ಶಿರ್ವ| ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷ ಪತ್ತೆ; ಪ್ರಕರಣ ದಾಖಲು
ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಭಾಗದ ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ಜೂನ್ 1ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಕಲ್ಲೊಟ್ಟು ಸೇತುವೆಯ ಕೆಳಭಾಗದಲ್ಲಿರುವ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜಾನುವಾರಿನ ತಲೆಬುರುಡೆ ಹಾಗೂ ಕಾಲಿನ ಗೆರಸುಗಳು ಕಂಡುಬಂದಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಕುಮಾರ್ ಹಾಗೂ ಪಿಸಿ ಅರುಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಹೊಳೆಯ ನೀರಿನಲ್ಲಿ ಜಾನುವಾರಿನ ಅವಶೇಷಗಳು ಇರುವುದನ್ನು ದೃಢಪಡಿಸಿಕೊಂಡರು.
ಬಳಿಕ ಕಾಪು ಪಶು ಆಸ್ಪತ್ರೆಯ ಉಪ ನಿರ್ದೇಶಕರು, ಉಡುಪಿ ಜಿಲ್ಲಾ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಹಾಗೂ ಪಂಚ ಸಾಕ್ಷಿದಾರರನ್ನು ಸ್ಥಳಕ್ಕೆ ಕರೆಸಿ ಮಹಜರು ನಡೆಸಲಾಯಿತು. ಪಶು ಸಹಾಯಕ ನಿರ್ದೇಶಕರು ಪರಿಶೀಲಿಸಿದ ವೇಳೆ ಹೊಳೆಯ ದಕ್ಷಿಣ ಭಾಗದ ನೀರಿನಲ್ಲಿ ಜಾನುವಾರಿನ ತಲೆಯ ಮೇಲ್ದವಡೆಯ ಸಂಪೂರ್ಣ ಭಾಗ, ಹಲ್ಲುಗಳು ಹಾಗೂ ಮೂಗಿನ ಭಾಗ ಕಂಡುಬಂದಿದ್ದು, ಅದು ಹಸುವಿನದ್ದಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಇದಲ್ಲದೆ, ಸ್ವಲ್ಪ ದೂರದಲ್ಲಿ ಜಾನುವಾರಿನ ಕಾಲಿನ ಎರಡು ಗೆರಸುಗಳು, ಮಾಂಸದ ತುಣುಕುಗಳು ಹಾಗೂ ಹೊಟ್ಟೆಯ ಒಳಭಾಗದ ಅವಶೇಷಗಳು ಪತ್ತೆಯಾಗಿದ್ದು, ಇವುಗಳೂ ಹಸುವಿನದ್ದಾಗಿರಬಹುದೆಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಯಾರೋ ದುಷ್ಕರ್ಮಿಗಳು ಹಸುವನ್ನು ವಧೆ ಮಾಡಿ ಮಾಂಸ ಮಾಡಿಕೊಂಡು ಅದರ ಅವಶೇಷಗಳನ್ನು ಹೊಳೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಮರಬದ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ.













