ಸರ್ಕಾರ ಕೃಷಿಗೆ ಹೊಸ ಪಠ್ಯವನ್ನು ಮಾಡಿ ಪ್ರೋತ್ಸಾಹಿಸಲಿ : ಸತ್ಯನಾರಾಯಣ ಬೆಳೇರಿ
ಹೆಬ್ರಿ : ಕೃಷಿ ನಮ್ಮ ಅನ್ನದ ಭಾಗ್ಯ, ಕೃಷಿ ಬಿಟ್ಟರೆ ಜೀವನವೇ ಇಲ್ಲ, ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಹೊಸ ಸಿಲೇಬಸ್ ಮಾಡಿ ಪ್ರೋತ್ಸಾಹಿಸಲಿ, ಕೃಷಿಗೆ ಗಮನ ನೀಡುವುದು ಮುಂದಿನ ಅಗತ್ಯವಾಗಿದೆ. ನಾವು ವಿವಿಧ ರೀತಿಯಲ್ಲಿ ಹಣವನ್ನು ಗಳಿಸಬಹುದು, ಆದರೆ ಹಣವನ್ನು ತಿನ್ನಲು ಸಾಧ್ಯವಿಲ್ಲ. ಕೃಷಿ ಮಾಡುವುದು ಮುಂದೆ ಅನಿವಾರ್ಯವಾಗಲಿದೆ. ಕೃಷಿಯ ಜೊತೆಗೆ ರೈತರನ್ನು ಪ್ರೋತ್ಸಾಹಿಸುವ ರಾಮಕೃಷ್ಣ ಆಚಾರ್ಯರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಹೇಳಿದರು.

ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಶುಕ್ರವಾರ ನಡೆದ ಕೃಷಿ ಮಂಡಲ – ಕೃಷಿ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ರಾಮಕೃಷ್ಣ ಆಚಾರ್ ಕೃಷಿಗೆ ವಿಶೇಷವಾಗಿ ಆದ್ಯತೆ ನೀಡಿ ರೈತರಿಗೆ “ರೈತಪೀಠ” ಪ್ರಶಸ್ತಿ ನೀಡಿ ಗೌರವಿಸುವುದು ದೇಶವನ್ನು ಗೌರವಿಸಿದಂತೆ, ಇದು ಇನ್ನಷ್ಟು ಪ್ರೇರಣೆ ನೀಡಿದಂತೆ ಆಗುತ್ತದೆ ಎಂದು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಹೇಳಿದರು.
ಪ್ರಥಮ ಕೃಷಿ ವಿಚಾರ ಗೋಷ್ಠಿಯಲ್ಲಿ ಕರಾವಳಿಯ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ ನಾಗಮಂಡಲದಲ್ಲಿ ಪ್ರಪ್ರಥಮವಾಗಿ ಕೃಷಿ ವಿಚಾರ – ಕೃಷಿ ಮಂಡಲವನ್ನು ಮಾಡಿಸಿದ ಕೀರ್ತಿ ರಾಮಕೃಷ್ಣ ಆಚಾರ್ಯರಿಗೆ ಸಲ್ಲುತ್ತದೆ. ಈ ನೆಲದ ಎಲ್ಲಾ ಸಂಸ್ಕೃತಿಗೂ ಕೃಷಿಯೇ ಮೂಲ ಸಂಸ್ಕೃತಿ ಆಗಿದೆ. ಯುವಸಮುದಾಯ ಮುಂದೆ ಕೃಷಿಯನ್ನು ಲಾಭದಾಯಕವಾಗಿ ಮಾಡಿ ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ಎಂದರು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋಧರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್, ಜ್ಯೋತಿ ಹರೀಶ್, ಗೋಪಿನಾಥ ಭಟ್ ಮುನಿಯಾಲು, ಸಮಿತಿಯ ಸದಸ್ಯರು,ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ರೈತರನ್ನು ಎಲ್ಲರೂ ಗೌರವಿಸುವ ದಿನಗಳು ಬರಲಿವೆ : ರೈತರನ್ನು ಸರ್ಕಾರಗಳು ಸೇರಿ ಎಲ್ಲರೂ ಕಡೆಗಣಿಸುತ್ತಿದ್ದಾರೆ. ಆದರೆ ಎಲ್ಲರೂ ಸೇರಿ ಗೌರವಿಸುವ ದಿನಗಳು ಹತ್ತಿರದಲ್ಲಿದೆ ಎಂದು ಕೃಷಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಪ್ರಗತಿಪರ ಕೃಷಿಕರಾದ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಹೇಳಿದರು.
ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಿದರು.
ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವದ ಬಗೆಗೆ ಪ್ರಯೋಗಶೀಲ ಕೃಷಿಕ ಮೈರುಗ ಕುರುಡಪದವಿನ ಪ್ರವೀಣ್ ಕೇಶವ್ ಮಾತನಾಡಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಧನಂಜಯ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಣೂತ್ ಆರ್ ಗಾಣಿಗ ನಿರೂಪಿಸಿದರು.
ಭೂತನಾಥ ಪ್ರೀತಿಕರ ಪ್ರತ್ಯಕ್ಷ ಅಶ್ವಪೂಜಾ : ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದ 2ನೇ ದಿನ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಾಂಡ ಯಾಗ, ಭೂತನಾಥ ಪ್ರೀತಿಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ವಿದ್ವಾನ್ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿಯವರ ಮಾರ್ಗದರ್ಶನದಲ್ಲಿ ಎಳ್ಳಾರೆ ವಾಸುದೇವ ಭಟ್ ಸಹಯೋಗದಲ್ಲಿ ನಡೆಯಿತು. ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.












