ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025–28ನೇ ಸಾಲಿನ ನೂತನ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ಉಡುಪಿ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಸಂಘದ 2021–25ನೇ ಸಾಲಿನ ಲೆಕ್ಕಚಾರವನ್ನು ನಿಕಟಪೂರ್ವ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಸಭೆಗೆ ಮಂಡಿಸಿದರು. ಈ ಅವಧಿಯಲ್ಲಿ ಉಳಿಸಿದ 77,323 ರೂ. ನಗದು ಹಣವನ್ನು ನೂತನ ಕೋಶಾಧಿಕಾರಿ ಹರೀಶ್ ಕುಂದರ್ ಅವರಿಗೆ ಹಸ್ತಾಂತರಿಸಲಾಯಿತು.
ಅದೇ ರೀತಿ ರಜತ ಮಹೋತ್ಸವ ಸಮಿತಿಯ 2023–25ನೇ ಸಾಲಿನ ಲೆಕ್ಕಚಾರವನ್ನು ಸಮಿತಿಯ ಕೋಶಾಧಿಕಾರಿಯಾಗಿರುವ ಉಮೇಶ್ ಮಾರ್ಪಳ್ಳಿ ಮಂಡಿಸಿದರು. ರಜತ ಮಹೋತ್ಸವಕ್ಕೆ ಒಟ್ಟು 14,58,277 ರೂ. ಹಣವನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ ಖರ್ಚು ಕಳೆದು ಉಳಿದ 9,98,601 ರೂ. ಹಣವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಾಗಿ ಬಳಕೆ ಮಾಡಲು ನಿರ್ಧರಿಸಲಾಯಿತು. ಲೆಕ್ಕಪರಿಶೋಧಕರಿಂದ ಪರಿಶೋಧಿಸಿದ ಈ ಎರಡೂ ಲೆಕ್ಕಚಾರಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಅಸ್ಟೋ ಮೋಹನ್, ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ, ಪದಾಧಿಕಾರಿಗಳಾದ ಬಾಲಕೃಷ್ಣ ಉಚ್ಚಿಲ, ಪ್ರಮೋದ್ ಸುವರ್ಣ, ರಹೀಂ ಉಜಿರೆ, ರಾಜೇಶ್ ಅಚ್ಲಾಡಿ, ಉದಯ ಮುಂಡ್ಕೂರು, ವಿಜಯ ಆಚಾರ್ಯ, ಪ್ರಭಾಕರ ಆಚಾರ್ಯ, ಮೈಕಲ್ ರೋಡ್ರಿಗಸ್, ಗಣೇಶ್ ಸಾಬರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.












