ರಾಜ್ಯ ಬಜೆಟ್ ನಲ್ಲಿ ಕರಾವಳಿ ಮೀನುಗಾರಿಕೆ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ : ಯಶ್ಪಾಲ್ ಸುವರ್ಣ

Spread the love

ರಾಜ್ಯ ಬಜೆಟ್ ನಲ್ಲಿ ಕರಾವಳಿ ಮೀನುಗಾರಿಕೆ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ : ಯಶ್ಪಾಲ್ ಸುವರ್ಣ

ಉಡುಪಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಕರಾವಳಿ ಭಾಗದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆ ಅಭಿವೃದ್ಧಿಗೆ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಅನುದಾನ, ಯೋಜನೆಗಳನ್ನು ಘೋಷಣೆ ಮಾಡದೇ ತನ್ನ ದಿವ್ಯ ನಿರ್ಲಕ್ಷ್ಯವನ್ನು ಮುಂದುವರೆಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಕರಾವಳಿ ಭಾಗದ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅನುದಾನ ಮಂಜೂರು ಮಾಡಿಲ್ಲ, ಮೀನುಗಾರಿಕೆ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೀನುಗಾರರ ಬೇಡಿಕೆಯಾದ ಡೀಸೆಲ್ ಸಬ್ಸಿಡಿ ಮಿತಿ ಹೆಚ್ಚಳ, ಮೀನುಗಾರಿಕೆ ಸಂಬಂಧಿತ ಕೈಗಾರಿಕೆಗಳಿಗೆ ಪ್ರೋತ್ಸಾಹ, ಬಂದರುಗಳ ಹೂಳು ತೆರವು, ಮೀನುಗಾರಿಕಾ ಚಟುವಟಿಕೆಗೆ ಶೂನ್ಯ ಬಡ್ಡಿದರದ ಸಾಲ ಯೋಜನೆ, ಮಹಿಳಾ ಮೀನುಗಾರರ ಸಾಲ ಮನ್ನಾ, ಕಡಲ್ಕೊರೆತ ಶಾಶ್ವತ ಪರಿಹಾರ,.ಮೀನುಗಾರಿಕೆ ರಸ್ತೆಗಳ ಅಭಿವೃದ್ಧಿ, ಮತ್ಯಾಶ್ರಯ ವಸತಿ ಯೋಜನೆಯ ಸಹಾಯಧನ 5 ಲಕ್ಷಕ್ಕೆ ಹೆಚ್ಚಳದಂತಹ ಯಾವುದೇ ಬೇಡಿಕೆಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಕ್ರಮ ವಹಿಸಿಲ್ಲ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಸಾಗರಮಾಲಾ ಯೋಜನೆ ಮೂಲಕ ರಾಜ್ಯದ ಮೀನುಗಾರಿಕಾ ಬಂದರು ಹಾಗೂ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ರಾಜ್ಯ ಸರ್ಕಾರ ಪೂರಕ ಸ್ಪಂದನೆ ನೀಡದೆ ಮೀನುಗಾರರ ಬಗ್ಗೆ ಅಸಡ್ಡೆ ಮುಂದುವರೆಸಿದೆ.

ಈ ಬಗ್ಗೆ ಮೀನುಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ತುಟಿ ಬಿಚ್ಚುತ್ತಿಲ್ಲ, ಮಲ್ಪೆ ಬಂದರಿನಲ್ಲಿ ಮೀನುಗಾರರು ಹಗಲಿರುಳು ಶ್ರಮಿಸಿ ತಂದ ಮೀನುಗಳನ್ನು ಕದ್ದ ಕಳ್ಳರ ಪರವಾಗಿ ಪ್ರತಿಭಟನೆ ನಡೆಸುವ ಸಂಘಟನೆಯ ಮುಖಂಡರು ಯಾವುದೇ ಚಕಾರ ಎತ್ತುತ್ತಿಲ್ಲ.

ಕರಾವಳಿ ಮೀನುಗಾರರ ಬೇಡಿಕೆಯನ್ನು ಕಡೆಗಣಿಸಿ ತಾಳ್ಮೆ ಪರೀಕ್ಷಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ಹೇಳಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments