ಕುಂದಾಪುರ ಗ್ರಾ. ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ
ಉಡುಪಿ: ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತು
ಭಾನುವಾರ ಬೆಳಿಗ್ಗೆ ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಪಾಲ್ಗೊಂಡಿದ್ದರು.
ಮ್ಯಾರಾಥಾನ್ ಓಟದಲ್ಲಿ ಒಡುವಾಗ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅದಾಗಲೇ ಅವರು ನಿಧನ ಹೊಂದಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮೂಲತಃ ಚಿಕ್ಕಮಗಳೂರಿನ ಮೂಡುಗೆರೆಯ ನಿವಾಸಿಯಾಗಿರುವ ನಾಸೀರ್ ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಕುಂದಾಪುರ, ಬೈಂದೂರು, ಕೊಲ್ಲೂರು, ಶಂಕರನಾರಾಯಣದಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾರತೀಯ ಸೇನೆಯಿಂದ ಪೊಲೀಸ್ ವೃತ್ತಿಗೆ ಸೇರ್ಪಡೆಗೊಂಡಿದ್ದ ನಾಸಿರ್ ಹುಸೇನ್ ಜನಸ್ನೇಹಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಠಾಣೆಗಳಲ್ಲೆಲ್ಲಾ ಜನ ಮೆಚ್ಚುಗೆ ಗಳಿಸಿದ್ದರು.













