ಅದ್ದೂರಿಯಾಗಿ ಜರುಗಿದ ಶಿರೂರು ವೇದವರ್ಧನತೀರ್ಥ ಸ್ವಾಮೀಜಿಗಳ ಪುರಪ್ರವೇಶ

Spread the love

ಅದ್ದೂರಿಯಾಗಿ ಜರುಗಿದ ಶಿರೂರು ವೇದವರ್ಧನತೀರ್ಥ ಸ್ವಾಮೀಜಿಗಳ ಪುರಪ್ರವೇಶ

ಉಡುಪಿ: ಪ್ರಥಮ ಬಾರಿಗೆ ಶ್ರೀ ಕೃಷ್ಣ ಮಠದ ಸರ್ವಜ್ಞ ಪೀಠವನ್ನೇರಲಿರುವ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರ ಪುರಪ್ರವೇಶ ಅದ್ದೂರಿಯಾಗಿ ಶುಕ್ರವಾರ ಜರುಗಿತು.

ಶೀರೂರು ಮೂಲಮಠದಿಂದ ಶ್ರೀರಾಮಚಂದ್ರ ದೇವರ ಮತ್ತು ಶ್ರೀಮುಖ್ಯಪ್ರಾಣರ ದರ್ಶನ ಮಾಡಿಕೊಂಡು ಹೊರಟು, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವರ ದರ್ಶನ ಮಾಡಿ ಆಗಮಿಸಿದ ಶ್ರೀಗಳು ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಯನ್ನು ವೀಕ್ಷಿಸಿದರು. ಅನಂತರ ದೇವರ ಚಿನ್ನದ ಪಲ್ಲಕ್ಕಿಯ ಮುಂದೆ ಸಾಗಿದ್ದು, ಅದರ ಹಿಂದೆ ವಿಶೇಷ ಸಿಂಗಾರದ ರಥದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಶ್ರೀ ಕೃಷ್ಣ ಮಠದತ್ತ ಕರೆದೊಯ್ಯಲಾಯಿತು.

ವಿವಿಧೆಡೆಗೆಳ ಆಕರ್ಷಕ ಕಲಾತಂಡಗಳು, ವಿವಿಧ ಚಂಡೆ ಬಳಗ, ಭಜನಾ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಡಿಯಾಳಿ, ಕಲ್ಸಂಕ ಮಾರ್ಗವಾಗಿ ಸಿಟಿ ಬಸ್ ನಿಲ್ದಾಣ, ಕಿದಿಯೂರು ಹೋಟೆಲ್ ಮಾರ್ಗವಾಗಿ ಬಸ್ ನಿಲ್ದಾಣದ ಮುಖಾಂತರ ಹನುಮಾನ್ (ತ್ರಿವೇಣಿ) ವೃತ್ತದಿಂದ ಕನಕದಾಸ ರಸ್ತೆ ಮಾರ್ಗವಾಗಿ ರಥ ಬೀದಿಗೆ ಸಾಗಿತು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಗಣ್ಯರಾದ ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ, ಪ್ರದೀಪ್ ಕುಮಾರ್ ಕಲ್ಕೂರ್, ಡಾ. ಹೆಚ್ ಎಸ್ ಬಲ್ಲಾಳ್, ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಕಡಿಯಾಳಿಯಿಂದ ಶ್ರೀ ಕೃಷ್ಣ ಮಠದವರೆಗೆ ಮೆರವಣಿಗೆ ಸಾಗಿದ ವೇಳೆ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ರಸ್ತೆಯ ಎರಡೂ ಅಂಚಲ್ಲಿ ಶಾಲಾ ಮಕ್ಕಳು, ನಾಗರಿಗರು ಸಹಿತ ಸಾವಿರಾರು ಮಂದಿ ಮೆರವಣಿಗೆಯನ್ನು ವೀಕ್ಷಿಸಿದರು.

ಸ್ವಾಮೀಜಿಯವರು ರಥಭೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು ಆ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ಹಾಗೂ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರ ದರ್ಶನ ಮಾಡಿಕೊಂಡು ಉಡುಪಿ ನಗರಸಭೆ ವತಿಯಿಂದ ನಡೆಯಲಿರುವ ಪೌರ ಸಮ್ಮಾನ ವೇದಿಕೆಗೆ ಬಂದು ನಗರಸಭೆ.ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕರಿಂದ ಸಮ್ಮಾನವನ್ನು ಸ್ವೀಕರಿಸಿದರು.

ಪ್ರತಿ ಪುರಪ್ರವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವುದು ವಾಡಿಕೆಯಾಗಿದ್ದು ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ್ಯಾಯ ಕಾರ್ಯಕ್ರಮದ ಪುರಪ್ರವೇಶ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸದೆ ದೂರ ಉಳಿದಿರುವುದು ಕಂಡು ಬಂತು.


Spread the love
Subscribe
Notify of

0 Comments
Inline Feedbacks
View all comments