ಹೆಜಮಾಡಿ ಟೋಲ್ನಲ್ಲಿ ಸ್ಥಳೀಯರಿಗೆ ಆಧಾರ್ ಆಧಾರಿತ ವಿನಾಯಿತಿ ಮುಂದುವರಿಸಲು ರಮೀಝ್ ಹುಸೈನ್ ಆಗ್ರಹ
ಪಡುಬಿದ್ರಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ನಿವಾಸಿಗಳಿಗೆ ಹಿಂದಿನಂತೆ ಆಧಾರ್ ಕಾರ್ಡ್ ಆಧಾರಿತ ಟೋಲ್ ಶುಲ್ಕ ವಿನಾಯಿತಿ ಸೌಲಭ್ಯವನ್ನು ಯಾವುದೇ ತೊಂದರೆಯಿಲ್ಲದೆ ಮುಂದುವರಿಸಬೇಕು ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಜಮಾಡಿ ಹಾಗೂ ನಡ್ಸಾಲು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಟೋಲ್ ಶುಲ್ಕ ವಿನಾಯಿತಿ ಸೌಲಭ್ಯ ಕಲ್ಪಿಸಲಾಗಿದ್ದು, ಈ ಹಿಂದೆ ಆಧಾರ್ ಕಾರ್ಡ್ ತೋರಿಸಿದರೆ ಯಾವುದೇ ಶುಲ್ಕವಿಲ್ಲದೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಆದರೆ ಕಳೆದ ಹತ್ತು ದಿನಗಳಿಂದ ಟೋಲ್ ಸಿಬ್ಬಂದಿ ಸ್ಥಳೀಯರಿಗೆ ಅನಗತ್ಯ ತೊಂದರೆ ನೀಡುತ್ತಿದ್ದು, ವಿನಾಯಿತಿ ಪಡೆಯಲು ವಿವಿಧ ದಾಖಲೆಗಳನ್ನು ಕೇಳುವ ಮೂಲಕ ವಾಹನ ಸವಾರರನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಹಿಂದಿನಂತೆ ಸ್ಥಳೀಯರಿಗೆ ಯಾವುದೇ ತೊಂದರೆಯಿಲ್ಲದೆ ಆಧಾರ್ ಕಾರ್ಡ್ ಆಧಾರಿತ ಟೋಲ್ ವಿನಾಯಿತಿ ಸೌಲಭ್ಯವನ್ನು ಮುಂದುವರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಮೀಝ್ ಹುಸೈನ್ ಒತ್ತಾಯಿಸಿದ್ದಾರೆ.
ಬೇಡಿಕೆಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಹೆಜಮಾಡಿ ಟೋಲ್ ಗೇಟ್ ನಿರ್ವಹಣಾ ಸಂಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.












