ಸೋನಂ ವಾಂಗ್ಚು ಉಪವಾಸ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ – ಸಂಸದ ಕೋಟ

Spread the love

ಸೋನಂ ವಾಂಗ್ಚು ಉಪವಾಸ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ – ಸಂಸದ ಕೋಟ

ಉಡುಪಿ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ ಎಂದು ಲಡಾಖ್ ಹೋರಾಟಗಾರ ಸೋನಂ ವಾಂಗ್ಚು ಅವರ ಉಪವಾಸವನ್ನು ಉಡುಪಿ –ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದನ್ನೇ ಕೆಲವರು ತಮ್ಮ ಖಾಯಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ದೇಶ ಮೊದಲು ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರವಿರೋಧಿಗಳು ಹಾಗೂ ಭಯೋತ್ಪಾದಕರಿಂದ ಸಣ್ಣಪುಟ್ಟ ತೊಂದರೆಗಳು ಎದುರಾಗುವುದು ಸಹಜ. ಇಂತಹ ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ಪ್ರಧಾನಿಗೂ ದೇಶಕ್ಕೂ ಇದೆ ಎಂದು ಹೇಳಿದರು.

ಉಪವಾಸ ನಡೆಸುತ್ತಿರುವವರು ತಮ್ಮ ಸಮಸ್ಯೆಯನ್ನು ಸ್ಪಷ್ಟವಾಗಿ ದೇಶದ ಮುಂದೆ ಹೇಳಬೇಕು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಲು ಸಂಸತ್ತಿನಂತಹ ಪ್ರಜಾಪ್ರಭುತ್ವದ ವೇದಿಕೆ ಲಭ್ಯವಿದೆ. ಪ್ರತಿಯೊಂದು ಧರಣಿಗೂ ಬೆಂಬಲ ಸೂಚಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಡದಿ ಭೂಸ್ವಾಧೀನ ವಿಚಾರದಲ್ಲಿ ರೈತರು ತಮ್ಮ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಪ್ರಧಾನಿ ಮಹಾತ್ಮ ಗಾಂಧಿ ಅವರ ಪ್ರತಿಮೆ ಎದುರು ಧರಣಿ ನಡೆಸುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಚಾರದ ಗಂಭೀರತೆ ಆರಂಭದಲ್ಲಿ ಅರ್ಥವಾಗಿರಲಿಲ್ಲ, ಇದೀಗ ರೈತರ ಭಾವನೆಗಳಿಗೆ ಬೆಲೆ ಕೊಡಬೇಕೆಂಬುದು ತಿಳಿದಿರಬಹುದು ಎಂದು ಹೇಳಿದರು.

ಬಿಡದಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದರೆ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೈಸೂರು ಕಂಬಳ ವಿಚಾರವನ್ನು ಅನಗತ್ಯವಾಗಿ ಬಿಜೆಪಿಯ ಮೇಲೆ ತಿರುಗಿಸಲಾಗಿದೆ ಎಂದು ಆರೋಪಿಸಿದ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಅವಧಿಯಲ್ಲಿ ಕಂಬಳಕ್ಕೆ ಮೊದಲ ಬಾರಿಗೆ ₹5 ಕೋಟಿ ಅನುದಾನ ನೀಡಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಂಬಳದ ಗುರಿಕಾರ ಶಾಂತರಾಮ ಶೆಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಿಜೆಪಿ ನಿರಂತರವಾಗಿ ಕಂಬಳವನ್ನು ಬೆಂಬಲಿಸುತ್ತಲೇ ಬಂದಿದೆ ಎಂದು ಹೇಳಿದರು.

ಮೈಸೂರಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಕಂಬಳ ಆಯೋಜನೆ ಮಾಡುವ ಬದಲು, ಸ್ಥಳೀಯ ರೈತರು, ಕಂಬಳದ ಮಾಲೀಕರು, ಗುರಿಕಾರರು ಹಾಗೂ ಸಂಬಂಧಪಟ್ಟವರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ತನ್ನ ನಿರ್ಧಾರವನ್ನೇ ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕಂಬಳ ನಡೆಸಬಾರದು ಎಂದು ಯಾರೂ ಹೇಳುತ್ತಿಲ್ಲ. ಕಂಬಳಕ್ಕೆ ಶಕ್ತಿ ತುಂಬಿರುವುದು ಬಿಜೆಪಿ ಎಂದು ಹೇಳಿದರು.

ರಾಜ್ಯದ ಬರ ಪರಿಸ್ಥಿತಿ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಬಿಜೆಪಿ ಟೀಕಿಸಿಲ್ಲ, ವಿಮರ್ಶೆ ಮಾಡಿದೆ ಎಂದ ಅವರು, ರಾಜ್ಯದಲ್ಲಿ ಬರಗಾಲ ಇರುವುದನ್ನು ಕೇಂದ್ರ ಸರ್ಕಾರ ಅಧ್ಯಯನ ಮಾಡಬೇಕು. ನೆರವು ಕೇಳುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಆದರೆ ಮೊದಲು ರಾಜ್ಯ ಸರ್ಕಾರ ತಾನು ಎಷ್ಟು ಹಣ ನೀಡಲಿದೆ ಎಂಬುದನ್ನು ಘೋಷಿಸಿ ಬಳಿಕ ಕೇಂದ್ರದ ನೆರವು ಕೋರಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ನೀಡುವ ಮನೆ ಯೋಜನೆಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯೂ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೇಂದ್ರದ ನೆರವು ಕೇಳುವುದರಲ್ಲಿ ತಪ್ಪಿಲ್ಲ, ಆದರೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಳ್ಳಬಾರದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮಾದಕವಸ್ತುಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆತಂಕಕ್ಕೀಡಾಗಿದ್ದಾರೆ. ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಲಬುರಗಿ ಜೈಲಿನಿಂದ ಆರೋಪಿಗಳು ಪರಾರಿಯಾಗುವಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಇಂತಹ ಗಂಭೀರ ಸಮಸ್ಯೆಗಳ ನಡುವೆ ಗೃಹ ಸಚಿವರು ಆರ್ಎಸ್ಎಸ್ ನೋಂದಣಿ ವಿಚಾರದಲ್ಲೇ ತೊಡಗಿಸಿಕೊಂಡಿದ್ದಾರೆ. ಕಾರಾಗೃಹದಿಂದ ಕೈದಿಗಳು ಪರಾರಿಯಾಗುವಾಗ, ರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ಹಾಗೂ ಕೊಲೆಗಳು ನಡೆಯುವಾಗ, ಶಾಲೆಗಳ ಎದುರು ಮಾದಕ ವಸ್ತುಗಳ ಮಾರಾಟ ನಡೆಯುವಾಗ ಅವುಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.


Spread the love
Subscribe
Notify of

0 Comments