು ಕೊರಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ @ ಶಾನಪ್ಪ ಶೆಟ್ಟಿ ಅವರು ಅವರನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು.
ಸುಬ್ಬಣ್ಣ ಶೆಟ್ಟಿ ಅವರ ನಿಧನದ ನಂತರ ಅವರ ಮಗಳು ರಜನಿ ಶೆಟ್ಟಿ ಹಾಗೂ ಅಳಿಯ ಕರುಣಾಕರ ಶೆಟ್ಟಿ ಅವರು ನಾಗ ಅವರನ್ನು ಮನೆಯಲ್ಲಿ ದನ ಕಾಯುವ ಕೆಲಸ, ತೋಟದ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪಿರ್ಯಾದಿದಾರರಿಂದ ದನ ಹಾಗೂ ಎಮ್ಮೆ ನೋಡಿಕೊಳ್ಳುವುದು, ಸಗಣಿ ತೆಗೆದು ಗದ್ದೆ ಕೆಲಸ ಮಾಡುವುದು, ಮನೆಯ ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿಸಿಕೊಂಡು ಸರಿಯಾದ ಕೂಲಿ ನೀಡದೆ, ಮೂಲಭೂತ ಸೌಕರ್ಯಗಳನ್ನೂ ಒದಗಿಸದೇ ದನದ ಕೊಟ್ಟಿಗೆಯಲ್ಲೇ ಮಲಗಲು ವ್ಯವಸ್ಥೆ ಮಾಡಿದ್ದಾಗಿ ಆರೋಪಿಸಲಾಗಿದೆ.
ನಾಗ ಅವರಿಗೆ ವಾಸಸ್ಥಳವನ್ನು ದನದ ಕೊಟ್ಟಿಗೆಯಲ್ಲೇ ನೀಡಿ, ಊಟವನ್ನು ಸಹ ಬಾಳೆ ಎಲೆಯಲ್ಲಿ ಅಲ್ಲಿ ನೀಡುತ್ತಿದ್ದರೆಂದು ಹಾಗೂ ಮನೆಯ ಹೊರಗೆ ಹೋಗಲು ಅವಕಾಶ ನೀಡದೇ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಿರ್ಯಾದಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದರಿಂದ ಇದು ದಲಿತ ದೌರ್ಜನ್ಯಕ್ಕೂ ಸೇರಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರು ಆರೋಪಿತೆಯಾದ ರಜನಿ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಸ್ತುತ ಆರೋಪಿತೆಯನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಕುಂದಾಪುರ ಉಪ ತಹಶೀಲ್ದಾರ್, ಗ್ರಾಮ ಆಡಳಿತ ಅಧಿಕಾರಿ ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಲ್ಲದೆ, ನೊಂದ ವ್ಯಕ್ತಿ ನಾಗ ಅವರೊಂದಿಗೆ ಅಧಿಕಾರಿಗಳು ವಿಚಾರಣೆ ನಡೆಸಿ ಅವರಿಗೆ ಮುಂದಿನ ಪುನರ್ವಸತಿ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.













