ಇಎಸ್ಐ ಮಂಗಳೂರು ಉಪ ಪ್ರಾದೇಶಿಕ ಕಚೇರಿ ಸ್ಥಳಾಂತರವಿಲ್ಲ : ನಳಿನ್ಕುಮಾರ್
ಮಂಗಳೂರು : ಇಎಸ್ಐ ಮಂಗಳೂರು ಉಪ ಪ್ರಾದೇಶಿಕ ಕಚೇರಿ ಮುಚ್ಚುಗಡೆಯಾಗುವುದಿಲ್ಲ. ಮಂಗಳೂರು ಕಚೇರಿಯ ವ್ಯವಹಾರಗಳನ್ನು ಬೆಂಗಳೂರು ಕಚೇರಿಗೆ ಸ್ಥಳಾಂತರ ಮಾಡುವ ಪ್ರಸ್ತಾವನೆಯನ್ನು ಕೈಬಿಡುವಂತೆ ಕೇಂದ್ರ ಕಾರ್ಮಿಕ ಇಲಾಖೆ ಇಎಸ್ಐ ನಿಗಮಕ್ಕೆ ಸೂಚಿಸಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇಎಸ್ಐ ಮಂಗಳೂರು ಉಪ ಪ್ರಾದೇಶಿಕ ಕಚೇರಿಯನ್ನು ಮುಚ್ಚುವ ಪ್ರಸ್ತಾವನೆಯಿಂದ ಲಕ್ಷಾಂತರ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದರು. ಕಾರ್ಮಿಕ ಸಂಘಟನೆಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವರನ್ನು ಭೇಟಿಯಾಗಿ
ಯಾವುದೇ ಕಾರಣಕ್ಕೂ ಮಂಗಳೂರು ಕಚೇರಿಯನ್ನು ಮುಚ್ಚದಂತೆ ಮನವರಿಕೆ ಮಾಡಿದ್ದೆ. ಇದೀಗ ಕೇಂದ್ರ ಕಾರ್ಮಿಕ ಸಚಿವಾಲಯ ಮನವಿಗೆ ಸ್ಪಂದಿಸಿದ ಪರಿಣಾಮ ಉಪ ಪ್ರಾದೇಶಿಕ ಕಚೇರಿ ಮಂಗಳೂರಿನಲ್ಲಿಯೇ ಉಳಿಯಲಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













